ಕಾರ್ಯಕ್ರಮವು ಕನ್ನಡ ತಾಯಿ ಭುವನೇಶ್ವರಿಯ ಪೂಜೆ ಮತ್ತು ದೀಪ ಪ್ರಜ್ವಲನೆಯೊಂದಿಗೆ ಭಾವಪೂರ್ಣವಾಗಿ ಆರಂಭವಾಯಿತು. ನಂತರ, ನಾಡಗೀತೆಯ ಗಾಯನ ಎಲ್ಲರಲ್ಲೂ ಕನ್ನಡಾಭಿಮಾನ ಮತ್ತು ರೋಮಾಂಚನವನ್ನು ಮೂಡಿಸಿತು. ಪ್ರಾಸ್ತಾವಿಕ ನುಡಿಗಳನ್ನು ಮಂಜುನಾಥ್ ರವರು ನೀಡಿದರು. ಕೋರಿಯಾ ಕನ್ನಡ ಕೂಟ (KKK) ದ ಸಂಸ್ಥಾಪಕರಲ್ಲೊಬ್ಬರಾದ ಯಾದಗಿರಿಯ ನವನೀತ್ ರವರು ಕೋರಿಯಾ ಕನ್ನಡ ಕೂಟ ಉದ್ದೇಶ, ಸಂಘಟನೆಯ ಬೆಳವಣಿಗೆ, ಮತ್ತು ಹಿಂದಿನ ಕನ್ನಡ ಚಟುವಟಿಕೆಗಳ ಕುರಿತು ವಿವರಿಸಿದರು. ನಂತರ, ಮಂಡ್ಯದ ಕಿಶೋರ್ ರವರು ಕೋರಿಯಾ ಕನ್ನಡ ಕೂಟದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯ ಅನುಭವವನ್ನು ಹಂಚಿಕೊಂಡರು.

ಕರ್ನಾಟಕ ಏಕೀಕರಣ ಮತ್ತು ರಾಜ್ಯೋತ್ಸವದ ಮಹತ್ವದ ಕುರಿತು ಸ್ಯಾಮ್ ಸಂಗ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ, ಕಳೆದ 17 ವರ್ಷಗಳಿಂದ ಕೊರಿಯಾದಲ್ಲಿ ವಾಸಿಸುತ್ತಿರುವ ವಿಶ್ವನಾಥ್ ರವರು ತಮ್ಮ ಹೃತ್ಪೂರ್ವಕ ಮಾತುಗಳನ್ನು ಹಂಚಿಕೊಂಡರು. ನಂತರ ಸಭೆಯಲ್ಲಿ ಇದ್ದ ಕನ್ನಡಿಗರಲ್ಲಿನ ಅನೇಕರೂ ತಮ್ಮ ಕನ್ನಡ ಭಾಷೆಯ ಮೇಲೆ ಇರುವ ಪ್ರೀತಿ, ಕನ್ನಡ ಸಂಸ್ಕೃತಿಯನ್ನು ಮುಂದುವರಿಸುವ ಜವಾಬ್ದಾರಿ, ಮತ್ತು ಇದರಲ್ಲಿ ನಮ್ಮ ಪಾತ್ರದ ಕುರಿತು ಸವಿಸ್ತಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದವು. ಕಾರ್ಯಕ್ರಮದ ಅಂತ್ಯದಲ್ಲಿ ಕೊಳ್ಳೇಗಾಲದ ಕೇಶವಾನಂದ ಪ್ರಭು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಕೆ ಅರ್ ಪೇಟೆಯ ಶಿಲ್ಪ ಮತ್ತು ಕೊಟ್ಟೂರಿನ ಸೌಮ್ಯಶ್ರೀ ರವರು ನಿರೂಪಿಸಿದರು.
“ಸಿರಿ ಕನ್ನಡಂ ಗೆಲ್ಗೆ, ಸಿರಿ ಕನ್ನಡಂ ಬಾಳ್ಗೆ” ಎಂಬ ಘೋಷಣೆಗಳೊಂದಿಗೆ ರಾಜ್ಯೋತ್ಸವ ಸಮಾರಂಭವು ಭವ್ಯವಾಗಿ ಮುಕ್ತಾಯವಾಯಿತು.