ಬೆಂಗಳೂರು: ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯ ಸಾರ್ಥಕ 9 ದಶಕಗಳ ರಚನಾತ್ಮಕ ಶೈಕ್ಷಣಿಕ ಸೇವೆಯನ್ನು ಸ್ಮರಿಸುವ, ಶಿಕ್ಷಣ ಮತ್ತು ಸಮಾಜಕ್ಕೆ ಸಂಸ್ಥೆಯು ನೀಡಿದ ಮಾದರಿಯಾದ ಕೊಡುಗೆಯನ್ನು ಸ್ಮರಿಸಲು ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ಬಸವನಗುಡಿಯ ಎನ್.ಆರ್. ಕಾಲೋನಿಯಲ್ಲಿರುವ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವಸ್ತರು, ಗಣ್ಯರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ನಡೆಯಿತು. ಬೆಂಗಳೂರು ಕೇಂದ್ರ ಕಚೇರಿ ವಲಯದ ಅಂಚೆ ಸೇವೆಗಳ ನಿರ್ದೇಶಕರಾದ ವಿ. ತಾರಾ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿಎ ಡಾ. ವಿಷ್ಣು ಭರತ್ ಅಲಂಪಲ್ಲಿ, ಮತ್ತಿತರೆ ಗಣ್ಯರು ಉಪಸ್ತಿತರಿದ್ದರು.
ನಂತರ ಮಾತನಾಡಿದ ಡಾ. ವಿಷ್ಣು ಭರತ್ ಅಲಂಪಲ್ಲಿ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎನ್. ಅನಂತಾಚಾರ್ ಅವರ ದೂರದೃಷ್ಟಿಯ ಕೊಡುಗೆಗಳಿಗೆ ಅರ್ಪಿಸಿದ ಗೌರವ ಇದಾಗಿದೆ. ಅವರ ಪರಂಪರೆಯು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ. ಈ ವಿಶೇಷ ಲಕೋಟೆಯ ಬಿಡುಗಡೆಯು ಅವರ ಶಾಶ್ವತ ಪ್ರಭಾವ ಮತ್ತು ಕಳೆದ ಒಂಬತ್ತು ದಶಕಗಳಲ್ಲಿ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯ ಗಮನಾರ್ಹ ಪ್ರಯಾಣದ ಸ್ಮರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಪಿಎಸ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಅಂಚೆ ಅಧೀಕ್ಷರಾದ ಗಜೇಂದ್ರ ಕುಮಾರ್ ಮೀನಾ ಮತ್ತಿತರರು ಭಾಗವಹಿಸಿದ್ದರು.