ಬೆಂಗಳೂರು : ಬಡವರು, ಶ್ರಮಿಕರು, ಶೋಷಿತರ ಪರವಾಗಿ ನೈಜ ಕಾಳಜಿ ಇರುವವರು ಕಮ್ಯುನಿಸ್ಟರು. ಆದರೆ ಇತ್ತೀಚಿನ ದಿನಗಳಲ್ಲಿ ಎರಡಪಂಥೀಯರ ಬಗ್ಗೆ ಅವಹೇಳನ ಮಾಡುತ್ತಿರುವುದು ಸರಿಯಲ್ಲ ಎಂದು ಪತ್ರಕರ್ತ ಮತ್ತು ನಿರೂಪಕ ವಿ. ನಂಜುಂಡಪ್ಪ.ವಿ ಹೇಳಿದ್ದಾರೆ.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು ಸಾರಿಗೆ ನಿಗಮಗಳ ನೌಕರರ ವಲಯದ ವಿಶ್ವ ಕಾರ್ಮಿಕ ಒಕ್ಕೂಟದಿಂದ ಶ್ರಮಿಕರ ದಿನಾಚರಣೆ ಮತ್ತು ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಹೋರಾಟದಿಂದಲೇ ಕಮ್ಯುನಿಸ್ಟ್ ಚಳವಳಿ ಬೆಳೆದು ಬಂತು. ಒಂದು ಕಾಲದಲ್ಲಿ ಎಡಪಕ್ಷಗಳು ಬೃಹತ್ ಶಕ್ತಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಬಗ್ಗೆ ಧ್ವನಿ ಎತ್ತುವವರಿಲ್ಲದಂತಾಗಿದೆ. ಶ್ರಮ ಶಕ್ತಿ ಕುಂದುತ್ತಿದ್ದು, ಇದು ನಾಗರಿಕ ಸಮಾಜದ ಲಕ್ಷಣವಲ್ಲ ಎಂದರು.

ಕಾರ್ಮಿಕರ ಪರವಾಗಿ ದೇಶಾದ್ಯಂತ ಬೃಹತ್ ಹೋರಾಟಗಳು ನಡೆಯುತ್ತಿತ್ತು. ಇಂದು ಶ್ರಮಿಕರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲವಾಗಿದ್ದು, ಕಾರ್ಮಿಕ ಸಂಘಟನೆಗಳು ಒಗ್ಗೂಡಬೇಕು. ಹೋರಾಟ ಮಾಡದಿದ್ದರೆ ಯಾವುದೇ ಸಮಸ್ಯೆಗಳು ಬಗೆಹರಿಸುವುದಿಲ್ಲ. ಕಾರ್ಮಿಕರನ್ನು ನಿರ್ಲಕ್ಷಿಸುವ ಯಾವುದೇ ದೇಶ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು.
ಕುದುರೆಗೆರೆಯ ನಾರಾಯಣಧಾಮ ಆದಿಚುಂಚನಗಿರಿ ಶಾಖಾ ಮಠದ ಸಾಯಿ ಕೀರ್ತನಾಥ ಸ್ವಾಮೀಜಿ ಅವರು ಮಾಧ್ಯಮ ಶ್ರೀ, ವೈದ್ಯ ಸೇವಾ ರತ್ನ, ಕಾರ್ಮಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಲಾಭದ ದೃಷ್ಟಿ ಇಲ್ಲದೇ ಕೆಲಸ ಮಾಡುವ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳು. ಕಾರ್ಮಿಕರನ್ನು ಸಮಾಜ ಸಕಾರಾತ್ಮಕ ದೃಷ್ಟಿಕೋನದಿಂದ ನೋಡಬೇಕು ಎಂದರು.

ವಿಶ್ವ ಕಾರ್ಮಿಕ ಒಕ್ಕೂಟದ ಅಧ್ಯಕ್ಷ, ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಸಂಸ್ಥಾಪಕ ಅಧ್ಯಕ್ಷ ಜಿ.ಕೆ. ರಾಜೇಂದ್ರ ಗೌಡ, ಪ್ರಧಾನ ಕಾರ್ಯದರ್ಶಿ ಡಿ.ಬಿ. ಗಿರೀಶ್, ಮಹಿಳಾ ಘಟಕದ ಅಧ್ಯಕ್ಷರಾದ ಎಸ್. ಗಾಯತ್ರಿ, ಸಮಾಜ ಸೇವಕ, ಗೋರಕ್ಷಕ ಮಹೇಂದ್ರ ಮನೋತ್, ಹಿರಿಯ ನಟ ಮೂಗು ಸುರೇಶ್, ಹಿರಿಯ ತಜ್ಞ ವೈದ್ಯ ಡಾ.ಟಿ.ಎಚ್. ಆಂಜನಪ್ಪ ಮತ್ತಿತರರು ಉಪಸ್ಥಿತರಿದ್ದರು.