ಬಳ್ಳಾರಿ: ವಿದ್ಯಾರ್ಥಿ ಬದುಕಿನ ಯಶಸ್ಸಿಗೆ ಪತ್ರಿಕೆಗಳು ಪೂರಕವಾಗುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ ತಿಳಿಸಿದರು.
ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕವು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆಯನ್ನು ವಿನ್ಯಾಸಗೊಳಿಸಿ ಮುದ್ರಿಸಿ ಓದುಗರ ಕೈಗಿಡುವ ಹಿಂದೆ ನೂರಾರು ಕೈಗಳ ಶ್ರಮವಿರುತ್ತದೆ. ಒಂದು ಕಾಫಿಗೂ ಕಡಿಮೆ ಖರ್ಚಿ ನಲ್ಲಿ ಇಂದು ನಾವು ದಿನಪತ್ರಿಕೆಗಳನ್ನು ಓದುತ್ತಿದ್ದೇವೆ. ಪತ್ರಿಕಾ ಮಾಧ್ಯಮ ಬಹಳಷ್ಟು ದೊಡ್ಡದಾಗಿ ಬೆಳೆದಿದ್ದು , ಸಾಮಾಜಿಕ ಬದಲಾವಣೆಯಲ್ಲಿ ಮಹತ್ವದ ಪಾತ್ರ ಹೊಂದಿದೆ ಎಂದು ತಿಳಿಸಿದರು.
ಪತ್ರಕರ್ತರಿಗೆ ತಾಳ್ಮೆ ಮತ್ತು ವ್ಯವದಾನ ಬಹಳ ಮುಖ್ಯವಾಗುತ್ತದೆ. ಪ್ರತಿ ಯೊಂದು ವಿಚಾರವನ್ನು ಸಮಾಜ ಮುಖಿಯಾಗಿ ಚಿಂತಿಸಿ ಅದರ ಬದಲಾವಣೆಗೆ ಪತ್ರಕರ್ತ ಪ್ರಯತ್ನಿಸಬೇಕು. ಕೇವಲ ವರದಿಯಿಂದಷ್ಟೆ ಬದಲಾವಣೆಯ ಸಾಧ್ಯವಿಲ್ಲ. ಪತ್ರಿಕೆಗಳು ಬಡವರ ಶೋಷಿತ ವರ್ಗದ ಪರವಾದ ಧ್ವನಿಯಾಗಬೇಕು ಎಂದು ಎಡಿಸಿ ಮೊಹಮ್ಮದ್ ಜುಬೇರ ತಿಳಿಸಿದರು. ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ. ಗಿರೀಶ್ ಕುಮಾರ್ ಗೌಡ ಅವರು ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಪದವಿ ವಿದ್ಯಾಭ್ಯಾಸ ಮಾಡುವಾಗ ಪತ್ರಿಕೋದ್ಯಮ ವಿಷಯ ಆಯ್ಕೆ ಮಾಡಿಕೊಂಡು ಉತ್ತಮ ಪತ್ರಕರ್ತರಾಗಬೇಕೆಂದರು. ಪತ್ರಿಕೋದ್ಯಮ ವಿದ್ಯಾಭ್ಯಾಸ ಮಾಡಿದವರಿಗೆ ಹತ್ತಾರು ಅವಕಾಶಗಳು ಇವೆಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯ. ಇದಕ್ಕಾಗಿ ಪ್ರತಿಯೊಬ್ಬರು ಪತ್ರಿಕೆಗಳನ್ನು ಅವಲೋಕನ ಮಾಡಬೇಕು. ಇದರಿಂದ ಸಾಮಾನ್ಯ ಜ್ಞಾನ ಹೆಚ್ಚುವುದಲ್ಲದೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಾಗುವುದು. ಪತ್ರಕರ್ತ ವತ್ತಿ ಅತ್ಯಂತ ಗೌರವಯುತ. ಸಮಾಜದ ಅಂಕುಕೊಂಡುಗಳನ್ನು ತಿದ್ದುವ ಶಕ್ತಿ ಪತ್ರಿಕೆಗಳಿಗಿದೆ ಎಂದು ಪಿ.ಗಾದೆಪ್ಪ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾಜಿ ಮೇಯರ್ ಹಾಲಿ ಪಾಲಿಕೆಯ ಸದಸ್ಯರಾದ ಎಂ.ರಾಜೇಶ್ವರಿ ಸುಬ್ಬಾರಾಯುಡು ರವರು ಮಾತನಾಡಿ ಸಮಾಜದ ಓರೆಕೋರೆಗಳನ್ನು ತಿದ್ದುವ ನಿಟ್ಟಿನಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರಲ್ಲದೇ,

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವತ್ತ ಪತ್ರಕರ್ತರು ಗಮನಹರಿಸಬೇಕು. ಅಲ್ಲದೆ, ಪ್ರಾಮಾಣಿಕವಾದ ಕರ್ತವ್ಯ ಕೂಡ ಮುಖ್ಯವಾಗುತ್ತದೆ. ಸಾಮಾಜಿಕ ಜ್ವಲಂತ ಸಮಸ್ಯೆಗಳನ್ನು ಹೊರತರುವಂತಹ ಕೆಲಸವನ್ನು ಪತ್ರಕರ್ತರು ಮಾಡಬೇಕಿದೆ ಎಂದರು.
ಸಾಮಾನ್ಯ ಜ್ಞಾನ ಹೊಂದಿಲ್ಲದಿದ್ದರೆ ವೃತ್ತಿ ನಿಭಾಯಿಸುವುದು ಕಷ್ಟವಾಗುತ್ತದೆ. ಉತ್ತಮ ಚಿಂತನೆ, ಆಲೋಚನೆಗಳೊಂದಿಗೆ ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಗಳು ವಿರಳವಾಗುತ್ತಿದ್ದಾರೆ ಎಂದರು.
ಸಮಾಜದ ಅಂಕುಡೊಂಕು ತಿದ್ದುವ ಮಾಧ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯ ದೊರಕಬೇಕು ಎಂಬುದು ನಿಜವಾದರೂ ಈ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಮೀರಬಾರದು. ಪತ್ರಕರ್ತರು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ, ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಮಾಜಿ ಮೇಯರ್ ಎಂ.ರಾಜೇಶ್ವರಿ ಸುಬ್ಬಾರಾಯುಡು, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ, ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮನೋಹರ್, ಕಾಲೇಜಿನ ಪ್ರಾಂಶುಪಾಲರಾದ ಬಿ.ಸುಲೇಖ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷೆಯಾದ ಶಮೀಮ್, ಸೇರಿದಂತೆ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಕೆ.ಬಜಾರಪ್ಪ, ಡಾ.ಗಿರೀಶ್ ಕುಮಾರ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ಯಾದವ್, ಜಿಲ್ಲಾ ಕಾರ್ಯದರ್ಶಿಗಳಾದ ವಿನೋದ್ ಚೌವ್ಹಾಣ್, ಲುಕ್ಮನ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಕೇಶ್ , ಸುನೀಲ್, ಬಾಬು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.