ಸಿರುಗುಪ್ಪ: ತಾಲೂಕಿನ ಕೊತ್ತಲಚಿಂತ ಗ್ರಾಮದಲ್ಲಿ ಸಕಾಲಕ್ಕೆ ಮಳೆಯಾಗದೆ ಕಂಗಾಲಾಗಿರುವ ರೈತಾಪಿ ವರ್ಗ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ, ವರುಣದೇವನ ಕೃಪೆಗಾಗಿ ಹಮ್ಮಿಕೊಳ್ಳಲಾಗಿದ್ದ ಅಪರೂಪದ ೭ ದಿನಗಳ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮವು ನಾಳೆಗೆ ಯಶಸ್ವಿಯಾಗಿ ಮುಕ್ತಾಯಗೊಳ್ಳಲಿದೆ.
ಕಳೆದ ಜುಲೈ ೨೮ ರಿಂದ ಆರಂಭವಾಗಿರುವ ಈ ಸಪ್ತಾಹದಲ್ಲಿ ಗ್ರಾಮದ ೪ ಭಜನಾ ತಂಡಗಳು ಸಕ್ರಿಯವಾಗಿ ಭಾಗವಹಿಸಿವೆ. ಒಟ್ಟು ೨೮ ಭಜನಾ ಕಲಾವಿದರು ಹಾಗೂ ಇಬ್ಬರು ಪೂಜಾರಿಗಳು ಸೇರಿದಂತೆ ಒಟ್ಟು ೩೦ ಜನರ ತಂಡವು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ರತಿ ತಂಡದಲ್ಲಿ ೭ ಕಲಾವಿದರಂತೆ, ದಿನದ ೨೪ ಗಂಟೆಯೂ ಸತತವಾಗಿ ೩ ಗಂಟೆಗೊಮ್ಮೆ ತಂಡಗಳನ್ನು ಬದಲಾಯಿಸಿಕೊಳ್ಳುತ್ತಾ, ಹಗಲಿರುಳು ಎನ್ನದೆ ಸತತ ೧೬೮ ಗಂಟೆಗಳ ಕಾಲ ಅಖಂಡವಾಗಿ ಭಜನೆಯ ಮೂಲಕ ದೇವರನ್ನು ಪ್ರಾರ್ಥಿಸುತ್ತಿರುವುದು ಇಡೀ ತಾಲೂಕಿನ ಗಮನ ಸೆಳೆದಿದೆ.ಈ ಮಹತ್ತರ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮುಖರಾದ ಪುರುಷೋತ್ತಮರೆಡ್ಡಿ, ಬಿ.ಗುರುನಾಥ, ಬದಿನೇಹಾಳ್ ವೆಂಕಟರಾಮರೆಡ್ಡಿ, ಅಗಸರ ರಾಘವೇಂದ್ರ, ಬಣಜಿಗರ ಶರಭಣ್ಣ, ತಾಯಣ್ಣ, ಬಡಿಗೇರ ವಿರೇಶ, ಲಕ್ಷ್ಮೀಕಾಂತರೆಡ್ಡಿ, ಆರ್. ಸತ್ಯನಾರಾಯಣರೆಡ್ಡಿ, ಈಶಪ್ಪ ಸ್ವಾಮಿ, ನಂದೀಶ ಸ್ವಾಮಿ ಹಾಗೂ ಬಿ.ವೆಂಕಟೇಶ ಶೆಟ್ಟಿ ಮುಂತಾದ ಭಜನಾ ಕಲಾವಿದರು ಸತತವಾಗಿ ಭಜನೆ ಮಾಡುವ ಮೂಲಕ ಭಕ್ತಿ ಸಾಗರ ಹರಿಸಿದ್ದಾರೆ.
ಸತತ ಏಳು ದಿನಗಳ ಕಾಲ ನಡೆದ ಈ ಭಕ್ತಿಪೂರ್ವಕ ಪ್ರಾರ್ಥನೆಗೆ ನಾಳೆ ವಿಶೇಷ ಎಡೆ ಮತ್ತು ಪ್ರಸಾದ ನೀಡುವ ಮೂಲಕ ವಿರಾಮ ಬೀಳಲಿದೆ. ನಾಳೆಯ ಸಮಾರೋಪ ಸಮಾರಂಭದ ಅಂಗವಾಗಿ ಗ್ರಾಮದಲ್ಲಿ ವಿಶೇಷ ಅಹೋರಾತ್ರಿ ಭಜನೆ ಹಾಗೂ ಸಾರ್ವಜನಿಕ ಮಹಾದಾಸೋಹ (ಪ್ರಸಾದ ವಿನಿಯೋಗ) ಕಾರ್ಯಕ್ರಮಗಳು ಜರುಗಲಿವೆ. ಈ ಪವಿತ್ರ ಧಾರ್ಮಿಕ ಸಮಾರಂಭದಲ್ಲಿ ರೌಡಕುಂದ ಮಠದ ಪೂಜ್ಯ ಶ್ರೀ ಸಿದ್ದರಾಮೇಶ್ವರ ಶರಣರು, ಕಂಬಳಿ ಮಠದ ಶ್ರೀ ವೀರಭದ್ರಯ್ಯಸ್ವಾಮಿಗಳು ಹಾಗೂ ಪ್ರಮುಖರಾದ ಆರ್. ಪಂಪಾರೆಡ್ಡಿ ಮತ್ತಿತರ ಗಣ್ಯರು ಭಾಗವಹಿಸಿ, ಸತತವಾಗಿ ಶ್ರಮಿಸಿದ ಭಜನಾ ಕಲಾವಿದರಿಗೆ ಹಾಗೂ ನೆರೆದ ಸಾರ್ವಜನಿಕ ಭಕ್ತಾಧಿಗಳಿಗೆ ಆಶೀರ್ವಚನ ನೀಡಿ ಹರಸಲಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.