ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ನ ಗಲಭೆ ನಂತರದ ಪ್ರಶ್ನೆಗಳು
ಬಳ್ಳಾರಿ : ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟಲ್ಗಳಿಗೆ ಪರವಾನಿಗೆ ನೀಡುವ ಅಧಿಕಾರ ಯಾವ ಇಲಾಖೆಗಿದೆ? ಯಾವ ಅಧಿಕಾರಿಗಿದೆ?.
- ಬಳ್ಳಾರಿಯ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ನ ಹಾಸ್ಟಲ್ನಲ್ಲಿ ಸಹಪಾಠಿಯು ತನ್ನ ಆಪ್ತಮಿತ್ರನನ್ನು ಕೊಲೆ ಮಾಡಿ, ವಾರ್ಡನ್ ಹಾಗೂ ಏಳು ವಿದ್ಯಾರ್ಥಿಗಳಿಗೆ ಗಾಯಗೊಳಿಸಿ ಪರಾರಿ ಆಗಿರುವ ಘಟನೆಯ ನಂತರ, ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ಮೇಲಿನ ಪ್ರಶ್ನೆಗೆ ಗೊಂದಲದ ಅಸ್ಪಷ್ಟವಾದ ಉತ್ತರ.
ಈ ಪ್ರಶ್ನೆಗೆ ಸ್ಪಷ್ಟ ಉತ್ತರವನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗೃಹ ಇಲಾಖೆ, ಮಹಾನಗರ ಪಾಲಿಕೆ ಕೆಲ ಇಲಾಖೆಗಳ ಅಧಿಕಾರಿಗಳು ‘ನಾವಲ್ಲ, ನಾವಲ್ಲ. ನಮಗೆ ಈ ಬಗ್ಗೆ ಏನೂ ಗೊತ್ತಿಲ್ಲ. ನಾವೂ ಕೂಡ, ಘಟನೆ ನಡೆದ ಕ್ಷಣದಿಂದ ಈ ಪ್ರಶ್ನೆಗೆ ಉತ್ತರ ಹುಡುಕಾಡುತ್ತಿದ್ದೇವೆ’ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಶಾಲಾ - ಕಾಲೇಜುಗಳಿವೆ. ಆಂಧ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಕೌಟುಂಬಿಕ ಟ್ರಸ್ಟ್, ಸಂಸ್ಥೆಗಳು ‘ವಸತಿ ಶಾಲೆ-ಕಾಲೇಜು’ಗಳನ್ನು ಪ್ರತೀ ವರ್ಷ ಪ್ರಾರಂಭಿಸುತ್ತಿವೆ. ಆದರೆ, ಶಾಲಾ - ಕಾಲೇಜು ಪ್ರಾರಂಭಕ್ಕೆ ಮಾತ್ರ ಶಿಕ್ಷಣ ಇಲಾಖೆ ಪರವಾನಿಗೆ ನೀಡುತ್ತದೆ. ‘ವಸತಿ - ಹಾಸ್ಟಲ್’ಗೆ ಯಾರು ಪರವಾನಿಗೆ ನೀಡುತ್ತಾರೆ? ಎನ್ನುವುದು ಈವರೆಗೂ ಅಧಿಕಾರಿಗಳಿಗೆ ಗೊತ್ತೇ ಇಲ್ಲವಂತೆ.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಉಮಾದೇವಿ ಅವರು, ‘ಶಿಕ್ಷಣ ಇಲಾಖೆ ಶಿಕ್ಷಣ ಬೋಧಿಸಲು ಮಾತ್ರ ಪರವಾನಿಗೆ ನೀಡಲಿದೆ. ಹಾಸ್ಟಲ್ಗೆ ಪರವಾನಿಗೆ ನೀಡುವ ಅಧಿಕಾರ ಹೊಂದಿಲ್ಲ. ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ನ ಶಿಕ್ಷಣ ಸಂಸ್ಥೆಯು ಇಲಾಖೆಯಲ್ಲಿ ನೋಂದಣಿಯಾಗಿದ್ದು, ೨೦೦೫ ರಲ್ಲಿ ಸಿಬಿಎಸ್ಸಿ/ಐಸಿಎಸ್ಸಿ ಸಿಲಬಸ್ಗೆ ಉನ್ನತೀಕರಣಗೊಂಡಿದೆ’ ಎಂದು ‘ಸುದ್ದಿಮೂಲ’ಕ್ಕೆ ತಿಳಿಸಿದ್ದಾರೆ.
‘ಸರ್ಕಾರದ ವಸತಿ ನಿಲಯಗಳು ಸಮಾಜ ಕಲ್ಯಾಣ ಇಲಾಖೆ ಮತ್ತು ಕ್ರೈಸ್ ವ್ಯಾಪ್ತಿಯಲ್ಲಿವೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳು ಯಾವ ಇಲಾಖೆಯ - ಯಾವ ಅಧಿಕಾರಿಯ ವ್ಯಾಪ್ತಿಯಲ್ಲಿ ಇರುತ್ತವೆ ಎನ್ನುವುದೇ ನಮ್ಮಲ್ಲಿ ಅಸ್ಪಷ್ಟ ಮಾಹಿತಿ ಇದೆ ಮತ್ತು ಗೊಂದಲವಿದೆ’ ಎನ್ನುತ್ತಾರೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು.
ನಾಲ್ಕು ದಿನ ರಜೆ!
ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ಗೆ ೨೦೨೭ರ ವರೆಗೆ ಮಾತ್ರವೇ ಸಿಬಿಎಸ್ಸಿ/ಐಸಿಎಸ್ಸಿ ಬೋಧನೆಗೆ ಪರವಾನಿಗೆ ಇದ್ದು. ನವೀಕರಣಕ್ಕೆ ಆಡಳಿತ ಮಂಡಳಿ ಅರ್ಜಿ ಸಲ್ಲಿಸಬೇಕಿದೆ. ಈ ಸಂಸ್ಥೆಯ ಆಡಳಿತ ಮಂಡಳಿಯು ಶಾಲೆಗೆ ನಾಲ್ಕು ದಿನಗಳ ರಜೆಯನ್ನು ಘೋಷಣೆ ಮಾಡಿದೆ. ಪರೀಕ್ಷೆಗಳ ಕಾರಣ ಪೋಷಕರು - ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.