ವಿವಿಯ ಪರೀಕ್ಷಾ ವಿಭಾಗದಲ್ಲಿ ಜರುಗಿದ ಕಾನೂನುಬಾಹಿರ ಘಟಿಕೋತ್ಸವ ಪ್ರಮಾಣ ಪತ್ರ ವಿತರಣೆ ಪ್ರಕರಣ ಮತ್ತು ವಿವಿಯ ಇತಿಹಾಸ, ಪುರಾತತ್ವ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅನಂತ್ ಎಲ್ ಝಂಡೇಕರ್ ಇವರು ವಿಶ್ವವಿದ್ಯಾಲಯದಲ್ಲಿನ ಸಹ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಮತ್ತು ಪ್ರಭಾರ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿನ ಕೆಲ ಕಾನೂನುಬಾಹಿರ ಆದೇಶಗಳ ಕುರಿತಂತೆ ಕುಲಾಧಿಪತಿಗಳ ಕಚೇರಿಯಲ್ಲಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ದೂರಿನ ಪ್ರಕರಣಗಳ ಕುರಿತಂತೆ ಇತ್ತೀಚೆಗೆ ಜರುಗಿದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ವಿಷಯ ಮಂಡಿಸಲಾಗಿದ್ದು, ಸಭೆಯು ವಿಸ್ತೃತವಾಗಿ ಚರ್ಚಿಸಿ ಈ ಪ್ರಕರಣಗಳ ಕುರಿತಂತೆ ಓರ್ವ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ತೀರ್ಮಾನಿಸಲಾಗಿದೆ.

ಹಾಗಾಗಿ ಎರಡೂ ಪ್ರಕರಣಗಳ ಕುರಿತು ತನಿಖೆಗೆ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಡಿ.ಎಸ್.ಶಿಂಧೆ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಆದೇಶ ಜಾರಿಗೊಳಿಸಲಾಗಿದ್ದು, ಇವರು ಪ್ರಕರಣ ಕುರಿತು 45 ದಿನಗಳ ಒಳಗಾಗಿ ತನಿಖೆ ಕೈಗೊಂಡು ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ತನಿಖಾ ವರದಿಗಳು ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾದ ನಂತರ ತಪ್ಪಿತಸ್ಥರ ವಿರುದ್ಧ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿಯವರು ಹಾಗೂ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.