ಒಂದು ಬಾರಿ ಪರ್ಯಟನೆ ಮಾಡುತ್ತ ಒಂದು ಊರಿನ ಬಳಿ ಬಂದಾಗ ಬಹಳ ಬಾಯಾರಿಕೆ ಆಯಿತು. ಊರ ಹೊರಗಿನ ಬಾವಿಯ ಬಳಿ ಒಬ್ಬ ವೃದ್ಧ ಸ್ತ್ರೀ ನೀರು ಸೇದುತ್ತಿದ್ದಳು.

ಕಾಳಿದಾಸ ಸ್ತ್ರೀಯ ಬಳಿ ಸಾರಿ, ನನಗೆ ತುಂಬ ಬಾಯಾರಿಕೆಯಾಗಿದೆ,
ಕುಡಿಯಲು ನೀರು ಕೊಡುವಿರಾ ?
ಎಂದು ಕೇಳಿದ.
ಸ್ತ್ರೀ - ನನಗೆ ನಿನ್ನ ಪರಿಚಯವಿಲ್ಲವಲ್ಲ ಮಗೂ, ನೀನು ನಿನ್ನ ಪರಿಚಯ ಹೇಳು, ನಾನು ನೀರು ಕೊಡುತ್ತೇನೆ ಎಂದಳು.
ಆಗ ಕಾಳಿದಾಸ ತನ್ನ ಪರಿಚಯ ನೀಡಲು ಪ್ರಾರಂಭಿಸಿದ.
ಕಾಳಿದಾಸ - ನಾನೊಬ್ಬ ಪ್ರವಾಸಿ
ಸ್ತ್ರೀ - ಲೋಕದಲ್ಲಿ ಪ್ರವಾಸಿಗರು ಇಬ್ಬರೇ.
ಒಬ್ಬ ಸೂರ್ಯ, ಮತ್ತೊಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿದ್ದಾರೆ.
ಕಾಳಿದಾಸ - ನಾನೊಬ್ಬ ಅತಿಥಿ, ಈಗ ನೀರು ಸಿಗುವುದೇ?
ಸ್ತ್ರೀ - ಲೋಕದಲ್ಲಿ ಅತಿಥಿಗಳೂ ಇಬ್ಬರೇ.
ಒಂದು ಧನ, ಮತ್ತೊಂದು ಯೌವ್ವನ. ಇಬ್ಬರೂ ಬಂದು ಹೊರಟು ಹೋಗುತ್ತಾರೆ, ನಿಲ್ಲುವುದಿಲ್ಲ.
ನಿಜ ಹೇಳು, ನೀನು ಯಾರು?

ಕಾಳಿದಾಸ - ನಾನು ಸಹನಶೀಲ. ಈಗಲಾದರೂ ನೀರು ದೊರೆಯುತ್ತದೆಯೇ?
ಸ್ತ್ರೀ - ಲೋಕದಲ್ಲಿ ಸಹನಶೀಲರೂ ಇಬ್ಬರೇ!!
ಒಂದು ಭೂಮಿ, ಮತ್ತೊಂದು ವೃಕ್ಷ. ಭೂಮಿ ಪುಣ್ಯವಂತರೊಡನೆ ಪಾಪಿಷ್ಟರನ್ನೂ ಸಹಿಸುತ್ತಾಳೆ. ಹಾಗೆಯೇ ಮರವು ಕಲ್ಲೆಸೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ.
ಈಗ ಕಾಳಿದಾಸ ಹತಾಶನಾಗತೊಡಗಿದ.
ಕಾಳಿದಾಸ - ನಾನೊಬ್ಬ ಹಠಮಾರಿ.
ಸ್ತ್ರೀ - ಇಲ್ಲ, ನೀನು ಹಠಮಾರಿ ಆಗಲು ಹೇಗೆ ಸಾದ್ಯ? ಲೋಕದಲ್ಲಿ ಹಠಮಾರಿಗಳೂ ಇಬ್ಬರೇ...
ಒಂದು ಉಗುರು, ಇನ್ನೊಂದು ಕೂದಲು. ಎಷ್ಟು ಬಾರಿ, ಕತ್ತರಿಸಿದರೂ ಮತ್ತೆ ಬೆಳೆಯುತ್ತವೆ.
ಕಾಳಿದಾಸನಿಗೀಗ ಬೇಸರವಾಗತೊಡಗಿತು.
ಕಾಳಿದಾಸ - ನಾನೊಬ್ಬ ಮೂರ್ಖ!!
ಸ್ತ್ರೀ - ಅದು ಹೇಗೆ ಸಾಧ್ಯ? ಲೋಕದಲ್ಲಿ ಮೂರ್ಖರೂ ಸಹ ಇಬ್ಬರೇ!!
ಒಬ್ಬ ರಾಜ- ಯೋಗ್ಯತೆ ಇಲ್ಲದಿದ್ದರೂ ಎಲ್ಲರ ಮೇಲೂ ಆಳ್ವಿಕೆ ಮಾಡುತ್ತ ದರ್ಬಾರು ಮಾಡುತ್ತಾನೆ.
ಇನ್ನೊಬ್ಬ ಆ ರಾಜನ ಆಸ್ಥಾನ ಪಂಡಿತ- ರಾಜನನ್ನು ಓಲೈಸುವುದಕ್ಕಾಗಿ, ಸುಳ್ಳು ಕಥೆಗಳನ್ನು ನಿಜವೆಂದು ಬಿಂಬಿಸುತ್ತಾನೆ..!
ಈಗ ಕಾಳಿದಾಸ ಏನೂ ಹೇಳುವ ಮನಸ್ಥಿತಿಯಲ್ಲಿ ಉಳಿದಿರಲಿಲ್ಲ. ಆ ವೃದ್ಧ ಸ್ತ್ರೀಯ ಕಾಲಿಗೆ ಬಿದ್ದು
ತಾಯೇ ದಯವಿಟ್ಟು ನೀರು ಕೊಡು ಎಂದು ನೀರಿಗಾಗಿ ಬೇಡತೊಡಗಿದ.
ಆಗ ಏಳು ಮಗೂ ಎಂಬ ಧ್ವನಿ ಕೇಳಿ ತಲೆ ಎತ್ತಿ ನೋಡಿದ. ಅಲ್ಲಿ ವೃದ್ಧ ಸ್ತ್ರೀಯ ಜಾಗದಲ್ಲಿ ಸಾಕ್ಷಾತ್ ಸರಸ್ವತಿ ದೇವಿ ನಿಂತಿದ್ದಳು. ಆಕೆಗೆ ಕೈಮುಗಿದಾಗ ಸರಸ್ವತಿ ದೇವಿ ಹೇಳಿದಳು...
ವಿದ್ಯೆಯಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು, ಗರ್ವ ಅಹಂಕಾರವಲ್ಲ..! ನೀನು ನಿನ್ನ ವಿದ್ಯೆಗೆ ದೊರೆತ ಮಾನ ಸನ್ಮಾನಗಳನ್ನೇ ಸರ್ವಸ್ವವೆಂದು ಭಾವಿಸಿದೆ. ಹಾಗಾಗಿ ನಿನ್ನ ಕಣ್ಣು ತೆರೆಸುವುದು ಅವಶ್ಯಕವಾಗಿತ್ತು.
ಕಾಳಿದಾಸನಿಗೆ ತನ್ನ ತಪ್ಪಿನ ಅರಿವಾಯಿತು. ಕ್ಷಮೆ ಯಾಚಿಸಿ, ದಾಹ ತಣಿಸಿಕೊಂಡು ತನ್ನ ಮುಂದಿನ ದಾರಿ ಹಿಡಿದು ಸಾಗಿದ.
ನೀತಿ:
ವಿದ್ಯಾ ದಧಾತಿ ವಿನಯಮ್
(ವಿದ್ಯೆಗೆ ವಿನಯವೇ ಭೂಷಣ)
ಕರ್ನಾಟಕ ಶಿಕ್ಷಕರ ಬಳಗ