
ಪರಿಸರ ಸಂರಕ್ಷಣೆ, ಸುಸ್ಥಿರ ಜೀವನಶೈಲಿಯ ಜೊತೆಗೆ ಆರೋಗ್ಯ, ಆಯುರ್ವೇದ, ಯೋಗ ಕ್ಷೇಮಕ್ಕೆ ಆದ್ಯತೆ ನೀಡುತ್ತಿರುವುದು ಇಲ್ಲಿನ ವಿಶೇಷತೆ. ಈ ನೈಸರ್ಗಿಕ ರೆಸಾರ್ಟ್ ನಲ್ಲಿ ಇತ್ತೀಚೆಗೆ ವಿಶಿಷ್ಟ ಆಯುರ್ವೇದ ಚಿಕಿತ್ಸಾ ಕೇಂದ್ರ “ಆರೋಗ್ಯಾ”ವನ್ನು ಪ್ರಾರಂಭಿಸಲಾಗಿದೆ. ಆಯುರ್ವೇದದ ಸಾಂಪ್ರದಾಯಿಕ ತತ್ವಗಳು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಒಗ್ಗೂಡಿಸುವ ಮೂಲಕ, ಆರೋಗ್ಯಾ ದೇಹ, ಮನಸ್ಸು, ಹಾಗೂ ಆತ್ಮವನ್ನು ಪುನಶ್ಚೇತನಗೊಳಿಸುವ ಸಮಗ್ರ ಆರೋಗ್ಯ ಸಂಜೀವಿನಿಯನ್ನೇ ಇಲ್ಲಿ ಸಂಯೋಜಿಸಲಾಗಿದೆ. 125 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ನಿಸರ್ಗ ತಾಣವಾಗಿರುವ ರೆಸಾರ್ಟ್ ನಲ್ಲಿ 15 ಎಕರೆ ಪ್ರದೇಶವನ್ನು ಆಯುರ್ವೇದದ ಚಿಕಿತ್ಸೆಗೆಂದೇ ಮೀಸಲಿರಿಸಲಾಗಿದೆ. ಆಯುರ್ವೇದ ತಾಣದಲ್ಲೂ ಸಾತ್ವಿಕ ಆಹಾರ ಒದಗಿಸುವ ಪ್ರತ್ಯೇಕ ಅಡುಗೆ ಕೊಣೆ, ನೈಸರ್ಗಿಕ ಕೆರೆಯೊಂದರ ದಟ್ಟ ನೋಟ ಹೊಂದಿರುವ ಯೋಗಾ ವೇದಿಕೆ, ಆಯುರ್ವೇದ ಪರಿಣಿತರನ್ನೂಳಗೊಂಡ ಆರೋಗ್ಯಪೂರ್ಣ ಪ್ರದೇಶವಿದು.

ಆರೋಗ್ಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶೆರಿ ಸೆಬಾಸ್ಟಿಯನ್ ಮಾತನಾಡಿ, ನಾವು ಆಯುರ್ವೇದದ ತತ್ವಗಳನ್ನು ಪ್ರಕೃತಿಯ ಶಾಂತತೆಯೊಂದಿಗೆ ಸಮಗ್ರಗೊಳಿಸುತ್ತಿದ್ದೇವೆ. ತನ್ಮೂಲಕ ಪ್ರತಿಯೊಬ್ಬ ಅತಿಥಿಗೆ ಅವರ ದೋಷವನ್ನು ಸಮತೋಲನಗೊಳಿಸಲು, ಸುಧಾರಿಸಲು ಸಹಾಯ ಮಾಡುವ ವಿಶಿಷ್ಟ ಅನುಭವವನ್ನು ನೀಡಲು ಬದ್ಧರಾಗಿದ್ದೇವೆ. ಆಯುರ್ವೇದ ಔಷಧಿ ಗಿಡಗಳಿಂದ ತುಂಬಿದ ಪರಿಸರದಲ್ಲಿ, ಶುದ್ಧ ಗಾಳಿಯ ಸಾನ್ನಿಧ್ಯದಲ್ಲಿ ಸ್ವಾಭಾವಿಕವಾಗಿ ಗುಣ ಹೊಂದಲು ವಿಫುಲ ಅವಕಾಶಗಳಿವೆ ಎನ್ನುತ್ತಾರೆ.

ಆಯುರ್ವೇದ, ಯೋಗ, ಪ್ರಾಣಾಯಾಮ, ಹಾಗೂ ವಿವಿಧ ಚಿಕಿತ್ಸೆಗನ್ನೊಳಗೊಂಡ ಸಂಪೂರ್ಣ ಅನುಭವವನ್ನು “ಆರೋಗ್ಯಾ” ಒದಗಿಸುತ್ತಿದೆ. ಆಧುನಿಕ ಆರೋಗ್ಯ ಪುನಶ್ಚೇತನ ತಂತ್ರಗಳನ್ನು ಬಳಸಿ ಮನಸ್ಸು, ದೇಹ, ಹಾಗೂ ಆತ್ಮದ ಸಮತೋಲನವನ್ನು ಸುಧಾರಿಸಲು ಈ ಕೇಂದ್ರ ಸಹಾಯ ಮಾಡುತ್ತದೆ. ವಿವಿಧ ಮಸಾಜ್ ಥೆರಪಿಯೊಂದಿಗೆ ಕಲಾ ರಚನೆ, ಕುಂಬಾರಿಕೆ, ಆಹಾರ ಸಿದ್ಧಪಡಿಸುವ ಹಾಗೂ ತೋಟಗಾರಿಕೆ ಚಟುವಟಿಕೆಯಲ್ಲೂ ಅತಿಥಿಗಳನ್ನು ತೊಡಗಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ.

ಇಬ್ಬನಿ ಕೂರ್ಗ್ ನ ವ್ಯವಸ್ಥಾಪಕ ನಿರ್ದೇಶಕರಾದ ಮುದ್ದಪ್ಪ ಕುಪ್ಪಂಡ ಹೇಳುವಂತೆ, "ನಮ್ಮಲ್ಲಿ ಆರೋಗ್ಯ ಅಂದರೆ ಕೇವಲ ವೈಯಕ್ತಿಕ ಆರೋಗ್ಯವಷ್ಟೇ ಅಲ್ಲ; ಇದು ಪ್ರಕೃತಿಯೊಂದಿಗೆ ಸಮತೋಲನ ಸಾಧಿಸುವ ಪ್ರಯತ್ನವಾಗಿದೆ. ಇದು ದೇಹ, ಮನಸ್ಸು ಮತ್ತು ಆತ್ಮದ ಪುನಶ್ಚೇತನಕ್ಕೆ ನೆರವಾಗುತ್ತದೆ. ಇಬ್ಬನಿ ಕೂರ್ಗ್ "ಪರಿಸರ ಸ್ನೇಹಿ ಪ್ರವಾಸ" ಕಲ್ಪನೆಯನ್ನು ದಿಟ್ಟವಾಗಿ ಅನುಸರಿಸುತ್ತಿದೆ ಎನ್ನುತ್ತಾರೆ.
ಬೆಳಿಗ್ಗಿನ ತಂಪಾದ ವಾತಾವರಣದಲ್ಲಿ ನಮ್ಮನ್ನು ಕೂಗಿ ಎಬ್ಬಿಸುವುದು ಇಲ್ಲಿನ ಪಕ್ಷಿ ಸಂಕುಲ. ಬೆಳಗಿನ ನೇಚರ್ ವಾಕ್ ನಲ್ಲಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು. 60ಕ್ಕೂ ಅಧಿಕ ಪಕ್ಷಿಗಳು ಇಲ್ಲಿವೆ. ರೆಸಾರ್ಟ್ಸ್ ನಲ್ಲಿ ಎಲ್.ಇ.ಡಿ ಬಲ್ಪ್ ಗಳ ಬಳಕೆಯಿಲ್ಲ. ಕಣ್ಣೂ ಕೊರೈಸುವ ಬೆಳಕಿಲ್ಲ. ಇವು ಪ್ರಾಣಿ ಪಕ್ಷಿಗಳ ಕಣ್ಣಿಗೆ ಮಾರಕವಾಗಿರುವ ಕಾರಣ ಝಗಮಗಿಸುವ ದೀಪಾಲಂಕಾರ ನಿಷಿದ್ಧ.
ರೆಸಾರ್ಟ್ ಒಳಗೆ ಡೀಸಲ್, ಪೆಟ್ರೋಲ್ ವಾಹನಗಳಿಗೆ ಪ್ರವೇಶವಿಲ್ಲ. ವಿದ್ಯುತ್ ಚಾಲಿತ ವಾಹನಗಳಿವೆ. ಶಬ್ದ ಮಾಲಿನ್ಯವಿಲ್ಲ. ಬಳಕೆ, ಮರು ಬಳಕೆ, ಸಂಸ್ಕರಣೆಯಂತಹ ಸುಸ್ಥಿರ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಲ್ಲಿ ಕೊಳವೆ ಬಾವಿಯನ್ನು ಆಶ್ರಯಿಸಿಲ್ಲ. ಮಳೆ ನೀರು ಕೊಯ್ಲು ಮೂಲಕ ವರ್ಷ ಪೂರ್ತಿ ನೀರನ್ನು ಬಳಕೆ ಮಾಡಲಾಗುತ್ತದೆ. ಇಬ್ಬನಿ ರೆಸಾರ್ಟ್ ನಲ್ಲಿ ಮದುವೆಯಾಗುವುದೇ ಒಂದು ಸುಯೋಗ. ಪ್ರಕೃತಿಯ ಮಡಿಲಲ್ಲಿ ವಿವಾಹವಾಗಲು ಬಯಸುವವರಿಗೆ ಇಲ್ಲಿ ಸೂಕ್ತ ವ್ಯವಸ್ಥೆಯೂ ಇದೆ.

ರೆಸಾರ್ಟ್ಸ್ ನಲ್ಲಿ ಸಕ್ಕರೆ ಬಳಕೆಯಿಲ್ಲ. ಪ್ರತಿಯೊಬ್ಬರೂ ಬೆಲ್ಲದ ಸವಿಯುಣ್ಣುತ್ತಿದ್ಧಾರೆ. “ಕಲಾಡಿ ಕಾಫೀ” ವೇದಿಕೆಯಲ್ಲಿ ಕಾಫಿಯ ವಿವಿಧ ಬಗೆಯ ಸ್ವಾದವನ್ನು ಹೀರುವುದೇ ಒಂದು ಸೊಬಗು. ಕರೆ ಅಂಗಳದಲ್ಲಿ ಹರಟೆ ಹೊಡೆಯುವ ಜಗಲಿಗಳೂ ಇವೆ. "ಪರಿಸರ" ಪ್ರವಾಸೋದ್ಯಮದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ತಾಣ ನಗುತ್ತಿರುವ ಕೆರೆಗಳು, ಹಸಿರಿನ ಮರಗಳು, ಹಕ್ಕಿಗಳ ಚಿಲಿಪಿಲಿ, ಹುಲ್ಲಿನ ಮೇಲಿನ ಮಂಜು, ಹಾಗೂ ಅರಣ್ಯದ ಒಡಲಿನಲ್ಲಿ ಶಾಂತಿಯುತ ಅನುಭವವನ್ನು ಒದಗಿಸುತ್ತದೆ. ಇದು ಕೊಡವರಂತೆ ಪ್ರಕೃತಿಯನ್ನು ಆರಾಧಿಸುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಬೆರಗು ಮೂಡಿಸುವ ತಾಣ.