ತಿಪಟೂರು : ರಾಜ್ಯಪಾಲರು ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನಿರಾಕರಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಗಂಭೀರ ದಾಳಿ ಎಂದು ಮಾಜಿ ನಗರಸಭಾ ಅಧ್ಯಕ್ಷರಾದ ಮೇಘನಾ ಭೂಷಣ್ ತೀವ್ರವಾಗಿ ಖಂಡಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಕರ್ನಾಟಕದ ರಾಜ್ಯಪಾಲ ತಾವರ್ ಸಿಂಗ್ ಗೆಹಲೋಟ್ ಬಿಜೆಪಿಯ ಮೋದಿ ರವರ ಕೈ ಗೊಂಬೆಯಂತೆ ವರ್ತಿಸುತ್ತಿದ್ದು ಈ ಕೂಡಲೇ ರಾಜ್ಯಪಾಲರನ್ನು ವಜಾಗೊಳಿಸಬೇಕೆಂದು ಈ ಮೂಲಕ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ರಾಜ್ಯಪಾಲರು ವಿಧಾನಸಭೆಯಲ್ಲಿ ಮಾತನಾಡಲು ನಿರಾಕರಿಸಿರುವುದು ಸಣ್ಣ ವಿಚಾರವಲ್ಲ ಅದು ಜನರಿಂದ ಆಯ್ಕೆಯಾದ ಸರ್ಕಾರದ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನವಾಗಿದೆ.
ರಾಜ್ಯಪಾಲರು ಮಾತನಾಡುವುದು ಅವರ ಆಯ್ಕೆಯಲ್ಲ ಅದು ಅವರ ಸಂವಿಧಾನಾತ್ಮಕ ಕರ್ತವ್ಯ. ಆ ಕರ್ತವ್ಯವನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ.
ಇಂದು ಮಾತನಾಡಲು ನಿರಾಕರಿಸಿದವರು ನಾಳೆ ಸರ್ಕಾರದ ತೀರ್ಮಾನಗಳಿಗೆ ಅಡ್ಡಿ ಮಾಡಬಹುದು, ಮುಂದಿನ ದಿನಗಳಲ್ಲಿ ವಿಧಾನಸಭೆಯನ್ನೇ ಅರ್ಥಹೀನಗೊಳಿಸುವ ಅಪಾಯಕಾರಿ ದಾರಿಯಿದು. ಇದು ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊಲ್ಲುವ ದಾರಿ ಎಂದು ಎಚ್ಚರಿಸಿದರು.