ಆಲಯದಲ್ಲಿ ಬೆಳಗ್ಗೆಯಿಂದ ದೊಡ್ಡಬಸವೇಶ್ವರ ಸ್ವಾಮಿಗೆ ಹಲವು ಬಗೆಯ ಪುಷ್ಪಾಲಂಕಾರ, ಮಹಾಮಂಗಳಾರತಿ, ಅರ್ಚನೆ ಸೇರಿ ಇತರ ಧಾರ್ಮಿಕ ಕೈಂಕರ್ಯ ನಡೆದೆವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ತಾಲೂಕಿನ ವಿವಿಧ ಗ್ರಾಮದಿಂದ ಪಾದಯಾತ್ರೆ ಮೂಲಕ ದೇವರ ದರ್ಶನ ಪಡೆಯುವ ಭಕ್ತರಿಗೆ ದಾರಿ ಉದ್ದಕ್ಕೂ ಜನರು ಅನ್ನದಾಸೋಹ, ತಂಪು ಪಾನಿಯ, ಹಣ್ಣು- ಹಂಪಲು ವಿತರಿಸಿದ್ದು ಕಂಡು ಬಂತು. ಇನ್ನು 11 ಗಂಟೆ ಸುಮಾರಿಗೆ ಕಂಪ್ಲಿ, ಬಳ್ಳಾರಿ, ಗೆಣಿಕೆಹಾಳ್, ಸಿಂಧಗೇರಿ ಸೇರಿ ಇತರ ರಸ್ತೆಯಲ್ಲಿ ಎತ್ತಿನ ಬಂಡಿ, ಟ್ರಾಕ್ಟರ್ ಸೇರಿ ಇತರ ವಾಹನವನ್ನು ಬಗೆ ಬಗೆಯಾಗಿ ಸಿಂಗರಿಸಿ ಸಾಲಾಗಿ ಜಾತ್ರೆಗೆ ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಎಂದಿನಂತೆ ಕೆರೆಕೆರೆ, ಸೋಮಲಾಪುರ, ಮುಷ್ಟುಗಟ್ಟೆ ಗ್ರಾಮದ ಭಕ್ತರು ಧೂಳುಗಾಯಿ, ಕುಂಭೋತ್ಸವ ನೆರವೇರಿಸಿದರು. ಬಳಿಕ ಡೊಳ್ಳಿನ ಮೂಲಕ ಪಲ್ಲಕ್ಕಿ, ಗೂಳಿ ಮೆರವಣಿಗೆ ನಡೆಯಿತು. ಚಂದ್ರ ಗ್ರಹಣ ಹಿನ್ನಲೆ ಮಧ್ಯಾಹ್ನ ಉರಿ ಬಿಸಿಲಿನಲ್ಲಿಯೂ ಸೇರಿದ್ದ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ 1 ಗಂಟೆ 40 ನಿಮಿಷಕ್ಕೆ ಸರಿಯಾಗಿ ತೇರು ಎಳೆಯಲಾಯಿತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಹಾಗೂ ಮಳೆ, ಬೆಳೆ ಸಂಮೃದ್ಧಿಗಾಗಿ ಭಕ್ತಿಯಿಂದ ರಥಕ್ಕೆ ಹೂವು ಹಣ್ಣು ಸಮರ್ಪಿಸಿ ದೇವರನ್ನು ಪ್ರಾರ್ಥಿಸಿದರು.
ಕಟ್ಟೆಚ್ಚರ: ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರಿದ್ದರಿಂದ ಪೊಲೀಸ್ ಇಲಾಖೆ ಯಾವುದೇ ಅವಘಡ ಸಂಭವಿಸದಂತೆ ಪಟ್ಟಣದ 45 ಕಡೆ ಸಿ ಸಿ ಟಿವಿ ಅಳವಡಿಸಲಾಗಿತ್ತು. ಜತೆಗೆ ಆಯಾಯ ರಸ್ತೆಯಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಸರ್ವಾಜನಿಕರ ಸಂಚಾರ ಸುಗಮವಾಯಿತು. ಇನ್ನು ಆರೋಗ್ಯ ಇಲಾಖೆಯಿಂದ ಬಾದನಹಟ್ಟಿ, ಗೆಣೆಹಾಳ್, ಕಂಪ್ಲಿ, ಬಳ್ಳಾರಿ ರಸ್ತೆ ಸೇರಿ ಒಟ್ಟು ನಾಲ್ಕು ಕಡೆ ತುರ್ತು ಆರೋಗ್ಯ ಸೇವೆ ಒದಗಿಸಲು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.