ಮಾಹಿತಿ ಸಂಗ್ರಹಿಸಲು ಆಗಮಿಸಿದ್ದ ಮಾಧ್ಯಮದವರಿಗೆ ಪ್ರಿನ್ಸಿಪಲ್ ನಿಂದ ನಿಂದನೆ
ಅರಕೇರಾ : ಕೊತ್ತದೊಡ್ಡಿ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿದ್ದು, ಏಕಕಾಲಕ್ಕೆ ಸುಮಾರು 34 ಕ್ಕೂ ಹೆಚ್ಚು ಮಕ್ಕಳು ಶನಿವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಆಗಮಿಸಿದ್ದರು.
ವಿದ್ಯಾರ್ಥಿಗಳಿಗೆ ತಲೆ ಸುತ್ತುವುದು, ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ. ಶಾಲೆಯಲ್ಲಿ ವೈದ್ಯಕೀಯ ಸೇವೆಗಳು ಲಭ್ಯವಿದ್ದರೂ ಮಕ್ಕಳು ಅನಾರೋಗ್ಯದಿಂದ ಗುಣಮುಖರಾಗಿಲ್ಲ. ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕ ರೋಗಗಳು ಹರಡಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ, ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ. ಅನೇಕ ವಿದ್ಯಾರ್ಥಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿವೆ. ಸುಮಾರು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟೈಫಡ್ ದೃಢಪಟ್ಟಿದೆ. ಅನಾರೋಗ್ಯದಿಂದ ಚಿಕಿತ್ಸೆಗೆ ಒಳಗಾದ ಎಲ್ಲ ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಮನೆಗೆ ಕಳಿಸಿದ್ದಾರೆ.

ತಹಸೀಲ್ದಾರ್ ಅಮರೇಶ ಬೀರಾದರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ವೈರಲ್ ಫಿವರ್ ನಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಪಾಲಕರು ಆತಂಕಪಡುವ ಅಗತ್ಯವಿಲ್ಲ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಅನುಚಿತ ವರ್ತನೆ ತೋರಿದ ಪ್ರಿನ್ಸಿಪಲ್ :
ಕೊತ್ತದೊಡ್ಡಿ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಮಾಧ್ಯಮದವರು ವಿಡಿಯೋ, ಫೋಟೊ ಚಿತ್ರಿಕರಿಸಿಕೊಂಡಿದ್ದರು. ಜವಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಲ್ ಸುರೇಶ ವರ್ಮಾ ಅವರು ಮಾಹಿತಿ ಮತ್ತು ಚಿತ್ರ ಸಂಗ್ರಹಕ್ಕೆ ಆಗಮಿಸಿದ್ದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದರು. ಮಾಧ್ಯಮದವರು ಲೋಫರ್ಸ್, ಉಪಯೋಗಕ್ಕೆ ಬಾರದವರು, ಇಡಿಯಟ್ಸ್ ನೀವೆನು ಮಾಹಿತಿ ಪಡಿಯುತ್ತೀರಿ. ದೇವದುರ್ಗ ಸಿರವಾರ ರಸ್ತೆ ಸರಿ ಇಲ್ಲ. ಆರೋಗ್ಯ ಇಲಾಖೆ ಸೇವೆ ಸರಿಯಿಲ್ಲ, ಜನಪ್ರತಿನಿಧಿಗಳು ಉಪಯೋಗವಿಲ್ಲ ಇಲ್ಲಿನ ವ್ಯವಸ್ಥೆ ಸರಿ ಇಲ್ಲ ಮೊದಲು ಅದರ ವರದಿ ಮಾಡಿ. ಇಲ್ಲಿ ಏನು ಮಾಡ್ಕೋತಿರಾ ಎಂದು ಮನಬಂದಂತೆ ಏರುದ್ವನಿಯಲ್ಲಿ ಅಸಂವಿಧಾನಿಕ ಪದಗಳಿಂದ ಸಾರ್ವಜನಿಕರ ನಡುವೆ ಸುಮಾರು ಹದಿನೈದು ನಿಮಿಷ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿಂದಿಸಿದರು.