ಮರಿಯಮ್ಮನಹಳ್ಳಿ : ಪಟ್ಟಣದಲ್ಲಿ ಬೀದಿ ನಾಯಿಗಳು ಗುಂಪು ಗುಂಪುಗಳಾಗಿ ಓಡಾಡುತ್ತಾ, ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿವೆ. ಈ ಬೀದಿ ನಾಯಿಗಳ ಹಾವಳಿಯಿಂದ ಚಿಕ್ಕ ಮಕ್ಕಳು ಮತ್ತು ತಂದೆ ತಾಯಿಗಳು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ .
ಬಸ್ ನಿಲ್ದಾಣ, ಚಿಕನ್ ಮಾರುಕಟ್ಟೆ, ಅಂಗಡಿ ಬದಿಗಳಲ್ಲಿ, ವಾರ್ಡುಗಳಲ್ಲಿ ಬೀಡು ಬಿಟ್ಟಿರುವ ಬೀದಿ ನಾಯಿಗಳು ಗುಂಪು ಗುಂಪುಗಳಾಗಿ ಓಡಾಡುತ್ತಿವೆ. 10 ರಿಂದ 15 ಬೀದಿ ನಾಯಿಗಳು ಗುಂಪುಗಳಾಗಿ ಓಡಾಡುವುದರಿಂದ ಸಾರ್ವಜನಿಕರಲ್ಲಿ ಭಯ ಉಂಟಾಗಿದೆ. ಎಲ್ಲೆಂದರಲ್ಲಿ ಹೋಟೆಲ್ ತ್ಯಾಜ್ಯ, ಮಾಂಸದಂಗಡಿಗಳ ತ್ಯಾಜ್ಯಗಳನ್ನು ಬಿಸಾಡುವುದರಿಂದ ಅವುಗಳನ್ನು ತಿನ್ನಲು ನಾಯಿಗಳು ಗುಂಪುಗೂಡುತ್ತವೆ. ಕೆಲವೊಮ್ಮೆ ಸಮೀಪದಲ್ಲಿ ನಡೆದಾಡುವ ಮನುಷ್ಯರ ಮೇಲೂ ದಾಳಿ ನಡೆಸಿವೆ.

ಮುಂಜಾನೆ ಮತ್ತು ಸಂಜೆ ನಡೆದಾಡುವವರನ್ನು, ದ್ವಿಚಕ್ರ ವಾಹನ ಸವಾರರನ್ನು, ಶಾಲೆಗೆ ಹೋಗುವ ಮಕ್ಕಳನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಡರಾತ್ರಿ ಕೆಲಸ ಮುಗಿಸಿಕೊಂಡು ನಡೆದುಕೊಂಡು ಅಥವಾ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವರ ಮೇಲೆ ಹೆಚ್ಚಾಗಿ ನಾಯಿಗಳು ದಾಳಿ ನಡೆಸುತ್ತಿವೆ. ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೋಗುತ್ತಿರುವಾಗ ತುಂಬಾ ಸಲ ನಾಯಿಗಳು ಅಡ್ಡ ಬಂದು ಸವಾರರು ಕೆಳಬಿದ್ದ ಉದಾಹರಣೆಗಳು ಸಾಕಷ್ಟು ಇವೆ.
ಬೀದಿ ನಾಯಿಗಳ ಹಾವಳಿ ಮರಿಯಮ್ಮನಹಳ್ಳಿಯಲ್ಲಿ ಒಂದು ಗಂಭೀರ ಸಮಸ್ಯೆಯಾಗಿದೆ, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೀದಿ ನಾಯಿಗಳ ಕಡಿತ, ಭಯ ಮತ್ತು ಆತಂಕಗಳು ಹೆಚ್ಚುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಕೆಲವರು ಸಾಕು ನಾಯಿಗಳ ಮರಿಗಳನ್ನೂ ಬೀದಿಗೆ ಬಿಡುತ್ತಾರೆ ಅವುಗಳೂ ಜನರಿಗೆ ಆಪತ್ತು ತಂದೊಡ್ಡುತ್ತಿವೆ. ನಾಯಿ ಕಡಿತಕ್ಕೊಳಗಾದವರು ನಿರ್ಲಕ್ಷ್ಯ ವಹಿಸಿ ರೇಬಿಸ್ ನಿರೋಧಕ ಚುಚ್ಚುಮದ್ದು ಪಡೆಯದಿದ್ದರೆ ರೇಬಿಸ್ ಕಾಯಿಲೆಗೆ ಒಳಗಾಗುವ ಸಾಧ್ಯತೆಯೂ ಇದೆ.
ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ, ವಯೋವೃದ್ಧರು ವಾಯು ವಿಹಾರಕ್ಕೆ ತೆರಳುವ ವೇಳೆ ನಾಯಿಗಳು ದಾಳಿ ನಡೆಸುತ್ತವೆ. ರಾತ್ರಿ ವೇಳೆ ನಾಯಿಗಳ ಕೂಗಾಟ, ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡುವುದಕ್ಕೆ ಆಗುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರಾದ ಪ್ರಕಾಶ್, ಮಂಜುನಾಥ, ಪ್ರಶಾಂತ್, ಶರಣ ಒತ್ತಾಯಿಸಿದ್ದಾರೆ.