ಬೆಂಗಳೂರು : ವಾಣಿಜ್ಯ ಬಳಕೆಯ ವಾಹನಗಳಾದ ಆಟೋ. ಕ್ಯಾಬ್ ಗೂಡ್ಸ್ ನಂತಹ ಚಾಲಕರ ದುಡಿಮೆಗೆ ಖಾಸಗಿ ಲೇವಾದೇವಿದಾರರಿಂದ ತೊಂದರೆ ಎದುರಾಗಿದ್ದು, ಕೂಡಲೇ ಖಾಸಗಿ ಹಣಕಾಸು ಮಾಫೀಯಾಗೆ ಕಡಿವಾಣ ಹಾಕಬೇಕು ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಲೇವಾದೇವಿದಾರರು ಕಾನೂನಿಗೆ ಗೌರವ ನೀಡದೇ ಅಮಾಯಕ ಚಾಲಕರನ್ನು ಶೋಷಿಸುತ್ತಿದ್ದಾರೆ. ಖಾಸಗಿ ಫೈನಾನ್ಸ್ ನವರು ರಿಕವರಿ ಏಜೆನ್ಸಿಯ ( ಸಿಜರ್) ಹೆಸರಿನಲ್ಲಿ ಗೂಂಡಾಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವಂತಹ ವ್ಯಕ್ತಿಗಳನ್ನು ಬಳಸಿಕೊಂಡು ರಸ್ತೆಗಳಲ್ಲಿ 4-5 ಜನರ ಗುಂಪಿನಿಂದ ಪ್ರತಿನಿತ್ಯ ಆಟೋ. ಕ್ಯಾಬ್, ಸರಕು ಸಾಗಾಣೆ ವಾಹನಗಳ ಚಾಲಕರಿಗೆ ತೊಂದರೆ ನೀಡುವುದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ವಾಣಿಜ್ಯ ಬಳಕೆಯ ವಾಹನದ ಚಾಲಕರು ಸಾಲ ಕಟ್ಟದಿದ್ದಲ್ಲಿ. ಚಾಲಕರಿಗೆ ನೋಟಿಸ್ ನೀಡಿ ಕಾನೂನಿನ ಅಡಿಯಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಬೇಕು. ಆದರೆ ಈ ಯಾವ ನಿಯಮಗಳನ್ನು ಸಹ ಅನುಸರಿಸುತ್ತಿಲ್ಲ ಎಂದರು.

ವಾಹನಗಳನ್ನು ನಡು ರಸ್ತೆಯಲ್ಲಿ ತಡೆದು ಗ್ರಾಹಕರು ಅಥವಾ ಸರಕುಗಳು ಇದ್ದರು ಸಹಾ ಕೆಳಗಿಳಿಸಿ ವಾಹನ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಖಾಸಗಿ ಫೈನಾನ್ಸ್ ಗಳು ಮತ್ತು ರಿಕವರಿ ಏಜೆನ್ಸಿಗಳು , ರಿಕವರಿ ಹೆಸರಿನಲ್ಲಿ ತೊಂದರೆ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು 7ದಿನದ ಒಳಗೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ. ಸರ್ಕಾರದ ವಿರುದ್ದ ಕಪ್ಪು ಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಖಾಸಗಿ ಫೈನಾನ್ಸ್ ನವರು ಅಗ್ರಿಮೆಂಟ್ ಚಾರ್ಜ್ ವಿಧಿಸುತ್ತಾರೆ. ಆದರೆ ಅಗ್ರಿಮೆಂಟ್ ಅನ್ನು ಗ್ರಾಹಕರಿಗೆ ನೀಡುವುದಿಲ್ಲ. ಎಚ್ ಪಿ ಎಂಟ್ರಿ ಮಾಡಿಸಲು. 2500 ರೂ ಶುಲ್ಕ ಒಡೆಯುತ್ತಾರೆ, ಆದರೆ ಎಚ್ ಪಿ ಎಂಟ್ರಿ ಮಾಡಿಸುವುದಿಲ್ಲ. ಎಚ್ ಪಿ ಕ್ಯಾನ್ಸಲೇಶನ್ ಮಾಡಿಸಲು 1500 ರೂ ವಿಧಿಸುತ್ತಾರೆ ಆದರೆ ಎಚ್ ಪಿ ಕ್ಯಾನ್ಸಲ್ ಮಾಡಿಸುವುದಿಲ್ಲ. ಸಿಜ್ ಮಾಡಿದ ವಾಹನಗಳನ್ನು ಮಾರಾಟ ಮಾಡಿದ ನಂತರ ಆರ್ ಸಿ ಕಾರ್ಡ್ ಬೇರೆಯವರಿಗೆ ಬದಲಾವಣೆ ಮಾಡಿಸದೇ ಹಳೆಯ ಮಾಲೀಕರ ಹೆಸರಿನಲ್ಲೆ ಮುಂದುವರೆಸುತ್ತಾರೆ. ಮಾರಾಟವಾದ ವಾಹನದಲ್ಲಿ ಯಾವುದೇ ರೀತಿ ತೊಂದರೆಯಾದರೆ ಅದರ ಜವಾಬ್ದಾರಿಯನ್ನು ಮೊದಲಿನ ಮಾಲೀಕನೇ ಹೊರಬೇಕಾಗುತ್ತದ ಎಂದರು.

ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ತಿಂಗಳಿಗೆ ಶೇ 2ರಷ್ಟು ಬಡ್ಡಿ ವಿಧಿಸುತ್ತಾರೆ. ಇಲ್ಲಿ ವಿಪರೀತ ಮೀಟರ್ ಬಡ್ಡಿ ದಂಧೆ ನಡೆಯುತ್ತದೆ. ಫ್ಲಾಟ್ ಇಂಟ್ರೆಸ್ಟ್ ಹಾಕುತ್ತಾರೆ. ಒಂದೇ ಸರಿ ಲೋನ್ ಕ್ಲಿಯರ್ ಮಾಡಲು ಹೋದರೆ ಫ್ಯೂಚರ್ ಇಂಟರೆಸ್ಟ್ ಬಿಟ್ಟುಕೊಡುವುದಿಲ್ಲ. ಅಧಿಕ ಬಡ್ಡಿ ದರ ವಿಧಿಸುತ್ತಾರೆ. ವಾರ್ಷಿಕವಾಗಿ 35 % ಬಡ್ಡಿ ದರ ಪಡೆಯುತ್ತಾರೆ. ಲೇಟ್ ಚಾರ್ಜಸ್ ಹೆಸರಿನಲ್ಲಿ 1500-2000 ರೂ ವರೆಗೂ ಹೆಚ್ಚುವರಿ ಹಣ ಪಡೆಯುತ್ತಾರೆ ಅದಕ್ಕೆ ಯಾವುದೇ ರಶೀದಿ ನೀಡುವುದಿಲ್ಲ. ಹೀಗಾಗಿ ಸರ್ಕಾರ ನಮ್ಮ ರಕ್ಷಣೆಗೆ ಕೂಡಲೇ ಧಾವಿಸಬೇಕು ಎಂದು ಹೇಳಿದರು.