ಬಳ್ಳಾರಿ: 2024ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ರಾಜ್ಯದಾದ್ಯಂತ ಆ.5 ರಿಂದ ಬಸ್ ಸಂಚಾರ ಬಂದ್ ಮಾಡಿ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದ್ದೇವೆ ಎಂದು ಕಾರ್ಮಿಕ ಮುಖಂಡರಾದ ಹೆಚ್.ಎ.ಆದಿಮೂರ್ತಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಆಗಸ್ಟ್ 4 ರೊಳಗೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ. 2020ರ ಜನವರಿ 1 ರಿಂದ ಸಾರಿಗೆ ನೌಕರರ ವೇತನ ಶೇ 15ರಷ್ಟು ಹೆಚ್ಚಳವಾಗಿತ್ತು. ಪರಿಷ್ಕರಣೆ ನಂತರದ 38 ತಿಂಗಳ ಹಣ ನೀಡುವುದು ಬಾಕಿ ಇದೆ. 2023ರ ಡಿಸೆಂಬರ್ 31ರಂದು ಇದ್ದ ಮೂಲ ವೇತನದಲ್ಲಿ ಶೇ 31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ, 2024ರ ಜನವರಿ 1ರಿಂದ ಅನ್ವಯವಾಗುವಂತೆ ಶೇ 25ರಷ್ಟು ವೇತನ ಹೆಚ್ಚಿಸಬೇಕು. ಇಲ್ಲದಿದ್ದರೆ ಈ ಮುಷ್ಕರ ಅನಿವಾರ್ಯ ಎಂದರು.
ಏಪ್ರಿಲ್ 15ರಂದು ಕರೆದಿದ್ದ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಜುಲೈ 4ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನಿಗಮಗಳ ನೌಕರರಿಗೆ 38 ತಿಂಗಳ ಹಿಂಬಾಕಿ ಕೊಡಬೇಕಾಗಿಲ್ಲ. 2027ರವರೆಗೆ ವೇತನ ಪರಿಷ್ಕರಣೆ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಮುಷ್ಕರ ಮಾಡುವದೇ ನಮಗಿರುವ ದಾರಿ ಎಂದರು.

ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲನೆ ಗ್ಯಾರಂಟಿಯಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತು. ನೌಕರರ ಹಾಗೂ ವಾಹನಗಳ ಸಂಖ್ಯೆ ಕಡಿಮೆ ಇದ್ದರೂ ನಾವು ಕಷ್ಟ ಪಟ್ಟು ಕೆಲಸ ಮಾಡಿ ಶಕ್ತಿ ಯೋಜನೆಯನ್ನು ಯಶಸ್ವಿ ಮಾಡಿದೆವು. ಈಗಾಗಲೇ ೫೦೦ ಕೋಟಿ ಮಹಿಳಾ ಪ್ರಯಾಣಿಕರು ನಮ್ಮ ಸೇವೆಯನ್ನು ಪಡೆದಿದ್ದಾರೆ. ಇದನ್ನು ಜಾರಿ ಮಾಡುವುದರಲ್ಲಿ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಇತರ ಎಲ್ಲಾ ಸಿಬ್ಬಂದಿಗಳೂ ಹೈರಾಣಾಗಿದ್ದಾರೆ. ಈ ನಮ್ಮ ಸೇವೆ ಮತ್ತು ಅದರ ಹಿಂದಿರುವ ಪರಿಶ್ರಮವನ್ನು ಸರ್ಕಾರವು ಗುರುತಿಸದೆ ಸಾರಿಗೆ ನೌಕರರಿಗೆ ವಿಶ್ವಾಸ ದ್ರೋಹವೆಸಗಿದೆ ಎಂದು ಕಿಡಿ ಕಾರಿದರು.
ಸಿಎಂ ಸಿದ್ದರಾಮಯ್ಯ ನವರು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಕೆ.ಎಸ್.ಆರ್.ಟಿ.ಸಿ. ನೌಕರರ ಸಮಸ್ಯೆ ಕೇಳಲಿಲ್ಲ, ಇವತ್ತು ಅವರನ್ನ ಹೆದರಿಸಿ, ಬೆದರಿಸಿ ಎಸ್ಮಾ ತರ್ತೀವಿ, ಖಾಸಗಿ ಬಸ್ಗಳನ್ನು ಓಡಿಸ್ತೀವಿ ಸರ್ಕಾರಿ ಬಸ್ಗಳನ್ನು ನಿಲ್ಲಿಸಬಿಡ್ತೀವಿ, ವರ್ಗಾಮಾಡ್ತೀವಿ, ಡಿಸ್ಮಿಸ್ ಮಾಡ್ತೀವಿ ಎಂದು ಹೆದರಿಸಿದ್ದರು. ಕುರ್ಚಿ ಶಾಶ್ವತ ಅಂತ ತಿಳಿದುಕೊಂಡಿದ್ದೀಯ ಯಡ್ಯೂರಪ್ಪ?" ಎಂದು ಹೇಳಿದ್ದರು. ಇವತ್ತು ಅವರು ಮಾಡುತ್ತಿರುವುದಾದರೂ ಏನು? ಎಂದು ಪ್ರಶ್ನಿಸಿದ ಅವರು, ನಮ್ಮ ಕಾರ್ಮಿಕರು ಬಸ್ ಸ್ಟಾಂಡ್ ಗಳಲ್ಲಿ ಹಾಗೂ ಡಿಪೋಗಳಲ್ಲಿ ವಿಶ್ರಾಂತಿ ಕೊಠಡಿ ಸೇರಿದಂತೆ ಇನ್ನಿತರೆ ಮೂಲಭೂತ ಸೌಲಭ್ಯಗಳಿಲ್ಲದೇ ನರಳುತ್ತಿದ್ದೇವೆ ಎಂದರು.
ಸರ್ಕಾರ ಮರು ಆಲೋಚನೆ ಮಾಡಿ ಮುಕ್ತಮನಸ್ಸಿನಿಂದ ನಮ್ಮ ಬೇಡಿಕೆಗಳನ್ನು ಸಂಧಾನದ ಮೂಲಕ ಬಗೆಹರಿಸಲು ಅವಕಾಶವಿದೆ. ಎಸ್ಮಾ ಮತ್ತಿತರ ಕಾರ್ಮಿಕ ವಿರೋಧಿ ಕ್ರಮಗಳಿಂದ ನಮ್ಮ ಹೋರಾಟದ ಕಿಚ್ಚನ್ನು ನಂದಿಸಲು ಸಾಧ್ಯವಿಲ್ಲ. ನಾವು ಸಂಧಾನಕ್ಕೂ, ಸಂಘರ್ಷಕ್ಕೂ ಸಿದ್ಧರಿದ್ದೇವೆ. ಆಯ್ಕೆ ಸರ್ಕಾರಕ್ಕೆ ಸೇರಿದ್ದು. ನಮ್ಮ ಮುಷ್ಕರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಾಹ್ಯ ಬೆಂಬಲ ನೀಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ ೫ ರಂದು ಕರೆ ನೀಡಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬಾಹ್ಯ ಬೆಂಬಲ ನೀಡಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ಮಜ್ದೂರ್ ಸಂಘವು ಸಹ ತಿಳಿಸಿದೆ. ಅಂದು ರಾಜ್ಯಾದ್ಯಂತ ಎಲ್ಲಾ ಬಸ್ ಸಂಚಾರ ಸ್ಥಗಿತವಾಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಟಿ.ಚನ್ನಪ್ಪ, ಶಿವಕುಮಾರ್, ಶಫೀ, ಗಾಂದಿಲಿಂಗಪ್ಪ, ಬಸವರಾಜ್, ಹನುಮಂತಪ್ಪ, ಬಸವರಾಜ್, ಹನುಮಂತರೆಡ್ಡಿ, ಹನುಮನಾಯ್ಕ್, ಸೇರಿದಂತೆ ಇನ್ನಿತರರು ಇದ್ದರು.