ಬೆಂಗಳೂರು : ಶ್ರೀ ಗುರುಲಿಂಗೇಶ್ವರ್ ಟ್ರಸ್ಟ್ ನಿಂದ ಶ್ರೀ ಜ್ಞಾನಾಂಬಿಕಾ ಸಮೇತ ಗುರುಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅದ್ದೂರಿ ಮತ್ತು ವೈಭವಯುತವಾಗಿ ಆಚರಿಸಲಾಯಿತು. ಈ ಬಾರಿ ಸಂಕ್ರಾಂತಿ ವಿಶೇಷವಾಗಿ, 1 ಲಕ್ಷಕ್ಕೂ ಹೆಚ್ಚು ಕಬ್ಬಿನ ಕಡ್ಡಿಗಳಿಂದ ದೇವಾಲಯದ ಆವರಣವನ್ನು ಶೋಭಾಯಮಾನವಾಗಿ ಅಲಂಕರಿಸಲಾಗಿದ್ದು, ಭಕ್ತರಿಗೆ ವಿಶೇಷ ಆಕರ್ಷಣೆಯಾಗಿದೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಶಾಸಕರಾದ ಸಿ. ಕೆ. ರಾಮಮೂರ್ತಿ, ಟ್ರಸ್ಟ್ ಅಧ್ಯಕ್ಷ ಕೃಷ್ಣಂರಾಜು, ಕಾರ್ಯದರ್ಶಿ ಸತ್ಯನಾರಾಯಣ ರಾಜು, ಖಜಾಂಚಿ ಗೋವಿಂದರಾಜು, ಸಹಾಯಕರಾದ ಸುಂದರರಾಜು ಹಾಜರಿದ್ದರು ಮತ್ತು ಸಂಕ್ರಾಂತಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಮೂಹಿಕ ಮಕರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಮತ್ತು ಭಕ್ತರು ಭಾಗವಹಿಸಿದರು. ದಿನವಿಡೀ ಗಣಪತಿ ಪೂಜೆ, ಮೃತ್ಯುಂಜಯ ಹೋಮ, ವಿಶೇಷ ಮಂಗಳಾರತಿ, ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗವನ್ನು ಆಯೋಜಿಸಲಾಗಿತ್ತು.
ಸಂಕ್ರಾಂತಿ ಅಂಗವಾಗಿ ಸಾಮೂಹಿಕ ಪೊಂಗಲ್ ಅಚರಣೆ ಕೂಡ ನೆರವೇರಿತು. ಅಲಂಕರಿಸಿದ ಪೊಂಗಲ್ ಕುಂಡಗಳೊಂದಿಗೆ ಮೆರವಣಿಗೆ ನಡೆಸಿದ ದೃಶ್ಯ ದೇವಾಲಯದ ಆವರಣಕ್ಕೆ ಹೊಸ ಮೆರಗು ತಂದಿತು.
ಪೌರಾಣಿಕ ಇತಿಹಾಸ ಹೊಂದಿರುವ ಶ್ರೀ ಗುರುಲಿಂಗೇಶ್ವರ ದೇವಾಲಯದಲ್ಲಿ ಶಿವ, ವಿಷ್ಣು, ಬ್ರಹ್ಮ ಸಾನ್ನಿಧ್ಯದಲ್ಲಿ ಸಂಪ್ರದಾಯಬದ್ಧವಾಗಿ ಸಂಕ್ರಾಂತಿ ಆಚರಣೆ ಯನ್ನು ಶತಮಾನಗಳಿಂದ ಮುಂದುವರಿಸಲಾಗಿದೆ. ಹಿಂದೆ ದೇವಾಲಯದ ಸುತ್ತ ಹೊಲ, ಗದ್ದೆಗಳಲ್ಲಿ ಎಲ್ಲರೂ ಒಂದೇ ಕುಟುಂಬದಂತೆ ಸಂಕ್ರಾಂತಿ ಆಚರಿಸುತ್ತಿದ್ದರು; ಇದೇ ಪರಂಪರೆಯನ್ನು ಈಗಲೂ ಮುಂದುವರೆಸಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.