ನಗರದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ, ಇದನ್ನು ಸುಧಾರಿಸಲು ಜಾತಿ ಜನಗಣತಿಯನ್ನು ನಡೆಸಿ ಸರ್ಕಾರಕ್ಕೆ ಹೊರೆಯಾಗಿರುವ 16 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ಮತ್ತು ಉಳ್ಳವರ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದರು.
ಜಾತಿ ಜನಗಣತಿ ವಿಷಯವಾಗಿ ಸರ್ಕಾರ ಪದೇ ಪದೇ ಹಣವನ್ನು ಪೋಲು ಮಾಡುತ್ತಿದೆ, 10 ವರ್ಷಗಳ ಕಾಲ ಕಾಂತರಾಜ್ ವರದಿಯನ್ನು ತಯಾರಿಸಲು 165 ಕೋಟಿ ರೂಪಾಯಿ ಖರ್ಚು ಮಾಡಿದೆ. ಸದಾಶಿವ ಆಯೋಗ ವರದಿಯಂತೆ ಜಾತಿ ಜನಗಣತಿಯನ್ನು ನಡೆಸಲು ಈಗ 120 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ತೆಗೆದಿರಿಸಲಾಗಿದೆ. ಇದು ರಾಜ್ಯ ಹಣಕಾಸು ಇಲಾಖೆಗೆ ಹೊರೆಯಾಗಲಿದೆ. ಇದು ಕಾಂಗ್ರೆಸ್ ಸರ್ಕಾರದ ಹಣ ಲಪಟಾಯಿಸುವ ದುರುದ್ದೇಶವಾಗಿದೆ ಎಂದು ಟೀಕಿಸಿದರು.

1.75 ಲಕ್ಷ ಜನ ಈ ಗಣತಿಯಲ್ಲಿ ಪಾಲ್ಗೊಳ್ಳಲಿದ್ದು, ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರು ತಮ್ಮ ಕೆಲಸದ ಹೊರೆ ಮಧ್ಯೆ ಈ ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ೩೨೫ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. 120 ರಿಂದ 150 ಕೋಟಿ ರೂಪಾಯಿಗಳನ್ನು ಲಪಟಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯನವರು ತಮ್ಮ ಆಪ್ತರಾದ ಮಧುಸೂದನ್ ನಾಯಕ್ ಅವರನ್ನು ಸಮಿತಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದರು.
ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಮುಖಂಡರಾದ ಬಿ.ಓಬಳೇಸ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಕೆ ಹನುಮಂತಪ್ಪ, ಗುಡಿಗಂಟಿ ಹನುಮಂತಪ್ಪ, ಬಿಜೆಪಿ ಮುಖಂಡರಾದ ವೆಂಕಟರಾಮರೆಡ್ಡಿ, ತಿಮ್ಮಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.