ಬಳ್ಳಾರಿ : ಮತ್ತೊಬ್ಬ ಜೀವನಕ್ಕಾಗಿ ಬದುಕನ್ನು ಸವೆಸುವವರು ಸಮಾಜದಲ್ಲಿ ದೊಡ್ಡವರಾಗುತ್ತಾರೆ ಎಂದು ಶ್ರೀಚಿಕೇನಕೊಪ್ಪ ಚನ್ನವೀರ ಮಠದ ಶಿವಶಾಂತವೀರ ಶರಣರು ತಿಳಿಸಿದ್ದಾರೆ.
ಬಳ್ಳಾರಿಯ ಶರಣಬಳಗ ಶ್ರೀ ಸಕ್ಕರೆ ಕರಡೀಶ ಪ್ರಸಾದ ನಿಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಆಶೀರ್ವಚನ ಮಾಡಿದರು.

ಡಾ. ವಿಜಯ ನಾಗರಾಜ್, ಅವರ ತಂದೆ ಡಾ. ನಾಗರಾಜ್ ಮತ್ತು ತಂಡವು ಶರಣರ ಬಳಗದ ಉಚಿತ ನೇತ್ರ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಮೂಲಕ ವೈದ್ಯರ ಈ ಕುಟುಂಬ ಜೀವಮಾನದ ಜನಸೇವೆಯಲ್ಲಿ ತೊಡಗಿಕೊಂಡಿದೆ. ದೇವರು ಈ ಕುಟುಂಬಕ್ಕೆ ಸದಾ ಒಳಿತನ್ನು ಮಾಡಲಿ ಎಂದರು.
ಪ್ರತಿಯೊಬ್ಬರಿಗೂ ಪಂಚೇಂದ್ರಿಯಗಳು ಮುಖ್ಯ. ಅದರಲ್ಲೂ ಕಣ್ಣು ಚೆನ್ನಾಗಿ ಇದ್ದಲ್ಲಿ ಸ್ವತಂತ್ರವಾಗಿ ಜೀವನ ಮಾಡಲು ಸಮಸ್ಯೆ ಆಗುವುದಿಲ್ಲ. ಕಾರಣ, ಪ್ರತಿಯೊಬ್ಬರೂ ದೃಷ್ಟಿಯನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚನ್ನವೀರ ಶರಣರು ೧೯೮೫ ರಿಂದಲೂ ಕರ್ನಾಟಕ - ಆಂದ್ರಪ್ರದೇಶದ ಹಲವೆಡೆ ಉಚಿತ ನೇತ್ರ ಶಿಬಿರಗಳನ್ನು ನಡೆಸಿ, ಲಕ್ಷಾಂತರ ಜನಗಳಿಗೆ ಶಿಬಿರದ ಅನುಕೂಲ ಉಣಬಡಿಸಿದ್ದಾರೆ ಎಂದರು.

ವೇದಿಕೆಯಲ್ಲಿ ದಾಸೋಹ ದಾನಿ ರಾವೂರ್ ಸುನೀಲ್ ಅವರ ಸಹೋದರ ನರೇಶ್ ಕುಮಾರ್, ಕೆ.ಎ. ರಾಮಲಿಂಗಪ್ಪ, ಡಾ. ವಿಜಯ ನಾಗರಾಜ್, ಕೆ. ಉಮಾಶಂಕರ್, ಬಾಡದ ಬದ್ರಿ, ಕಟ್ಟೇಗೌಡ ಇನ್ನಿತರರು ಉಪಸ್ಥಿತರಿದ್ದರು.
150 ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆಗೆ ಒಳಪಟ್ಟರು.