ನಾಯಕನಹಟ್ಟಿ : ಮನುಷ್ಯನ ಹುಟ್ಟು ಉಚಿತ, ಸಾವು ಕೂಡ ನಿಶ್ಚಿತ. ಆದರೆ ಇದರ ನಡುವೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕಿದೆ. ಆ ಮೂಲಕ ಸಾರ್ಥಕತೆ ಕಾಣಬೇಕಿದೆ. ಇಲ್ಲೊಬ್ಬ ದಂಪತಿಯಿಂದ ಅಂಗಾಂಗ ದಾನ ಮಾಡಲು ಒಪ್ಪಿಗೆ ಪತ್ರ ಬರೆದುಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ದಾನ ಮಾಡಲು ಯಾರು ಕೂಡ ಅಷ್ಟು ಸುಲಭವಾಗಿ ಮುಂದೆ ಬರುವುದಿಲ್ಲ. ಈಗ ಸಂಪರ್ಕ ಮಾಧ್ಯಮಗಳ ನಡುವೆ ಅಲ್ಲೊಂದು, ಇಲ್ಲೊಂದು ಬ್ರೈನ್ ಡೆತ್ ಆದಾಗ ಅವರ ಕುಟುಂಬದವರು ಮಹತ್ವದ ತೀರ್ಮಾನ ಮಾಡಿ, ಕನಿಷ್ಠ ನಾಲೈದು ಜೀವಂತ ವ್ಯಕ್ತಿಗಳಿಗೆ ಅಂಗಾಂಗ ದಾನದ ಮೂಲಕ ನೆರವು ನೀಡುವಂತಹ ಮಹತ್ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಇದೊಂದು ಹೆಮ್ಮೆಯ ವಿಷಯ. ಪಟ್ಟಣದ ಶಾಂತಿನಗರ ನಿವಾಸಿ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಅ.ಮೃತ್ಯುಂಜಯ ಮತ್ತು ಅವರ ಪತ್ನಿ ಎಸ್.ಪುಷ್ಪಲತಾ ಮೃತ್ಯುಂಜಯ ಅವರು ದೇಹ ದಾನಕ್ಕೆ ಮುಂದಾಗಿರುವ ದಂಪತಿಗಳು, ವೃತ್ತಿಯಲ್ಲಿ 29 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ವಿವಿಧ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲಸ ನಿರ್ವಹಿಸಿ, ಅಂತಿಮವಾಗಿ ನಾಲ್ಕು ವರ್ಷ ಬಿಇಓ ಕಚೇರಿಯಲ್ಲಿ ದೈಹಿಕ ಶಿಕ್ಷಣದ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ, 2019ರ ಫೆಬ್ರವರಿ ಮಾಯೆಯಲ್ಲಿ ನಿವೃತ್ತರಾಗಿದ್ದಾರೆ.
ವೃತ್ತಿಯಲ್ಲಿದ್ದಾಗಲೇ ತಮ್ಮ ವಿಶಿಷ್ಟವಾದ ಪ್ರವೃತ್ತಿಯಲ್ಲಿ ಹೆಸರು ಪಡೆದವರು ಆ ಮೃತ್ಯುಂಜಯ. ಈ ಹೆಸರಿನಲ್ಲೇ ರಾಜ್ಯದ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಅನೇಕ ಚುಟುಕು, ಕವನ, ಲೇಖನ, ವ್ಯಕ್ತಿ-ಚಿತ್ರ, ಕಥೆ, ಸಂಗ್ರಹ ಯೋಗ್ಯ ಮಾಹಿತಿ ಎಲ್ಲವನ್ನೂ ಕೂಡ ಬರೆಯುತ್ತಾ ಬಂದವರು. ಈಗಲೂ ಕೂಡ ಅವರ ಮನೆಯಲ್ಲಿ ಅನೇಕ ಹಳೆಯ ಪುಸ್ತಕಗಳು ಮತ್ತು ಪತ್ರಿಕೆಗಳ ಸಂಗ್ರಹವು ಕೂಡ ಇವೆ. ಅವರು ಸಂಗ್ರಹಿಸಿರುವ ಹಳೆಯ ಕಾಲದ ಅಪರೂಪದ ಫೋಟೋಗಳು, ಸ್ನೇಹಿತರ ಶಿಷ್ಯರ ಪತ್ರಗಳು, ಲೇಖನಗಳ ಸಂಗ್ರಹ, ಪುಸ್ತಕಗಳು, ಪತ್ರಿಕೆಗಳು, ಪ್ರದರ್ಶನ ಮಾಡುವ ಆಶಯ ಅವರದ್ದು. ಅಂದು ನನ್ನ ಪ್ರವೃತ್ತಿಯಾಗಿ ಬೆಳೆದ ಸಾಹಿತ್ಯದ ವಿವಿಧ ಪ್ರಕಾರಗಳ ಸೇವೆಯು ಇಂದು ನನಗೆ ನಿವೃತ್ತಿಯ ನಂತರ ಆಶ್ರಯದಾತವಾಗಿದೆ. ಜತೆಗೆ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೂಡ ಕೇಳುತ್ತಾ ಬೆಳೆದೆ, ಅನೇಕ ಕಾರ್ಯಕ್ರಮಗಳಲ್ಲೂ ಕೂಡ ಭಾಗಿಯಾಗುತ್ತಾ ಬಂದಿದ್ದೇನೆ, ಜೊತೆಗೆ ಪತ್ರ- ಮಿತ್ರ ಹವ್ಯಾಸವನ್ನು ಕೂಡ ಹೊಂದಿದ್ದೇನೆ. ರಾಜ್ಯದ್ಯಂತ ಅನೇಕ ಪತ್ರ- ಮಿತ್ರರನ್ನು ಕೂಡ ಸಂಪಾದಿಸಿಕೊAಡಿದ್ದೇನೆ. ಇತ್ತೀಚಿಗೆ ನನ್ನ ಹಲವು ಶಿಷ್ಯರು ಸೇರಿ ನಮಗೆ ಸನ್ಮಾನ ಕಾರ್ಯಕ್ರಮಗಳನ್ನು ಮಾಡಿದರು. ಇದಕ್ಕಿಂತ ದೊಡ್ಡ ಆಸ್ತಿ ಬೇಕೆ ಎನ್ನುತ್ತಾರೆ ಅ.ಮೃತ್ಯುಂಜಯ.
ಜಾಗೃತ ಅಂಕಣಕಾರ ಪ್ರಶಸ್ತಿ, ಮಾತೃ ಭೂಮಿಸೇವಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ರಾಷ್ಟ್ರ ಪ್ರಶಸ್ತಿ, ಆದರ್ಶ ದಂಪತಿಗಳ ಪ್ರಶಸ್ತಿ, ಸಂಗೋಳ್ಳಿ ರಾಯಣ್ಣ ಸದ್ಬಾವನ ಪ್ರಶಸ್ತಿ, ಕನ್ನಡಯಸ್ವಿನಿ ಅಚೀವ್ಮೆಂಟ್ ಅವಾರ್ಡ್, ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿ, ತ್ರಿಕಾಲರತ್ನ ಪ್ರಶಸ್ತಿ, ಸ್ವರ್ಣಭೂಮಿ ಸದ್ಬಾವನ ಪ್ರಶಸ್ತಿ, ಸರಸ್ವತಿ ಕನ್ನಡ ರತ್ನ ಪ್ರಶಸ್ತಿ, ಗುರುವಂದನಾ ಕಾರ್ಯಕ್ರಮ ಸನ್ಮಾನ ಕಾರ್ಯಕ್ರಮಗಳು ಮಾಡಿದ್ದಾರೆ.