ಮರಿಯಮ್ಮನಹಳ್ಳಿ: ಭಾರತ ಜನಗಣತಿ ಆರಂಭವಾಗಿದ್ದು, ಸಾರ್ವಜನಿಕರು ಆನ್ಲೈನ್ ಮುಖಾಂತರ ಸ್ವಯಂ ಗಣತಿ ಮಾಡಿಕೊಳ್ಳಿ ಎಂದು ಹೊಸಪೇಟೆ ತಹಶಿಲ್ದಾರ ಶೃತಿ ಮಳ್ಳಪ್ಪ ಗೌಡರ ತಿಳಿಸಿದರು.
ಅವರು ಪಟ್ಟಣದ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರ ನಿವಾಸದಲ್ಲಿ ಅವರಿಂದಲೇ ಸ್ವಯಂ ಗಣತಿ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿಸಿ ಮಾತನಾಡಿದರು.
ಸಾವಜನಿಕರು ಆನ್ಲೈನ್ ಪೋರ್ಟಲ್ ಅಥವಾ ಆಪ್ ಮುಖಾಂತರ ಸ್ವಯಂ ಗಣತಿಗೆ ಒಳಪಡಿಸಿಕೊಂಡು ಕೋಡ್ ನಂಬರ್ ಪಡೆದುಕೊಳ್ಳ ಬೇಕು. ಏ.15 ರನಂತರ ಸ್ವಯಂ ಗಣತಿಗೆ ಒಳಗಾಗದವರಿಗೆ ಗಣತಿ ಮಾಡಲು ಗಣತಿದಾರರು ಬಂದಾಗ ಕೋಡ್ನಂಬರ್ ಕೊಟ್ಟರೆ ಸಾಕು. ಗಣತಿ ಆಗದವರಿಗೆ ಗಣತಿದಾರರೇ ಖುದ್ದು ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.
ಮಾತಾ ಮಂಜಮ್ಮ ಜೋಗತಿ ಚಾಲನೆ ನೀಡಿ, ಪ್ರತಿಯೊಬ್ಬರೂ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಪಟ್ಟಣದ ನಾಡಕಚೇರಿಯ ಉಪತಹಶಿಲ್ದಾರ ಶ್ರೀಧರ, ಗ್ರಾಮ ಲೆಕ್ಕಾಧಿಕಾರಿ ಅನಿತಾ, ಸಿಆರ್ಪಿ ಕರಿಬಸಪ್ಪ ಇತರರು ಇದ್ದರು.