LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೆಚ್ಚುತ್ತಿರುವ ಬಿಸಿಲಿನ ತಾಪ: ಸಾರ್ವಜನಿಕರು ಜಾಗೃತಿ ವಹಿಸಲು ಮನವಿ

ಬಳ್ಳಾರಿ: ಪ್ರಸಕ್ತ ವರ್ಷ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾರತೀಯ ಹವಮಾನ ಇಲಾಖೆಯ ಮುನ್ಸೂಚನೆಯಂತೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಮನವಿ ಮಾಡಿದ್ದಾರೆ.

ಶಾಖಾಘಾತ ಹಾಗೂ ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅವರು ತಿಳಿಸಿದ್ದಾರೆ.

ಏನು ಮಾಡಬೇಕು?:

ಮನೆಯಿಂದ ಹೊರಬರುವಾಗ ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಗಾಳಿಯಾಡುವ ಪಾದರಕ್ಷೆಗಳನ್ನು ಬಳಸಬೇಕು. ಸದಾ ಕುಡಿಯುವ ನೀರನ್ನು ಜೊತೆಯಲ್ಲಿಟ್ಟುಕೊಳ್ಳಿ. ಬಾಯಾರಿಕೆಯಾಗದಿದ್ದರೂ ನಿಯಮಿತವಾಗಿ ನೀರು, ಮಜ್ಜಿಗೆ, ಎಳೆನೀರು ಅಥವಾ ಹಣ್ಣಿನ ರಸ ಸೇವಿಸಿ. ಓಆರ್‌ಎಸ್ ದ್ರಾವಣ ಬಳಸುವುದು ಉತ್ತಮ.

ಶುದ್ಧ ಹಾಗೂ ಮಸಾಲೆ ರಹಿತ ಆಹಾರಕ್ಕೆ ಆದ್ಯತೆ ನೀಡಿ. ಬೆರವನನ್ನು ಒರೆಸಲು ಮೆತ್ತನೆಯ ಕರವಸ್ತ್ರ ಅಥವಾ ಟಿಶ್ಯೂ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.



ಏನು ಮಾಡಬಾರದು?:

ಅತಿಯಾದ ಕಾಫಿ, ಟೀ, ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್ ಹಾಗೂ ಮದ್ಯಪಾನ ತ್ಯಜಿಸಬೇಕು. ಇವು ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತವೆ. ರಸ್ತೆಬದಿಯ ತೆರೆದಿಟ್ಟ ಆಹಾರ, ಮಾಂಸಾಹಾರ ಹಾಗೂ ಅತಿಯಾದ ಮಸಾಲೆ ಪದಾರ್ಥಗಳನ್ನು ಸೇವಿಸಬಾರದು.

ಬಿಸಿಲಿನಿಂದ ಸುಸ್ತಾದಾಗ ತಕ್ಷಣವೇ ಅತಿ ತಣ್ಣಗಿನ ಐಸ್ ನೀರನ್ನು ಮೈಗೆ ಹಾಕಿಕೊಳ್ಳಬೇಡಿ. ಇದರಿಂದ ರಕ್ತನಾಳಗಳು ಸಂಕುಚಿತಗೊಂಡು ದೇಹದ ಒಳಗಿನ ಉಷ್ಣತೆ ಏರಿಕೆಯಾಗಿ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಶಾಖಾಘಾತದ ಲಕ್ಷಣಗಳು ಮತ್ತು ಚಿಕಿತ್ಸೆ:

ತೊದಲು ಮಾತು, ಅರೆಪ್ರಜ್ಞೆ, ಅತಿಯಾದ ದೇಹದ ಉಷ್ಣತೆ ಮತ್ತು ಉಸಿರಾಟದ ತೊಂದರೆ ಕಂಡುಬಂದರೆ ಅದು ಶಾಖಾಘಾತದ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ತಕ್ಷಣ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಕಾಲುಗಳನ್ನು ಸ್ವಲ್ಪ ಮೇಲಕ್ಕೆ ಎತ್ತಿ ಮಲಗಿಸಿ, ಬಟ್ಟೆಗಳನ್ನು ಸಡಿಲಗೊಳಿಸಬೇಕು. ಸಾಮಾನ್ಯ ನೀರಿನಿಂದ (ಐಸ್ ನೀರಲ್ಲ) ದೇಹವನ್ನು ಒರೆಸಿ ತಂಪು ಮಾಡಬೇಕು. ಸ್ಥಿತಿ ಗಂಭೀರವಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದ್ದಾರೆ.

ವಾಂತಿ-ಬೇಧಿ ತಡೆಗಟ್ಟಲು ಕ್ರಮಗಳು:

ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ವಾಂತಿ-ಬೇಧಿ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಶುದ್ಧೀಕರಿಸಿದ ನೀರನ್ನೇ ಕುಡಿಯಬೇಕು. ಆಹಾರ ಸೇವಿಸುವ ಮುನ್ನ ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ ಕನಿಷ್ಠ ೪೫ ಸೆಕೆಂಡ್‌ಗಳ ಕಾಲ ತೊಳೆಯಬೇಕು. ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನೇ ಸೇವಿಸಬೇಕು. ತುರ್ತು ಸಂದರ್ಭದಲ್ಲಿ ನೆರವಿಗಾಗಿ ಉಚಿತ ಆರೋಗ್ಯ ಸಹಾಯವಾಣಿ ೧೦೮ ಕ್ಕೆ ಕರೆ ಮಾಡಬಹುದು ಎಂದು ಡಾ.ರಮೇಶ್ ಬಾಬು ತಿಳಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST