ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಅವರು, ಶೂ ಎಸೆತ ಸಣ್ಣ ಪ್ರಮಾಣದ ಕೃತ್ಯವಲ್ಲ. ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಬಿಜೆಪಿ ಮನಃಸ್ಥಿತಿ ಕಾರಣ. ಹಿಂದುಳಿದ ವರ್ಗಗಳ, ದಲಿತರ ನಾಯಕರು, ಅಧಿಕಾರಿಗಳನ್ನು ಗುರಿ ಮಾಡಿ ಟೀಕೆ ಮಾಡಲಾಗುತ್ತಿದೆ. ದೇಶದ ಇತಿಹಾಸದಲ್ಲಿ ಇಬ್ಬರು ದಲಿತರು ಮಾತ್ರ ಮುಖ್ಯನ್ಯಾಯಧೀಶರಾಗಿ ಕೆಲಸ ಮಾಡಿದ್ದಾರೆ. ಮೊದಲನೆಯದಾಗಿ ಜಸ್ಟೀಸ್ ಬಾಲಕೃಷ್ಣ ಅವರು, ಎರಡನೇ ವ್ಯಕ್ತಿಯಾಗಿ ಗವಾಯಿ ಅವರು. ಇಂತಹ ಉನ್ನತ ಸ್ಥಾನಕ್ಕೆ ದಲಿತರು ಹೋಗಿದ್ದಾರೆ ಎಂಬುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇದರ ವಿರುದ್ದ ಬಿಜೆಪಿ ಕೆಲಸ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಘನತೆ ಉಳಿಯಬೇಕು ಎಂದರೆ ಕೇಂದ್ರ ಸರ್ಕಾರ ಕಠಿಣ ಕ್ರಮ ತಗೆದುಕೊಳ್ಳಬೇಕು ಎಂದರು.
ದೇಶದ ಪ್ರಧಾನ ಮಂತ್ರಿಗಳು ಇಡೀ ದೇಶದಲ್ಲಿ ಯಾವುದೇ ಸಣ್ಣ ಘಟನೆಯಾದರೂ ಪ್ರಚಾರದ ಉದ್ದೇಶಕ್ಕಾದರೂ ಟ್ವೀಟ್ ಮಾಡುತ್ತಾರೆ. ಆದರೆ ಶೂ ಎಸೆತ ಘಟನೆಯಾದ ಆರು ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಇದರಲ್ಲಿ ಇವರ ಪಾತ್ರವೂ ಇದೆಯೇ? ಎನ್ನುವ ಅನುಮಾನ ಮೂಡುತ್ತಿದೆ. ಸುಪ್ರೀಂ ಮುಖ್ಯನ್ಯಾಯಧೀಶರಾದ ಗವಾಯಿ ಅವರು ಇಂತಹ ಘಟನೆಗಳಿಂದ ನಾನು ವಿಚಲಿತನಾಗುವುದಿಲ್ಲ, ನೀವುಗಳೂ ಸಹ ವಿಚಲಿತರಾಗಬೇಡಿ. ನೀವು ಕಲಾಪ ಮುಂದುವರೆಸಿ ಎಂದು ಸ್ಥಳದಲ್ಲಿದ್ದ ವಕೀಲರಿಗೆ ಅವರು ತಿಳಿಸಿದರು. ಇದು ಅವರ ಮೇಲಿನ ಮೊದಲ ಹಲ್ಲೆ ಪ್ರಕರಣ ಮಾತ್ರವಲ್ಲ ಕೆಲವು ದಿನಗಳ ಹಿಂದೆಯೂ ಹಲ್ಲೆ ಪ್ರಯತ್ನವಾಗಿತ್ತು. ಆದರೂ ಮೋದಿ ಸರ್ಕಾರ ಈ ದೇಶದ ಉನ್ನತ ಸ್ಥಾನದಲ್ಲಿರುವ ದಲಿತ ವ್ಯಕ್ತಿಯ ಮೇಲೆ ಅಸಡ್ಡೆ ಹೊಂದಿದೆ.
ಮೋದಿ ಅವರ ಸಂಪುಟದ ಸಹೋದ್ಯೋಗಿಗಳು ಇಂತಹ ಘಟನೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾಗಿದ್ದಾರೆ. ಉಪರಾಷ್ಟ್ರಪತಿ ಚುನಾವಣೆ ವೇಳೆ ಯುಪಿಎ ಅಭ್ಯರ್ಥಿಗಳಾಗಿದ್ದ ಸುದರ್ಶನ ರೆಡ್ಡಿ ಅವರ ಮೇಲೆ ದೇಶದ ಗೃಹಮಂತ್ರಿ ಅಮಿತ್ ಶಾ ಅವರು ನಕ್ಸಲ್ ಎಂದು ಆರೋಪ ಮಾಡಿದ್ದರು. ದಲಿತ, ಹಿಂದುಳಿದ ವರ್ಗಗಳ ಜನರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಲಾಗುತ್ತಿದೆ. ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಮುಖ್ಯ ನ್ಯಾಯಾಧೀಶರ ಮೇಲೆ ಆದ ದಾಳಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಇದು ಇವರ ವೈಯಕ್ತಿಕ ಹೇಳಿಕೆ ಮಾತ್ರವಲ್ಲ. ಇದು ಹಿಂದುತ್ವ ಮನುವಾದಿಗಳ, ಬಿಜೆಪಿಯ ಹೇಳಿಕೆಯಾಗಿದೆ.

ಗ್ವಾಲಿಯರ್ ಬಾರ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಎನ್ನುವ ವ್ಯಕ್ತಿ ಅಂಬೇಡ್ಕರ್ ಅವರು ಕೊಳಕು ಮನಸ್ಸಿನ ವ್ಯಕ್ತಿ ಎಂದು ಹೇಳಿದ್ದಾರೆ. ಅಂದರೆ ಇವರೆಲ್ಲರೂ ಬಿಜೆಪಿಯ ಮನಸ್ಥಿತಿಯನ್ನು ಈ ರೀತಿ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಬಿಜೆಪಿ ಸಿದ್ದಾಂತ ಎಂದಿಗೂ ಪರಿಶಿಷ್ಟ ಜಾತಿ, ಪಂಗಡದ ಪರವಾಗಿಲ್ಲ. ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷö್ಮಣ್ ಅವರನ್ನು ಷಡ್ಯಂತ್ರ ಮಾಡಿ ಜೈಲಿಗೆ ಹಾಕಲಾಯಿತು ಎಂದರು.
ಕೆಪಿಸಿಸಿ ರಾಜ್ಯ ಕಾನೂನು ಘಟಕದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಬಾಬು ಮಾತನಾಡಿ, ಆರನೇ ತಾರೀಕು ನಡೆದಿರುವ ಶೂ ಎಸೆತ ಪ್ರಕರಣದಿಂದ ಇಡೀ ಪ್ರಪಂಚದಲ್ಲಿ ದೇಶ ತಲೆತಲೆತಗ್ಗಿಸುವಂತಾಗಿದೆ. ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ಹೇಯ ಕೃತ್ಯ. ನಿವೃತ್ತ ನ್ಯಾಯಾಧೀಶರಿಂದ ಈ ಘಟನೆ ಬಗ್ಗೆ ತನಿಖೆಯಾಗಬೇಕು. ಗವಾಯಿ ಅವರು ಮುಖ್ಯನ್ಯಾಯಾಧೀಶರಾದ ಮೇಲೆ ತವರು ರಾಜ್ಯಕ್ಕೆ ಹೋದಾಗಲೂ ಸೂಕ್ತ ಭಧ್ರತೆ ನೀಡಲಿಲ್ಲ. ಇವರು ಇಂತಹ ಉನ್ನತ ಸ್ಥಾನಕ್ಕೆ ಹೋದ ದಿನದಿಂದ ಸನಾತನಿಗಳ ಗುರಿಗೆ ಒಳಗಾಗುತ್ತಿದ್ದಾರೆ. ಶೋಷಿತರನ್ನು ಉನ್ನತ ಸ್ಥಾನದಲ್ಲಿ ನೋಡಿ ಅಸೂಯೆಯಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಇಂತಹ ಘಟನೆ ನಡೆದರೆ ಮಿಕ್ಕ ನ್ಯಾಯಲಯಗಳ ಸ್ಥಿತಿಯೇನು? ಎಂದು ಪ್ರಶ್ನಿಸಿರುವ ಅವರು, ಇಂತಹ ಘಟನೆ ನಡೆದ ಮೇಲೆ ಮುಖ್ಯ ನ್ಯಾಯಾಧೀಶರು ಅತ್ಯಂತ ಘನತೆಯಿಂದ ನಡೆದುಕೊಂಡಿದ್ದಾರೆ. ಆರೋಪಿಯ ಶೂ ಅನ್ನು ಮರಳಿ ಆತನಿಗೆ ಕಳುಹಿಸಿದ್ದಾರೆ ಎಂದರು.
ಕೆಪಿಸಿಸಿ ಪರಿಶಿಷ್ಟ ಪಂಗಡ ಘಟಕದ ರಾಜ್ಯಾಧ್ಯಕ್ಷ ವಿಜಯ ನಾಯ್ಕ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ನಾಗರಾಜ ನಾಯಕ್, ಉಪಾಧ್ಯಕ್ಷ ಶ್ರೀಧರ್ ಅವರು, ಶ್ರೀನಿವಾಸ್ ಉಪಸ್ಥಿತರಿದ್ದರು.