ಈ ಸಂದರ್ಭದಲ್ಲಿ ಮಾತನಾಡಿದ ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷರು, ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕಾ.ಕೆ ಸೊಮಶೇಖರ್ ಅವರು ಮಾತನಾಡುತ್ತಾ "ಗುತ್ತಿಗೆದಾರರ ಟೆಂಡರ್ ನವೆಂಬರ್ 18ಕ್ಕೆ ಮುಗಿದ ಹಿನ್ನಲೆಯಲ್ಲಿ, ಎನ್.ಎಂ.ಡಿ.ಸಿ ಪೆಲೆಟ್ ಪ್ಲಾಂಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್ ನ ಗುತ್ತಿಗೆ ಕಾರ್ಮಿಕರ ಕೆಲಸವನ್ನು ಕೊನೆಗೊಳಿಸಲಾಗಿದೆ. ಮೂಲ ಮಾಲೀಕರಾದ ಎನ್.ಎಂ.ಡಿ.ಸಿಯು, ಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಖಾತ್ರಿಪಡಿಸದೆ, ಮುಂದಿನ ಗುತ್ತಿಗೆದಾರರು ಬರುವವರೆಗೂ ಕಾಯಬೇಕು ಎಂದು ಹೇಳುತ್ತಿದೆ. ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವ ಯಾವುದೇ ಭರವಸೆ ನೀಡುತ್ತಿಲ್ಲ. ಇದರಿಂದ ನೂರಾರು ಕಾರ್ಮಿಕರು ಮತ್ತವರ ಕುಟುಂಬಗಳು ಬೀದಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಹೊಸ ಗುತ್ತಿಗೆದಾರರು ಕೂಡಲೆ ಕಾರ್ಖಾನೆ ಆರಂಭಿಸಿ, ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮೂಲ ಮಾಲೀಕರಾದ ಎನ್.ಎಂ.ಡಿ.ಸಿಯು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಈಗ ಕೆಲಸದಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ಅವರಿಗೆ ನೀಡಬೇಕಾದ ಕನಿಷ್ಠ ವೇತನ , ಪಿ.ಎಫ್ ಇನ್ನಿತರ ಕಾನೂನಾತ್ಮಕ ಸೌಲಭ್ಯ ನೀಡಬೇಕು . ಕೆಲಸಕ್ಕೆ ತೆಗೆದುಕೊಳ್ಳದೆ ಇದ್ದಲ್ಲಿ, ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ್ ಮೇಟಿ ಮಾತನಾಡಿ "ಬೇಡಿಕೆ ಈಡೇರುವವರೆಗೂ ಕಾರ್ಮಿಕರು ಒಗ್ಗಟ್ಟಾಗಿ ಹಂತ ಹಂತವಾಗಿ ಹೋರಾಟ ರೂಪಿಸಬೇಕು " ಎಂದು ಕರೆ ನೀಡಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯಾಧ್ಯಕ್ಷರಾದ ಎ.ದೇವದಾಸ್ ವಹಿಸಿದ್ದರು, ಕಾರ್ಯದರ್ಶಿಗಳಾದ ಡಾ.ಪ್ರಮೋದ್ ಮಾತನಾಡಿದರು. ಮುಖಂಡರಾದ ಸುರೇಶ್, ಹುಲಿಗೇಶ್, ಮಂಜುನಾಥ್, ಸಂತೋಷ್, ನಾಗೇಶ್, ರಾಜಪ್ಪ, ಯರ್ರಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಇದೇ ನವೆಂಬರ್ 28 ರಂದು ಹೊಸ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸುವುದಾಗಿ ಎನ್.ಎಂ.ಡಿ.ಸಿ ಅಧಿಕಾರಿಗಳು ಕೊನೆಯಲ್ಲಿ ತಿಳಿಸಿದರು.