ಬೆಂಗಳೂರು: ದೇವನಹಳ್ಳಿ ಸುತ್ತಮುತ್ತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಕೊಡುವ ರೈತರಿಗೆ ನ್ಯಾಯಯುತ ಮಾರುಕಟ್ಟೆ ದರ ನಿಗದಿಮಾಡುವಂತೆ ದೇವನಹಳ್ಳಿ ಚನ್ನರಾಯಪಟ್ಟಣ ರೈತ ಸಮಿತಿಯಿಂದ ಬೆಂಗಳೂರಿ ಫೀಡಂ ಪಾರ್ಕ್ ನಲ್ಲಿಂದು ಬೃಹತ್ ಪ್ರತಿಭಟನೆ ನಡೆಯಿತು.

ಕೆ.ಐ.ಎ.ಡಿ.ಬಿ.ಉದ್ದೇಶಿಸಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಬಳಿ ಕೈಗಾರಿಕಾ ಅಭಿವೃದ್ದಿಗಾಗಿ ಭೂಸ್ವಾಧೀನಪಡಿಸಿಕೊಂಡರೆ ರೈತರ ಭೂಮಿಗೆ ಹೆಚ್ಚು ಪರಿಹಾರ ಮತ್ತು ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿ ನೂರಾರು ರೈತರಿಂದ ಪ್ರತಿಭಟನೆ ನಡೆಸಿದರು.
ಸಮಿತಿ ಸಂಚಾಲಕರುಗಳಾದ ಶ್ರೀನಿವಾಸ್, ಪ್ರಕಾಶ್ ಡೊಡ್ಡೇಗೌಡ, ರಂಗಣ್ಣ, ಜಗದೀಶ್, ಭರತ್, ದೇವರಾಜ್ ರವರ ಜೊತೆಯಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಂಚಾಲಕರಾದ ಶ್ರೀನಿವಾಸ್ ಮಾತನಾಡಿ, ಅಭಿವೃದ್ದಿ ಹೆಸರಿನಲ್ಲಿ ಕೆಐಎಡಿಬಿ ರೈತನ ಜಮೀನು ವಶಕ್ಕೆ ಪಡೆಯುವ ಬಗ್ಗೆ ತಕರಾರಿಲ್ಲ. ಆದರೆ ರೈತರಿಗೆ ಪರ್ಯಾಯ ಜಮೀನು ನೀಡುವುದು ಅಥವಾ ಉತ್ತಮ ಬೆಲೆ ನಿಗದಿ ಹಾಗೂ ಸರ್ಕಾರಿ ಉದ್ಯೋಗ ಅಥವಾ ರೈತನ ಜಮೀನಿನಲ್ಲಿ ನಿರ್ಮಾಣವಾದ ಕಾರ್ಖಾನೆ, ಸಂಸ್ಥೆಯಲ್ಲಿ ಜಮೀನು ಕಳೆದುಕೊಂಡವರಿಗೆ ಉದ್ಯೋಗ ನೀಡುವ ಕೆಲಸ ಮಾಡಿದರೆ ಮಾತ್ರ ಸಹಕಾರ ನೀಡುತ್ತೇವೆ. ಇಲ್ಲದೆ ಹೋದರೆ ಸರ್ಕಾರದ ವಿರುದ್ದ ನಿರಂತರ ಹೋರಾಟ ಮಾಡುತ್ತೇವೆ ಎಂದರು.

ನಮಗೆ ಸರ್ಕಾರಕ್ಕೆ ಭೂಮಿ ಕೊಡಲು ಯಾವುದೇ ಅಕ್ಷೇಪಣೆ ಇಲ್ಲ. ಆದರೆ ಹೆಚ್ಚಿನ ಪರಿಹಾರದ ಬೇಡಿಕೆ ಇದೆ. ಮಕ್ಕಳಗೆ ಉದ್ಯೋಗ ಅವಕಾಶ ಬೇಕಾಗಿದೆ. ದೇವನಹಳ್ಳಿ ಭಾಗವನ್ನು ಹಸಿರು ವಲಯ ಎಂದು ಘೋಷಿಸಬಾರದು. ನಮಗೆ ವ್ಯವಸಾಯ ಮಾಡಲು ನೀರಿನ ಕೊರತೆ ಇದೆ. 1600 ಅಡಿ ಕೊರೆಸಿದರೂ ನೀರು ಸಿಗುವುದಿಲ್ಲ ಎಂದು ಹೇಳಿದರು.