ಅರಕೇರಾ : ಇತ್ತಿಚೆಗೆ ನಿರ್ಮಾಣವಾದ ರಸ್ತೆಗಳ ಮೇಲೆ ಅನಧಿಕೃತ ಕಾಮಗಾರಿಗಳನ್ನು ಮಾಡುವ ಮೂಲಕ ರಸ್ತೆಗಳನ್ನು ಹದಗೆಡಿಸಲಾಗುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಆರೋಪಿಸಿದರು.
ಪಟ್ಟಣದಲ್ಲಿ ತಹಸೀಲ್ದಾರ್ ಅಮರೇಶ ಬೀರಾದರಗೆ ಗುರುವಾರ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ಪಡಗಿನದೊಡ್ಡಿ ಮಾತನಾಡಿ, ದೇವದುರ್ಗ ಮತ್ತು ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ ನಿರ್ಮಾಣವಾದ ರಸ್ತೆಗಳ ಮೇಲೆ ಜಿಯೋ ಕೇಬಲ್, ಕೆರೆ ನಿರ್ಮಾಣಕ್ಕೆ ಪೈಪ್ ಲೈನ್, ಜೆಜೆಎಂ ಜಲಧಾರೆ ಯೋಜನೆಯ ಪೈಪ್ಲೈನ್ ಕಾಮಗಾರಿಗಳನ್ನು ಮಾಡುತ್ತಿದ್ದು, ರಸ್ತೆ ಎಡ ಮತ್ತು ಬಲ ಭಾಗದ ರಸ್ತೆಭುಜಗಳನ್ನು ಅವೈಜ್ಞಾನಿಕವಾಗಿ ಅಗೆಯಲಾಗುತ್ತಿದೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಗಳನ್ನು ನಿಯಮ ಉಲ್ಲಂಘಿಸಿ ಮನಬಂದಂತೆ ಅಗೆದು ಮುಚ್ಚುತ್ತಿದ್ದಾರೆ. ಇದರಿಂದ ರಸ್ತೆಗಳು ತಮ್ಮ ಗುಣಮಟ್ಟ ಕಾಪಾಡಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ ಎಂದು ದೂರಿದರು.
ವಿವಿಧ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿ ಆಯಾ ಇಲಾಖೆಗಳ ಮೂಲಕ ನಿಯಮಾನುಸಾರವಾಗಿ ರಸ್ತೆಯಿಂದ 15 ಮೀಟರ್ ಬಿಟ್ಟು ಆಳವಡಿಸಬೇಕು. ರಸ್ತೆಯ ಮೇಲೆ ಪೈಪುಗಳನ್ನು ಪಾಕುವುದರಿಂದ ಪಾದಾಚಾರಿ, ದ್ವಿಚಕ್ರ ವಾಹನ, ಕಾರು, ಬಸ್ಸುಗಳ ಮತ್ತು ಭಾರೀ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಅಲ್ಲದೇ ಎಷ್ಟೋ ಜನ ದ್ವಿಚಕ್ರವಾಹನ ಸವಾರರು ಅಪಘಾತಗಳು ಮಾಡಿಕೊಂಡು ಆಸ್ಪತ್ರೆಗೆ ಸೇರಿ ಸುಮ್ಮನೆ ಮನೆಗೆ ಹೋಗಬೇಕಾಗಿದೆ. ಈ ರಸ್ತೆಯ ಅಕ್ರಮ ಕಾಮಗಾರಿಯ ಕುರಿತು ಯಾವ ಇಲಾಖೆಗೆ ದೂರು ಸಲ್ಲಿಸಬೇಕೆಂಬುದು ಸಾರ್ವಜನಿಕರಿಗೆ ಅರ್ಥವಾಗದಂತಾಗಿದೆ ಎಂದರು.

ಅಲ್ಲದೇ ರಾಯಚೂರು-ತಿಂಥಣಿ ಮತ್ತು ದೇವದುರ್ಗ-ಅರಕೇರಾ-ಸಿರವಾರ ರಸ್ತೆ ಕೆ.ಆರ್.ಡಿ.ಸಿ.ಎಲ್. ವತಿಯಿಂದ ಕಾಮಗಾರಿ ನಿರ್ಮಾಣವಾಗಿದೆ. ಜಿಯೋ ಮತ್ತು ಜೆಜೆಎಂ ಜಲಧಾರೆ ಯೋಜನೆಯ ಪೈಪ್ ಅಳವಡಿಸಲು ಯಾವ ರೀತಿ ಅನುಮತಿ ನೀಡಿದ್ದಾರೆಂಬುದು ಖಚಿತವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಕೊಂಡಪ್ಪ ಕೆ, ವೆಂಕಟೇಶ್ ಗುತ್ತೇದಾರ್ ಮಲೆ ದೇವರಗುಡ್ಡ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ಪಡಗಿನದೊಡ್ಡಿ, ದೇವದುರ್ಗ ತಾಲೂಕ ಅಧ್ಯಕ್ಷ ಭೀಮನಗೌಡ ಎಂ ಪಾಟೀಲ್, ಹಾಗೂ ಪದಾಧಿಕಾರಿಗಳು ಇದ್ದರು.