LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೇರಿನ ಹನುಮಂತರಾಯನಿಗೆ ಪರ್ಜನ್ಯಕ್ಕಾಗಿ ಪ್ರಾರ್ಥನೆ

ಎಂ.ವಿ.ಜೋಷಿ

ಕೊಪ್ಪಳ: ಜಿಲ್ಲೆಯ ಕೆರೆಹಳ್ಳಿ ಗ್ರಾಮದ ಪೂರ್ವದಂಚಿನಲ್ಲಿರುವ ಐತಿಹಾಸಿಕ ಶ್ರೀ ತಿರುಗಲ್ ತಿಮ್ಮಪ್ಪ ಪರಿಸರದಲ್ಲಿರುವ ಶ್ರೀ ತೇರಿನ ಹನುಮಂತರಾಯನ ಬಳಿ ಶಹಪುರ ಗ್ರಾಮಸ್ಥರು ಶ್ರೀ ವಿಶ್ವಾವಸುನಾಮ ಸಂವತ್ಸರದ ಸಮಗ್ರ ಪರ್ಜನ್ಯಕ್ಕಾಗಿ ಪ್ರಾರ್ಥಿಸಿದರು.

ಶಹಪುರ ಗ್ರಾಮದ ಪೂಜಾರ ಪರಿವಾರ ಕಳೆದ ಹಲವಾರು ಶತಮಾನಗಳಿಂದಲೂ ಪ್ರತಿ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ಶ್ರೀ ತೇರಿನ ಹನುಮಂತರಾಯನ ಬಳಿ `ವಾರ್ಷಿಕ ಮಳೆ ಕಾರಣಿಕ' ಕೇಳುವುದು ವಾಡಿಕೆ. ಅದರಂತೆ ಈ ಬಾರಿಯೂ ಪೂಜಾರ ಪರಿವಾರದ ಸಣ್ಣ ಕರಿಯಪ್ಪ ನೇತೃತ್ವದಲ್ಲಿ ತೇರಿನ ಹನುಮಂತರಾಯನ ಬಳಿ ತೆರಳಿ ಪರ್ಜನ್ಯ ಕಾರಣಿಕಕ್ಕಾಗಿ ಪ್ರಾರ್ಥಿಸಲಾಯಿತು. ಪೂಜಾರ ಮನೆತನದ ಪೂರ್ವಜರಾದ ರಂಗಪ್ಪ ಮತ್ತು ನಿಂಗಪ್ಪ ಆದಿಯಾಗಿ ಪೂಜಾರ ಪರಿವಾರದವರು ಸುತ್ತಮುತ್ತಲಿನ ಹತ್ತೆಂಟು ಗ್ರಾಮಗಳ ಕೃಷಿ ಹಾಗೂ ಜನ, ಜಾನುವಾರುಗಳ ಭವಿಷ್ಯವನ್ನು ಈ `ಪರ್ಜನ್ಯ ಕಾರಣಿಕ' ದಲ್ಲಿ ಶ್ರೀ ಹನುಮಂತರಾಯನ ಬಳಿ ಕೇಳುವ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.



ಏನಿದು ಪರ್ಜನ್ಯ ಪ್ರಾರ್ಥನೆ?

ಶತಮಾನಗಳ ಹಿಂದೆ ಭೀಕರ ಬರಗಾಲದಿಂದ ತತ್ತರಿಸಿದ್ದ ಸಂದರ್ಭವೊAದು ಒದಗಿತ್ತು. ಮಳೆಯನ್ನಾಶ್ರಯಿಸಿ ಆಗ ಕೃಷಿ ಜೀವನ ನಡೆಸಲಾಗುತ್ತಿತ್ತು. ಒಂದು ಬಾರಿ ಬರಗಾಲ ಇದ್ದುದರಿಂದ ಬಿತ್ತಿದ ಬೀಜಗಳು ಮೊಳಕೆ ನಾಟಲಿಲ್ಲ. ರಾಸುಗಳಿಗೆ ಮೇವು ಲಭಿಸಲಿಲ್ಲ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿತ್ತು. ಕೆರೆ, ತೊರೆಗಳು ಬತ್ತಿ ಹೋಗಿದ್ದವು. ಇದರಿಂದ ಚಿಂತಿತರಾಗಿದ್ದ ಗ್ರಾಮಸ್ಥರು ಶ್ರೀ ತೇರಿನ ಹನುಮಂತರಾಯನ ಮೊರೆ ಹೋಗಿದ್ದರು. ರೈತರ ಕೃಷಿ ಜೀವನದ ಬೀಜ, ಗೊಬ್ಬರ ಮತ್ತು ಶ್ರಮ ವಿಫಲವಾಗಬಾರದು. ಇನ್ನು ಮುಂದೆ ಶ್ರೀ ತೇರಿನ ಹನುಮಪ್ಪನ ಬಳಿ `ಮಳೆ ಕಾರಣಿಕ' ಆಲಿಸಿ ಕೃಷಿ ಚಟುವಟಿಕೆ ಮುಂದುವರಿಸಬೇಕೆನ್ನುವ ತೀರ್ಮಾನಕ್ಕೆ ಬಂದಿದ್ದರು. ಆಗ ಪ್ರತಿವರ್ಷ ಮುಂಗಾರು ಆರಂಭಕ್ಕೂ ಮುನ್ನ ಗ್ರಾಮಸ್ಥರು ಶ್ರೀ ತೇರಿನ ಹನುಮಂತರಾಯನ ಬಳಿಗೆ ತೆರಳಿ `ಮಳೆ ಕಾರಣಿಕ' ಕೇಳುವ ಪರಿಪಾಠ ಬೆಳೆಸಿಕೊಂಡರು. ಶ್ರೀ ತೇರಿನ ಹನುಮಂತರಾಯನ ಬಲ ಭಾಗದಿಂದ ಹೂವು, ಪತ್ರ ಗಳು ಧರೆಗುರುಳಿದರೆ ವರ್ಷಧಾರೆಗೆ ಮಿತಿ ಇಲ್ಲ ಎಂದರ್ಥ. ಎಡಭಾಗದಲ್ಲಿ ಹೂವು, ಪತ್ರ ಕೆಳಕ್ಕೆ ಬಿದ್ದರೆ ಮಧ್ಯಮ ಫಲ. ತುಂಬಾ ತಡವಾಗಿ ಹೂವು, ಪತ್ರ ಬಿದ್ದರೆ ಮಳೆಗಾಲ ಅಷ್ಟಕಷ್ಟೇ. ರೈತರಿಗೆ, ಜನರಿಗೆ, ಜಾನುವಾರುಗಳಿಗೆ ಆ ವರ್ಷ ಕಷ್ಟ ಎಂದು ಭಾವಿಸಲಾಗುತ್ತದೆ. ಅದರಂತೆ ಈ ಬಾರಿ ತೇರಿನ ಹನುಮಂತರಾಯ ಕ್ಷಿಪ್ರ ಸಮಯದಲ್ಲಿ ಬಲಭಾಗದಿಂದ ಹೂವು, ಪತ್ರೆ ನೀಡಿದ್ದರಿಂದ ಈ ಬಾರಿ ಮಳೆಗಾಲ ಭರಪೂರವಿದೆ. ರೈತರು ತಮ್ಮ ಕೃಷಿಯಲ್ಲಿ ಶ್ರಮವಹಿಸಿ ಆನಂದದಾಯಕ ದಿನಗಳನ್ನು ಪಡೆಯಬಹುದು ಎಂದು ತೇರಿನ ಹನುಮಪ್ಪ ಅಭಯ ನೀಡಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.



`ಮಳೆ ಕಾರಣಿಕ' ಹೇಗೆ?

ಶಹಪುರ ಗ್ರಾಮಸ್ಥರು ಶತಮಾನಗಳಿಂದ ನಡೆದು ಬಂದ ಪರಂಪರೆಯAತೆ ಪೂಜಾರ ಪರಿವಾರದ ಅರ್ಚಕರ ನೇತೃತ್ವದಲ್ಲಿ ಒಂದು ದಿನ ಮುಂಚಿತವಾಗಿ ಶ್ರೀ ತಿರುಗಲ್ ತಿಮ್ಮಪ್ಪನ ಬೆಟ್ಟಕ್ಕೆ ತೆರಳುತ್ತಾರೆ. ಸಂಜೆಯ ಹೊತ್ತು ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಮಹಾಲಕ್ಷಿö್ಮ ಮತ್ತು ಶ್ರೀ ತೇರಿನ ಹನುಮಂತರಾಯ ಮಂದಿರಗಳನ್ನು ಶುಚಿಗೊಳಿಸುತ್ತಾರೆ. ಗುಹಾ ದೇವಾಲಯವಾದ ತಿರುಗಲ್ ತಿಮ್ಮಪ್ಪನಿಗೆ ಮೊದಲು ನಂದಾ ದೀಪ ಬೆಳಗುತ್ತಾರೆ. ಬಳಿಕ ಲಕ್ಷ್ಮೀ ದೇವಿ ಬಳಿ ತೆರಳಿ ದೀಪ ಹಚ್ಚುತ್ತಾರೆ. ತೇರಿನ ಹನುಮಪ್ಪನ ಬಳಿ ರಾತ್ರಿಯಿಡೀ ನಂದಾದೀಪ ಬೆಳಗಿ ಆತನ ಸನ್ನಿಧಾನದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಮಾರನೆಯ ದಿನ ಮುಂಜಾನೆ ಬೆಟ್ಟದಲ್ಲಿನ ನೈಸರ್ಗಿಕ ಹೊಂಡದಲ್ಲಿ ಮಿಂದು ಮಡಿಯಿಂದ ಗಂಗೆಯ ಪೂಜೆ ನೆರವೇರಿಸುತ್ತಾರೆ. ಬಳಿಕ ಬೆಟ್ಟದಲ್ಲಿಯೇ ದೇವರಿಗಾಗಿ ಪ್ರತ್ಯೇಕ ಅಡುಗೆ, ನೈವೇದ್ಯ ಸಿದ್ಧಪಡಿಸಿಕೊಳ್ಳುತ್ತಾರೆ. ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀ ದೇವಿ ಮಂದಿರದಲ್ಲಿ ಪ್ರಥಮ ಪೂಜೆ ನೆರವೇರಿಸುತ್ತಾರೆ. ಬಳಿಕ ತೇರಿನ ಹನುಮಂತರಾಯನ ಪುಟ್ಟ ಪುಷ್ಕರಣಿಯಲ್ಲಿ ಸಾಮೂಹಿಕವಾಗಿ ಗಂಗೆಯ ಪೂಜೆ ನೆರವೇರಿಸುತ್ತಾರೆ. ಶ್ರೀ ಮಾತೆ ಗಂಗೆಗೆ ಹೂವು, ಹಣ್ಣು, ನೈವೇದ್ಯ, ಗಂಧಾಕ್ಷತೆ, ಕುಂಕುಮ, ದೀಪ, ಧೂಪ ನೆರವೇರಿಸಿ ಮಳೆಗಾಗಿ ಹರಕೆ ಸಲ್ಲಿಸುತ್ತಾರೆ. ಬಳಿಕ ತೇರಿನ ಹನುಮಂತರಾಯನಿಗೆ ಅಭಿಷೇಕ, ಹೂವಿನ ಅಲಂಕಾರ, ದೀಪ, ದೂಪ ಹಚ್ಚಿ `ಮಳೆ ಕಾರಣಿಕ' ಕ್ಕಾಗಿ ಪ್ರಾರ್ಥಿಸುತ್ತಾರೆ. ಮಳೆ, ಬೆಳೆ, ಜನ, ಜಾನುವಾರುಗಳ ಯೋಗ ಕ್ಷೇಮದ ಬಗ್ಗೆ ದೇವರ ಬಲಭಾಗದಿಂದ ಬೀಳುವ ಹೂವು, ಪತ್ರೆಗಳ ಮೇಲೆ ಭವಿಷ್ಯ ನಿರ್ಧರಿತವಾಗುತ್ತದೆ. ಈ ಬಾರಿ ಶ್ರೀ ತೇರಿನ ಹನುಮಂತರಾಯ ಕ್ಷಿಪ್ರಗತಿಯಲ್ಲಿ ಬಲಭಾಗದಿಂದ ಹೂವು, ಪತ್ರೆಗಳನ್ನು ಯಥೇಚ್ಛವಾಗಿ ನೀಡಿದ್ದಾನೆ. ಈ ಬಾರಿ ವರ್ಷಧಾರೆಗೆ ಮಿತಿ ಇಲ್ಲ. ಎಲ್ಲ ಕೆರೆ, ತೊರೆ, ನದಿ, ಜಲಾಶಯಗಳು ಭರ್ತಿಯಾಗುತ್ತವೆ. ಕೃಷಿಕರು ನೆಮ್ಮದಿಯ ಜೀವನ ನಡೆಸುತ್ತಾರೆ. ಜಾನುವಾರುಗಳಿಗೆ ಭರಪೂರ ಮೇವು ಲಭಿಸುತ್ತದೆ ಎಂದು ಭಕ್ತರು ಮಳೆ ಕಾರಣಿಕದ ವಿವರಗಳನ್ನು ಹೇಳಿದರು.



ಇಲ್ಲಿ ಭಕ್ತಿಯೇ ಮುಖ್ಯ:

ಶ್ರೀ ತಿರುಗಲ್ ತಿಮ್ಮಪ್ಪ ಮತ್ತು ಶ್ರೀ ಲಕ್ಷ್ಮೀ ದೇವಿ ಮಂದಿರಗಳು ಪಾಳು ಬಿದ್ದಿವೆ. ನಿಧಿ ಚೋರರ ಹಾವಳಿಗೆ ದೇವಾಲಯಗಳು ಭಗ್ನಗೊಂಡಿವೆ. ಆದರೂ ಶಹಪುರ ಗ್ರಾಮದ ಭಕ್ತರು ಶತಮಾನಗಳಿಂದ ಅನೂಚಾನವಾಗಿ ನಡೆದು ಬಂದ ಪದ್ಧತಿಯಂತೆ ತಮ್ಮ ಭಕ್ತಿ ಕಾಣಿಕೆಯನ್ನು ಸಮರ್ಪಿಸುತ್ತಿದ್ದಾರೆ. ಪ್ರಥಮವಾಗಿ ತಿಮ್ಮಪ್ಪ, ಲಕ್ಷ್ಮೀ ದೇವಿಗೆ ಪೂಜೆ ನೆರವೇರಿಸುತ್ತಾರೆ. ನೈವೇದ್ಯ ನೀಡಿ ಬಳಿಕ ತೇರಿನ ಹನುಮಂತರಾಯನ ಬಳಿ `ಮಳೆ ಕಾರಣಿಕ' ನಡೆಸುತ್ತಾರೆ. ಮಹಾಮಂಗಳಾರತಿ ನಡೆದ ಬಳಿಕ ದೇವರ ಸನ್ನಿಧಾನದ ಏಕಶಿಲಾ ಬಂಡಯಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ ನಡೆಯುತ್ತದೆ. ಇಲ್ಲಿ ಭಕ್ತಿಯೇ ಮುಖ್ಯ. ಮುಂದಿನ ಜೀವನದ ಕುತೂಹಲಕ್ಕಾಗಿ ಮತ್ತು ಭವಿಷ್ಯದಲ್ಲಿ ಏನೇ ಎದುರಾದರೂ ಈ `ಮಳೆ ಕಾರಣಿಕ'ದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಸಿದ್ಧತೆ ನಡೆಸಲು ಮತ್ತು ಬದುಕನ್ನು ರೂಪಿಸಿಕೊಳ್ಳಲು ಈ ಪರಂಪರೆ ಭರವಸೆಯ ಬೆಳಕು ಮೂಡಿಸುತ್ತಿದೆ ಎಂದು ಭಕ್ತರು ನಂಬಿದ್ದಾರೆ. ಪ್ರತಿ ವರ್ಷದ ಶ್ರಾವಣ ಮಾಸದ ಕೊನೆ ಶನಿವಾರ ಇಲ್ಲಿ ಜಾತ್ರೆ ನಡೆಯುತ್ತದೆ. ಆಗ ಸುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆ ಸಲ್ಲಿಸುವ ಪದ್ಧತಿ ಇದೆ. ಇಲ್ಲಿನ `ಬಂಡೆ ಊಟ' ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ ಎಂದು ಭಕ್ತರು ಹೇಳುತ್ತಾರೆ.

ಪೂಜಾರ ಪರಿವಾರ:

ಪ್ರತಿವರ್ಷ ಶಹಪುರ ಗ್ರಾಮದ ಪೂಜಾರ ಪರಿವಾರವೇ ಈ `ಮಳೆ ಕಾರಣಿಕ' ದ ನೇತೃತ್ವ ವಹಿಸುತ್ತದೆ. ನಾಲ್ಕನೇ ತಲೆಮಾರಿನ ಪೂಜಾರ ಮನೆತನದ ಅರ್ಚಕರಾದ ಸಣ್ಣ ಕರಿಯಪ್ಪ ಅವರೊಂದಿಗೆ ಶಹಪುರ ಗ್ರಾಮದ ಹಿರಿಯರಾದ ಭರಮಪ್ಪ ಕುರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲಪ್ಪ ತೋಟದ, ನಾಗರಾಜ ದೊಡ್ಡಮನೆ, ಯುವ ಧುರೀಣರಾದ ನಿಂಗಪ್ಪ ನಾಗಲಾಪುರ, ಸಮಾಜ ಸೇವಕರಾದ ವೀರಣ್ಣ ಕೋಮಲಾಪುರ, ಭಕ್ತರಾದ ಕಂಪ್ಲೆಪ್ಪ ಕಂಬಳಿ, ಪಂಪಾಪತಿ ಕಂಬಳಿ, ಹನುಮಂತ ಕೋಮಲಾಪುರ, ನಿಂಗಪ್ಪ ಕುರಿ, ಮಲ್ಲೇಶ್ ಕುರಿ ಸೇರಿದಂತೆ ಅನೇಕರು ಶತಮಾನಗಳಿಂದ ನಡೆದುಕೊಂಡು ಬಂದಿರುವಂತಹ ಪದ್ಧತಿಯನ್ನು ಈ ಬಾರಿಯೂ ಮುಂದುವರಿಸಿಕೊಂಡು ಸಂಪ್ರದಾಯ ಮೆರೆದರು.  
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST