ಬೆಂಗಳೂರು : ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ಮನೋವಿಕಾಸಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕಾದದ್ದು ಪೋಷಕರ ಕರ್ತವ್ಯವಾಗಿದ್ದು, ಸಂಗೀತ ಹಾಗೂ ಸಾಹಿತ್ಯದ ಕಲಿಕೆ ಹಾಗೂ ಆಸ್ವಾದನೆ ನಮ್ಮ ಬದುಕನ್ನು ಹಸನುಗೊಳಿಸುವ ಸಾಧನಗಳಾಗಿವೆ ಎಂದು ಅನುಸೂಯಾ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು. ಅವರು ಬೆಂಗಳೂರು ಆಕಾಶವಾಣಿ ಕೇಂದ್ರವು ಏರ್ಪಡಿಸಿದ್ದ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿಮಾತನಾಡಿದರು. ದಾವಂತದ ಬದುಕಲ್ಲಿ ನಾವಿಂದು ಕಳೆದುಹೋಗುತ್ತಿದ್ದೇವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ನಮ್ಮಇತಿಹಾಸ, ಪರಂಪರೆಯನ್ನು ಮರೆಯದೆ ಮೆಲುಕು ಹಾಕುವ ಕೆಲಸವಾಗಬೇಕಿದೆ. ವಚನ, ದೇವರ ನಾಮಗಳಂತಹ ಸಂಜೀವಿನಿಯ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದರು.

ಆಕಾಶವಾಣಿ ಸಂಗೀತ ಸಮ್ಮೇಳನದ 67ನೇ ಆವೃತ್ತಿಯು ಇಂದಿರಾನಗರದ ಸಂಗೀತ ಸಭಾದ ಪುರಂದರಭವನದಲ್ಲಿ ನಡೆಯಿತು. ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಪ್ರಸಾರಭಾರತಿ ಆಯೋಜಿಸಿದ್ದ ಈ ಪ್ರತಿಷ್ಠಿತ ಉತ್ಸವವು ದೇಶಾದ್ಯಂತ 24ನಗರಗಳಲ್ಲಿನಡೆಯುತ್ತಿದೆ. ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ಉತ್ತೇಜಿಸುವ ಸಲುವಾಗಿ ಹಿಂದೂಸ್ತಾನಿ, ಕರ್ನಾಟಕ ಮತ್ತು ಲಘು/ ಜಾನಪದ ಸಂಗೀತವನ್ನು ಸಂಗೀತ ಪ್ರೇಮಿಗಳಿಗೆ ತಲುಪಿಸುವ ಮಹತ್ತರ ಗುರಿಯೊಂದಿಗೆ ಈ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವು ಕರ್ನಾಟಕಶಾಸ್ತ್ರೀಯಸಂಗೀತ ಮತ್ತು ಲಘುಸಂಗೀತ ಎರಡನ್ನೂ ಒಳಗೊಂಡಿತ್ತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದೂರದರ್ಶನ ದಕ್ಷಿಣ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರಾದ ಭಾಗ್ಯವಾನ್ ಆಕಾಶವಾಣಿ ಹಾಗೂ ದೂರದರ್ಶನದ ಹಿರಿಯ ಅಧಿಕಾರಿಗಳಾದ ಕೆ.ಪಿ.ಸಂಜೀವ್, ಡಾ.ಎ.ಎಸ್.ಶಂಕರನಾರಾಯಣ, ಭಾಗವಹಿಸಿದ್ದರು.