ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಲ್ಲಿ ಚರಂಡಿ ನೀರು ಮಿಶ್ರಣವಾಗದಂತೆ ತಡೆಯುವುದು. ರಿಂಗ್ ರಸ್ತೆ ನಿರ್ಮಿಸುವುದು, ಮೋತಿ ಬ್ರಿಡ್ಜ್ ಅಗಲೀಕರಣ, ಮಹಾನಗರಪಾಲಿಕೆಯ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವುದು, ಸುಧಾಕ್ರಾಸ್ ಮೇಲ್ಸೇತುವೆ ಪೂರ್ಣಗೊಳಿಸುವುದು ತುರ್ತಾಗಿ ಆಗಬೇಕಾದ ಇಂತಹ ಕೆಲಸಗಳ ಬಗ್ಗೆ ಸರಿಯಾದ ಕ್ರಮಗಳಿಲ್ಲ. ಬದಲಿಗೆ ಅವೈಜ್ಞಾನಿಕ, ಅನಾವಶ್ಯಕ ಕಾಮಗಾರಿಗಳಲ್ಲಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಕಳೆದ ಬಾರಿ ಪ್ರತಿಭಟನೆಯಾದ ಮೇಲೆ, ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು, ನಾಗರಿಕ ಸಮಿತಿಯ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ, 10 ದಿನಗಳಲ್ಲಿ ಸಭೆ ಕರೆಯುದಾಗಿ ಆಯುಕ್ತರು ಭರವಸೆ ನೀಡಿದ್ದರು. ಇಲ್ಲಿಯವರೆಗೂ ಈ ಕೆಲಸ ಆಗಿಲ್ಲ. ಜನರ ಆದ್ಯತೆ ಕೈಬಿಟ್ಟು, ಇರುವ ರಸ್ತೆ ಹಾಗೂ ಫುಟ್ಪಾತ್ನ್ನು ಅಗೆದು ಇನ್ನೊಂದು ರಸ್ತೆ ಹಾಗೂ ಫುಟ್ ಪಾತ್ ನಿರ್ಮಿಸುವುದು, ಬೇಡವಾದ ಸರ್ಕಲ್ಗಳನ್ನು ನಿರ್ಮಿಸುವುದು, 'ಕುಣಿ ತೆಗೆಯುವುದು ಕುಣಿ ಮುಚ್ಚುವುದು', ಇದೇ ಬಳ್ಳಾರಿಯಲ್ಲಿ 'ಅಭಿವೃದ್ಧಿ' ಕೆಲಸವಾಗಿಬಿಟ್ಟಿದೆ ಎಂದು ಆರೋಪಿಸಿದರು.

ಈ ಹಿನ್ನಲೆಯಲ್ಲಿ ನಾಗರಿಕರ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ 1 ಲಕ್ಷ ಸಹಿ ಸಂಗ್ರಹ ಅಭಿಯಾನ ಹಾಗೂ ಜುಲೈ 27, 2025ರಂದು ಬೃಹತ್ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಇತರೆ ಜನಪರ ಸಂಘ ಸಂಸ್ಥೆಗಳನ್ನು ತೊಡಗಿಸಿಕೊಂಡು, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು. ಸಾರ್ವಜನಿಕವಾಗಿ ದಿನಾಂಕ ಜೂನ್ 30 ರಂದು ರಾಯಲ್ ವೃತ್ತದಲ್ಲಿ, ದಿನಾಂಕ ಜುಲೈ 7ರಂದು ಎಸ್.ಪಿ. ವೃತ್ತದಲ್ಲಿ, ದಿನಾಂಕ ಜುಲೈ 11 ರಂದು ಕೌಲ್ ಬಜಾರ್ನಲ್ಲಿ ಮತ್ತು ದಿನಾಂಕ ಜುಲೈ 23ರಂದು ಮೋತಿ ಸರ್ಕಲ್ನಲ್ಲಿ ಸಾರ್ವಜನಿಕ ಸಹಿ ಸಂಗ್ರಹಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ ಆನ್ಲೈನ್ ಸಹಿ ಸಂಗ್ರಹಣಾ ಕಾರ್ಯಕ್ರಮ ಹಮ್ಮಿಕೊಂಡು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಹಿಗಳನ್ನು ಸಂಗ್ರಹಿಸುವ ಗುರಿಯನ್ನು ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಹೊಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋವಿಂದ್, ಯು ನರಸಣ್ಣ, ಮುತ್ತುಜಾ ಸಾಬ್, ಶರ್ಮಸ್, ಡಾ ಪ್ರಮೋದ್, ವಿದ್ಯಾ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
ಬೇಡಿಕೆಗಳು
ನಗರದಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಬೆರೆಯದಂತೆ ಮಾಡಲು ತುರ್ತಾಗಿ ಕ್ರಮ ಕೈಗೊಳ್ಳಿ.
ನಗರಕ್ಕೆ ಅವಶ್ಯಕವಾದ ವರ್ತುಲ ರಸ್ತೆಯನ್ನು ತುರ್ತಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ. ಅಲ್ಲಿಯವರೆಗೆ ಹಗಲಿನ ವೇಳೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ.
ಮಹಾನಗರಪಾಲಿಕೆಯಲ್ಲಿ ಅವಶ್ಯಕವಿರುವಷ್ಟು ಖಾಯಂ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರನ್ನು ತುರ್ತಾಗಿ ನೇಮಕ ಮಾಡಿ.
ಮೋತಿ ಮೇಲ್ಲೇತುವೆ ಅಗಲೀಕರಣ ಮಾಡಿ.
ಸುಧಾ ಕ್ರಾಸ್ ರೈಲ್ವೆ ಸೇತುವೆ ತುರ್ತಾಗಿ ಪೂರ್ಣಗೊಳಿಸಿ
ಬೆಂಗಳೂರು ರಸ್ತೆ ಬೈಪಾಸ್ ಹತ್ತಿರ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಿ.
ನಗರದಲ್ಲಿ ಅನಾವಶ್ಯಕ ಯಾರೂ ಬೇಡದ, ದುಂದು ವೆಚ್ಚ ಮಾಡಿ ಅವೈಜ್ಞಾನಿಕ ಸರ್ಕಲ್ಗಳ ನಿರ್ಮಾಣ ಬೇಡ. ಬದಲಾಗಿ ಆದ್ಯತೆ ಮೇರೆಗೆ ಕೆಟ್ಟು ಹಾಳಾಗಿರುವ ಒಳ ರಸ್ತೆಗಳ ನಿರ್ಮಾಣ, ರಸ್ತೆ ಬದಿಗಳಲ್ಲಿ ಮಳೆ ನೀರು ಸುಗಮವಾಗಿ ಹರಿಯಲು ಹೊರ ಚರಂಡಿ ನಿರ್ಮಾಣ ಸೇರಿದಂತೆ ಜನ ಬಯಸುವ ಕೆಲಸಗಳನ್ನು ಆಧ್ಯತೆ ಮೇರೆಗೆ ಕೈಗೊಳ್ಳಿ.
ನಗರದ ಎಲ್ಲಾ ಹೊರ ಚರಂಡಿಗಳಲ್ಲಿ ತುಂಬಿದ ಹೂಳನ್ನು ತೆಗೆದು ಸ್ವಚ್ಛಗೊಳಿಸಿ.
ನಗರದಲ್ಲಿ ಅಲ್ಪ ಮಳೆ ಬಂದರೂ ಅನೇಕ ರಸ್ತೆಗಳಲ್ಲಿ ಹೊಂಡಾಗಳು ನಿರ್ಮಾಣವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಿ.
ನಗರದಲ್ಲಿ ಅಪಘಾತಕ್ಕೆ ಕಾರಣವಾಗಿರುವ ಬೀದಿ ನಾಯಿ, ಬೀಡಾಡಿ ದನಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ.
ನಗರಾದ್ಯಂತ ಆರೋಗ್ಯಕರ ವಾತಾವರಣ ಕಲ್ಪಿಸಲು ಸ್ವಚ್ಛತೆ ಕಾಪಾಡಲು, ದೂಳಿನ ಪ್ರಮಾಣ ತಡೆಯಲು ಸೂಕ್ತ ಕ್ರಮಕೈಗೊಳ್ಳಿ.
ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಸ್ಥಳದಲ್ಲಿ ಕಾಮಗಾರಿ ಬಗ್ಗೆ ಎಲ್ಲಾ ವಿವರಗಳನ್ನು ನೀಡುವ ಫಲಕಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಗೋಚರಿಸುವ ಸ್ಥಳಗಳಲ್ಲಿ ಪ್ರದರ್ಶಿಸಿ ಹಾಗೂ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಿ.
ನಗರದಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳು ಆಯಾ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಇಲಾಖೆಗೆ ಜವಾಬ್ದಾರಿ ವಹಿಸಿ.