ಮರಿಯಮ್ಮನಹಳ್ಳಿ : ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಪ್ರಾಣಹಾನಿ ತಪ್ಪಿಸುವ ಉದ್ದೇಶದಿಂದ ಡಿಸೆಂಬರ್ 31ರ ಸಂಜೆಯಿಂದ 1.1.2026 ರ ವರೆಗೆ 2 ದಿನಗಳ ಕಾಲ ಇಡೀ ವಿಜಯನಗರ ಜಿಲ್ಲೆಯಲ್ಲಿ ಇ.ಎಂ.ಆರ್.ಐ.ಗ್ರೀನ್ ಹೆಲ್ತ್ ಸರ್ವಿಸ್ ಸಂಸ್ಥೆಯ 108 ಅಂಬುಲೆನ್ಸ್ ತುರ್ತು ಆರೋಗ್ಯ ಕವಚ ಸೇವೆಯನ್ನು ಸಂಪೂರ್ಣ ಸಿದ್ಧತೆಯೊಂದಿಗೆ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮ : ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಸಂಭ್ರಮದ ವೇಳೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗಳ ರಜೆಗಳನ್ನು ರದ್ದು ಪಡಿಸಲಾಗಿದೆ. ಈ ವ್ಯವಸ್ಥೆ ಕೈಗೊಂಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 108 ಆಂಬುಲೆನ್ಸ್ಗಳಲ್ಲಿ ಇಂಧನ, ಆಮ್ಲಜನಕ, ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ತುರ್ತು ಚಿಕಿತ್ಸಾ ಸಾಮಗ್ರಿಗಳನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗಿದೆ.
ಸಾರ್ವಜನಿಕರ ಎಚ್ಚರ : ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಯಾವುದೇ ವಿಳಂಬವಿಲ್ಲದೆ 108 ಉಚಿತ ಸಂಖ್ಯೆಗೆ ಕರೆ ಮಾಡುವಂತೆ ಪ್ರಾದೇಶಿಕ ಅಧಿಕಾರಿ ಸದಾನಂದ ರವರು ಮನವಿ ಮಾಡಿದ್ದಾರೆ. ಹೊಸ ವರ್ಷದ ಸಂಭ್ರಮದ ವೇಳೆ ಸಂಯಮ ಹಾಗೂ ಜಾಗ್ರತೆ ವಹಿಸುವ ಮೂಲಕ ಅಪಘಾತಗಳನ್ನು ತಪ್ಪಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತುರ್ತು ಸೇವೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಪಘಾತ ಅಥವಾ ಅಚಾನಕ್ ಆರೋಗ್ಯ ಸಮಸ್ಯೆ ಎದುರಾದಲ್ಲಿ ತಕ್ಷಣ ಸ್ಪಂದಿಸಲು 108 ತುರ್ತು ಸೇವೆ ಸಿದ್ಧವಾಗಿದೆ ಎಂದು 108 ಅಂಬುಲೆನ್ಸ್ ಜಿಲ್ಲಾ ಅಧಿಕಾರಿ ವಿನಯ್ ಕುಮಾರ್, ಜಿಲ್ಲಾ ವ್ಯವಸ್ಥಾಪಕರು ಸಂತೋಷ ಸ್ಪಷ್ಟಪಡಿಸಿದ್ದಾರೆ.