ಬೆಂಗಳೂರು: ಬಸವೇಶ್ವರನಗರದ ಶ್ರೀ ವೃದ್ಧಾಶ್ರಮ ಕ್ಕೆ ರಾಜಾಜಿನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್ ಸಿ ಸಿ ಕೆಡೆಟ್ಸ್ ಗಳು ಭೇಟಿ ನೀಡಿ ಸ್ವಯಂ ಸೇವೆ ಕೈಗೊಂಡರು. ಕೆಡೆಟ್ಸ್ ಗಳು ಪ್ರೀತ್ಯಾದರಗಳಿಂದ ವೃದ್ಧರೊಂದಿಗೆ ಸಂವಾದ ನಡೆಸಿ, ಅವರ ಹಾಸಿಗೆ ಬಟ್ಟೆಗಳನ್ನು ಸ್ವಚ್ಛಗೊಳಿಸಿ ಆರೈಕೆ ಮಾಡಿದರು. ವೃದ್ಧಾಶ್ರಮಕ್ಕೆ ಹಾಲು, ಮೊಸರು, ತರಕಾರಿಗಳನ್ನು ನೀಡಿ ಮಾನವೀಯತೆ ಮೆರೆದರು.
ಕೊಂಚವೂ ಕೀಳರಿಮೆ ಹೊಂದದೆ, ಹಿಂಜರಿಯದೇ ವೃದ್ಧರ ಆರೈಕೆಯಲ್ಲಿ ಗೌರವದ ಪ್ರೀತಿ ತೋರಿದ ಕೆಡೆಟ್ಸ್ ಗಳ ಕಾರ್ಯವೈಖರಿಯನ್ನು ಕಂಡು ವೃದ್ದಾಶ್ರಮದ ವ್ಯವಸ್ಥಾಪಕ ರಘು ಅವರು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಕಾಲೇಜಿನ ಎನ್ ಸಿಸಿ ಅಧಿಕಾರಿ ಮೇಜರ್ ವನಜಾಕ್ಷಿ ಆರ್ ಹಳ್ಳಿಯವರ ಅವರ ಮಾರ್ಗದರ್ಶನದಲ್ಲಿ ಎನ್ಸಿಸಿ ಕೆಡೆಟ್ಸ್ ಗಳು ಈ ಕಾರ್ಯನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದು ಪೋಷಕರ ನಿರಂತರ ಪರಿಶ್ರಮ; ಕೊನೆಗೆ ಆ ಪೋಷಕರಿಗೆ ಆಶ್ರಯ ನೀಡಿದ್ದು ಯಾವುದೋ ವೃದ್ಧಾಶ್ರಮ. ಹೌದು, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ಕ್ಷೀಣಿಸುತ್ತಿದ್ದು, ಭಾವನಾತ್ಮಕತೆಗೆ ಬೆಲೆ ಇಲ್ಲದಂತಾಗಿದೆ. ದಿನವಿಡೀ ದುಡಿಯುವ ಗೀಳು ಒಂದೆಡೆಯಾದರೆ, ಹಿರಿಯರ ನಡೆ - ನುಡಿಗಳು ಯುವಕರಿಗೆ ರುಚಿಸದಂತಾಗಿದೆ. ಈ ಕಾರಣದಿಂದಾಗಿಯೇ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕಾಣಬಹುದು.
ಜೀವನವಿಡೀ ತಮ್ಮ ಮಕ್ಕಳಿಗಾಗಿ ಬದುಕನ್ನೇ ಪಣವಾಗಿಟ್ಟ ಪೋಷಕರು ತಮ್ಮ ಅಂತ್ಯಕಾಲದಲ್ಲಿ ಯಾರಿಗೂ ಬೇಡವಾಗಿ ವೃದ್ಧಾಶ್ರಮಗಳನ್ನು ಸೇರುತ್ತಿರುವುದು ನೋವಿನ ಸಂಗತಿ. ಆದರೂ ಆಧುನಿಕ ಜಗತ್ತಿನ ಕುಟುಂಬಗಳು ಇದನ್ನು ಈಗ ಅನಿವಾರ್ಯವಾಗಿ ಸ್ವೀಕರಿಸುತ್ತಿವೆ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅಸಮರ್ಥರಾದ ವೃದ್ಧರಿಗೆ ಆಸರೆ ನೀಡಿ, ಪೋಷಿಸುತ್ತಿರುವ ವೃದ್ಧಾಶ್ರಮಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.