ಕ್ರೈ ಸಂಸ್ಥೆ–ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆ
ಅರಕೇರಾ : ತಾಲೂಕಿನ ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಜನಯ್ಯ ದೇವಸ್ಥಾನ ಆವರಣದಲ್ಲಿ ಗುರುವಾರ ಕ್ರೈ ಸಂಸ್ಥೆ ಬೆಂಗಳೂರು ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ರೈ ಸಂಸ್ಥೆ ಸಮಾಲೋಚಕ ರಾಮಣ್ಣ ಎನ್ ಗಣೇಕಲ್, “ಇತ್ತೀಚಿನ ಮಳೆಯಿಂದ ಓಣಿ, ಕೇರಿಗಳ ನೀರು ಗ್ರಾಮಗಳೊಳಗೆ ನುಗ್ಗಿ ತೊಂದರೆ ಉಂಟು ಮಾಡಿದೆ. ಪ್ರತಿಯೊಬ್ಬರೂ ತಮ್ಮ ಮನೆ ಸುತ್ತಮುತ್ತಲನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ರೋಗ ಹರಡುವಿಕೆ ತಡೆಯಬೇಕು” ಎಂದು ಜನತೆಗೆ ಕರೆ ನೀಡಿದರು.
ಹೆಲ್ತ್ ಇನ್ಸ್ಪೆಕ್ಟರ್ ಪ್ರವೀಣ್ ನಾಯಕ ಅವರು ಮಾತನಾಡಿ, “ಕಸವನ್ನು ಅಸಮರ್ಪಕವಾಗಿ ಹಾಕುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಶಿಸ್ತಿನಿಂದ ಕಸ ವಿಲೇವಾರಿ ಮಾಡಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಸೋಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ, ಉಪಾಧ್ಯಕ್ಷೆ ನರಸಮ್ಮ, ಸದಸ್ಯರಾದ ರವಿಚಂದ್ರ, ಬಸವರಾಜ ಮಡಿವಾಳ, ಶಿವಪ್ಪ, ಬಸವ ಆಲಂ ಗೌಡ, ರಾಮಚಂದ್ರ ನಾಯಕ, ದುರ್ಯೋದನ, ನಿಂಗನಗೌಡ, ಬಸವಲಿಂಗಪ್ಪ ಸೇರಿದಂತೆ ಆಶಾ ಕಾರ್ಯಕರ್ತರಾದ ಲಕ್ಷ್ಮೀ ಮತ್ತಿತರರು ಇದ್ದರು.