ಕೊಪ್ಪಳ : ತಾಲೂಕಿನಾದ್ಯಂತ ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದೆ. ಇದರ ಹಿಂದೆ ಪ್ರಭಾವಿಗಳ ಹಸ್ತಕ್ಷೇಪ ದೊಡ್ಡಮಟ್ಟದಲ್ಲಿದೆ. ಅಕ್ರಮ ಮರಳು ಮಾಫಿಯಾಗದಿಂದ ಕೆಲವು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮರಳು ಮಾಫಿಯಾಗೆ ಕಡಿವಾಣ ಹಾಕುವಂತೆ ನಾವು ಸಾಕಷ್ಟು ಭಾರಿ ಜಿಲ್ಲಾಡಳಿತದ ಅಧಿಕಾರಿಗಳಿಗ ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ದಿನ ಕಡಿವಾಣ ಹಾಕಿದಂತೆ ನಾಟಕವಾಡಿ ಈಗ ಮತ್ತೆ ಮರಳು ದಂಧೆಗೆ ಅವಕಾಶ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ತಾಲೂಕಿನ ಹಿರೇ ಸಿಂದೋಗಿ, ಬೂದಿಹಾಳ ಮತ್ತಿತರ ಗ್ರಾಮಗಳಲ್ಲಿ ಮತ್ತು ಹಿರೇಹಳ್ಳದ ಪಾತ್ರದಲ್ಲಿ ಈ ಹಿಂದೆ ಬೋಟ್ ಮೂಲಕ ಮರಳನ್ನು ತೆಗೆದು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆದರೆ ಈಗ ಜೆಸಿಬಿ ಯಂತ್ರಗಳ ಮೂಲಕ ಮರಳನ್ನು ತೆಗೆದು ದೊಡ್ಡ ದೊಡ್ಡ ಟಿಪ್ಪರ್ಗಳಲ್ಲಿ ಸಾಗಿಸಲಾಗುತ್ತಿದೆ. ದೊಡ್ಡ ಟಿಪ್ಪರ್ಗಳಿಂದ ನಡೆಯುತ್ತಿರುವ ಮರಳು ದಂಧೆಗೆ ಜನರು ಬೇಸತ್ತಿದ್ದಾರೆ. ಗ್ರಾಮಗಳ ರಸ್ತೆಯಲ್ಲಿ ಓಡಾಡದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸಹ ಮರಳು ದಂಧೆಯ ಹಿಂದೆ ಅಧಿಕಾರಿಗಳ ಪಾತ್ರವಿದೆ ಎಂದು ಬಹಿರಂಗಪಡಿಸಿ ಅವರೆಲ್ಲರನ್ನು ವರ್ಗಾವಣೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದರೂ ಸರಕಾರ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮರಳು ದಂಧೆಯಿಂದ ಜನರು ನಲುಗಿ ಹೋಗಿದ್ದಾರೆ. ಮರಳು ದಂಧೆ ಬಗ್ಗೆ ಧ್ವನಿ ಎತ್ತಿದವರನ್ನೆ ಮಟಾಸ್ ಮಾಡುವಂತಹ ಸನ್ನಿವೇಶ ತಾಲೂಕಿನಾದ್ಯಂತ ಸೃಷ್ಟಿಯಾಗಿದೆ. ಮರಳು ದಂಧೆಕೊರರ ಹೆಸರನ್ನು ಹೇಳಲು ಗ್ರಾಮಸ್ಥರು ಭಯಗೊಂಡಿದ್ದಾರೆ. ಈ ಹಿಂದೆ ನಡೆದ ಮರಳು ದಂಧೆಯ ಪ್ರಕರಣದಲ್ಲಿ ಐವತ್ತು ಜನರ ಹೆಸರು ದಾಖಲು ಮಾಡಿದ್ದರು ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಎಫ್ಐಆರ್ನಲ್ಲಿರುವ ಹೆಸರು ಹೇಳಲು ಪೊಲೀಸರು ಕೂಡಾ ಹಿಂದೆಟು ಹಾಕುತ್ತಿದ್ದಾರೆ. ಪತ್ರಿಕೆಗಳಲ್ಲೂ ಸಹ ಹೆಸರು ಬರೆಯಲು ಸಾಧ್ಯವಾಗಿಲ್ಲ. ಅಂದರೆ ದಂಧೆಕೊರರು ಎಷ್ಟೊಂದು ಪ್ರಭಾವಿಗಳಾಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಜನರು ಬಂದು ನನ್ನ ಬಳಿ ಅಳಲು ತೊಡಿಕೊಂಡಿದ್ದರಿಂದ ನಾನು ಈಗ ಮತ್ತೊಮ್ಮೆ ಮಾಧ್ಯಮದ ಮೂಲಕ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಅಗ್ರಹಿಸುತ್ತಿದ್ದೇನೆ. ಇದೇ ವಿಷಯವನ್ನು ಬೆಳಗಾವಿ ಅಧಿವೇಶನದಲ್ಲೂ ಪ್ರಸ್ತಾಪಿಸಿ ಸರಕಾರದ ಮುಂದೆ ಇಡುತ್ತೇನೆ ಎಂದು ಹೇಮಲತಾ ನಾಯಕ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಜೋರಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಅದೇ ರೀತಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಲ್ಲಿ ಸರಕಾರ ಹಿಂದೆಟು ಹಾಕುತ್ತಿದೆ. ಇದರಿಂದ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಾವು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲೆ ರಾಜ್ಯದಲ್ಲಿ ರೈತರಿಗೆ ಹತ್ತಾರು ರೀತಿಯ ಸಮಸ್ಯೆ ಎದುರಾಗಿದೆ. ಇದರ ಬಗ್ಗೆ ಧ್ವನಿ ಎತ್ತಿದರೆ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಕಡೆ ಬೆಟ್ಟು ಮಾಡುತ್ತಾರೆ. ಅಂದರೆ ಎಲ್ಲಾ ರಂಗಗಳನ್ನು ರಾಜ್ಯ ಸರಕಾರ ವಿಫಲವಾಗಿರುವುದು ಮುಖ್ಯಮಂತ್ರಿಗಳು ಸಾಬೀತು ಮಾಡಿದ್ದಾರೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಿದರೆ ರೈತರು ನಿಟ್ಟುಸಿರುವ ಬಿಟ್ಟು ತಾವು ಬೆಳೆದ ಬೆಳೆಗೆ ಕನಿಷ್ಟ ಬೆಲೆಯನ್ನು ಪಡೆಯುತ್ತಾರೆ. ಸರಕಾರ ಮತ್ತು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ್, ಬಿಜೆಪಿ ಮುಖಂಡ ನೀಲಕಂಠಯ್ಯ ಹಿರೇಮಠ, ಸುನಿಲ್ ಹೊಸೂರು ಇದ್ದರು.