LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟಕ್ಕೆ ಸಚಿವ ಶಿವರಾಜ ತಂಗಡಗಿ ಬೆಂಬಲ

ಕಾರ್ಖಾನೆ ‌ವಿರೋಧಿ ಹೋರಾಟ ಸ್ಥಳಕ್ಕೆ ಭೇಟಿ

ಕೊಪ್ಪಳ: ಕಾರ್ಖಾನೆ ವಿರೋಧಿ ಹೋರಾಟಗಾರ ನಾಲ್ಕೂ ಬೇಡಿಕೆ ಬಗ್ಗೆ ಸಿಎಂ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾರ್ಖಾನೆ ವಿರೋಧಿ ಹೋರಾಟಕ್ಕೆ ವೈಯಕ್ತಿಕವಾಗಿ ನನ್ನ ಸಹಮತವೂ ‌ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

 

ಇಲ್ಲಿನ‌ ನಗರಸಭೆ ಸಂಕೀರ್ಣದ ಆವರಣದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ಕೊಪ್ಪಳದಲ್ಲಿ ಬಲ್ಡೋಟಾ, ಕಿರ್ಲೋಸ್ಕರ್, ಮುಕುಂದ ಸುಮಿ, ಎಕ್ಸ್ ಇಂಡಿಯಾ, ಕಲ್ಯಾಣಿ ಸೇರಿ ಇಲ್ಲಿನ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟವಾಧಿ ಧರಣಿಯ 18ನೇ ದಿನ ಹೋರಾಟದ ಸ್ಥಳಕ್ಕೆ ಭೇಟಿ‌ ನೀಡಿ ಸೋಮವಾರ ಮಾತನಾಡಿದರು.

 

ಜಿಲ್ಲೆಯ ಜನರಿಗೆ ಬೇಡವಾದ ಪರಿಸರ ಹಾನಿ ಮಾಡುವ ಕಾರ್ಖಾನೆ ನಮಗೂ ಬೇಡ. ಈ ಹಿನ್ನೆಲೆ ನಾನು ಸರ್ವ ಪಕ್ಷ ನಿಯೋಗದೊಂದಿಗೆ  ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗಿದ್ದೆವು. ಆಗ ಸಿಎಂ ಸಿದ್ದರಾಮಯ್ಯ, ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕರೆ ಮಾಡಿ ಬಲ್ಡೋಟಾ ವಿಸ್ತರಣೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇನ್ನು ಕೆರೆಯನ್ನು 2037ರ ವರೆಗೆ ಲೀಜ್ ನೀಡಲಾಗಿದೆ. ಇದನ್ನು ಸಿಎಂ ಗಮನಕ್ಕೆ ತರುತ್ತೇನೆ. ಮುಂದಿನ ಕ್ಯಾಬಿನೆಟ್ ನಲ್ಲಿ ಈ‌ ವಿಚಾರ ಪ್ರಸ್ತಾಪ ಮಾಡುತ್ತೇನೆ. ಆರೋಗ್ಯ ಸಚಿವರು ಮತ್ತು ಕೈಗಾರಿಕೆ ಸಚಿವರು ಕೊಪ್ಪಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದೀರಿ. ಈ ವಿಚಾರವನ್ನೂ ಸಿಎಂ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.



ಈ ಮೊದಲು ಕಾರ್ಖಾನೆ ವಿರೋಧಿ ಹೋರಾಟದ ಪ್ರಧಾನ ಸಂಚಾಲಕ‌ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೊಪ್ಪಳ ಮತ್ತು ಬಲ್ದೋಟ ಕಾರ್ಖಾನೆ ಒಂದೇ ಕಡೆ ಇರಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೆ ಕೊಪ್ಪಳ ತಾಲೂಕಿನಲ್ಲಿ ಎಂಎಸ್ಪಿಎಲ್ ಸೇರಿ ಯಾವುದೇ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ವಿಸ್ತರಣೆ ಆಗಬಾರದು. ಬಸಾಪೂರ ಕೆರೆಯನ್ನು ಕೇವಲ 33 ಲಕ್ಷಕ್ಕೆ 2037ರ ವರೆಗೆ ಲೀಜ್ ಗೆ ನೀಡಲಾಗಿದೆ. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆ ಮಾಡಿದೆ. ಲೀಜ್ ನ ಷರತ್ತು ಸಂಪೂರ್ಣವಾಗಿ ಉಲ್ಲಂಘನೆ ಆಗಿವೆ. ಕೂಡಲೇ ಕ್ಯಾಬಿನೆಟ್ ನಲ್ಲಿ ಕೆರೆ ಲೀಜ್ ರದ್ದು ಮಾಡಬೇಕು. ಕಾರ್ಖಾನೆಯಿಂದ ಬಾಧಿತ ಹಳ್ಳಿಗೆಳಿಗೆ ಆರೋಗ್ಯ ಮತ್ತು ಕೈಗಾರಿಕೆ ಸಚಿವರು ಭೇಟಿ‌ ನೀಡುವಂತೆ ಮಾಡುಬೇಕು.‌ ಕಾರ್ಖಾನೆ ಸುತ್ತಲಿನ ಬಾಧಿತ ಗ್ರಾಮದ ಜನರಿಗೆ ಉನ್ನತ ಸಂಸ್ಥೆಯಿಂದ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಬೇಡಿಕೆ ಸಲ್ಲಿಸಿದರು. ಹೋರಾಟಗಾರ ಡಿ.ಎಂ.ಪೂಜಾರ ಮಾತನಾಡಿ ಸಚಿವರಿಗೆ ಮಾಹಿತಿ ನೀಡಿದರು.

ಸಂಸದ ರಾಜಶೇಖರ ಹಿಟ್ನಾಳ, ಕೊಪ್ಪಳ ಡಿಸಿ ಡಾ.ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ ಗುಪ್ತ, ಕೃಷ್ಣ ಇಟ್ಟಂಗಿ, ಮುತ್ತು ಕುಷ್ಟಗಿ, ದೊಡ್ಡಪ್ಪ ದೇಸಾಯಿ, ಗುರುರಾಜ ಹಲಗೇರಿ, ಅಕ್ವರ್ ಪಾಶಾ, ನಗರಸಭೆ ಆಯುಕ್ತ ವೆಂಕಟೇಶ ನಾಗನೂರ, ಹೋರಾಟಗಾರರಾದ  ಡಿ.ಎಚ್.ಪೂಜಾರ, ಕೆ.ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಿ. ಎಂ. ಬಡಿಗೇರ, ಬಸವರಾಜ ಶೀಲವಂತರ, ಮುದಕಪ್ಪ ಹೊಸಮನಿ, ಕಾಶಪ್ಪ ಛಲವಾದಿ, ಆನಂದ ಗೊಂಡಬಾಳ ಸೇರಿ ಇತರರು ಇದ್ದರು.
ಬಲ್ದೋಟ ಮತ್ತು ಕೊಪ್ಪಳ ಒಂದೇ ಕಡೆ ಇರಲು ಸಾಧ್ಯವಿಲ್ಲ. ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿರೋಧಿ ಹೋರಾಟ ಶಾಂತಿಯುತವಾಗಿ ನಡೆಯುತ್ತಿದೆ. ರಾಜ್ಯ ಸರಕಾರ ಈ ಹೋರಾಟವನ್ನು ಹಿಂಸಾ ರೂಪಕ್ಕೆ ತಿರುಗುವಂತೆ ಮಾಡಬಾರದು. ಕಾರ್ಖಾನೆಗೆ ನೀಡಿದ ಪರವಾನಗಿ ರದ್ದು ಮಾಡಿ ಆದೇಶ ಮಾಡಬೇಕು.

- ಅಲ್ಲಮಪ್ರಭು ಬೆಟ್ಟದೂರು, ಹೋರಾಟಗಾರರು


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST