ಗಣಿ ಕಾರ್ಮಿಕರನ್ನು ಕಾಯಂಗೊಳಿಸ ಬೇಕು, ಗುತ್ತಿಗೆದಾರರು ಬದಲಾದರೂ ಈಗಿರುವ ಗಣಿ ಕಾರ್ಮಿಕರು ಕೆಲಸದಲ್ಲಿ ಮುಂದುವರೆಯಬೇಕು, ಖಾಯಂ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು, ಗಣಿ ಕಾರ್ಮಿಕರಿಗೆ ಎಲ್ಲಾ ಕಾನೂನುಬದ್ಧ ಸೌಲಭ್ಯ ಖಾತ್ರಿ ಪಡಿಸಬೇಕು, ಮುಂತಾದ ಬೇಡಿಕೆಗಳಿಗಾಗಿ ಈ ಸಮ್ಮೇಳನ ಆಯೋಜಿಸಲಾಗಿತ್ತು.

ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಮಾತನಾಡುತ್ತಾ "ಗಣಿ ಕಾರ್ಮಿಕರು ತಮ್ಮ ದುಡಿಮೆಯಿಂದ ಸಂಪತ್ತನ್ನು ಸೃಷ್ಟಿಸುತ್ತಾರೆ. ಇದರಿಂದ ಸರ್ಕಾರಕ್ಕೆ, ಗಣಿ ಮಾಲೀಕರಿಗೆ ಕೋಟ್ಯಂತರ ಲಾಭವಿದೆ. ಆದರೆ ಕಾರ್ಮಿಕರ ಪರಿಸ್ಥಿತಿ ಮಾತ್ರ ಅತ್ಯಂತ ಘೋರವಾಗಿದೆ. ಗಣಿ ಕಂಪನಿಗಳಂತೂ ಕಾರ್ಮಿಕರನ್ನು ಜೀತದಾಳಿನಂತೆ ಕಾಣುತ್ತವೆ. ಎನ್.ಎಂ.ಡಿ.ಸಿಯು ಕೇಂದ್ರ ಸ್ವಾಮ್ಯದ ಸಂಸ್ಥೆಯಾಗಿದ್ದರೂ, ಗುತ್ತಿಗೆ -ಹೊರಗುತ್ತಿಗೆ ಹೆಸರಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ. ಗುತ್ತಿಗೆದಾರರ ಟೆಂಡರ್ ಮುಗಿದ ನಂತರ ,ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗುತ್ತದೆ. ಎನ್.ಎಂ.ಡಿ.ಸಿಯು ಯಾವುದೇ ರೀತಿಯಲ್ಲಿ ಸೇವಾ ಭದ್ರತೆ ಖಾತ್ರಿ ಪಡಿಸುವುದಿಲ್ಲ. ಮತ್ತೊಂದೆಡೆ ಎನ್.ಎಂ.ಡಿ.ಸಿ ಸಂಸ್ಥೆಗಾಗಿ ತಮ್ಮ ಭೂಮಿ ಕಳೆದುಕೊಂಡ, ಆರೋಗ್ಯ ಹದಗೆಡಿಸಿಕೊಂಡ ಕುಟುಂಬಗಳಿಗೆ ಖಾಯಂ ಉದ್ಯೋಗ ನೀಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕಿದೆ. ಆದರೆ ಅಧಿಕಾರದಲ್ಲಿರುವ ಯಾವುದೇ ಸರ್ಕಾರ, ಕಾರ್ಮಿಕ ಹಿತಾಸಕ್ತಿ ಬದಿಗಿಟ್ಟು, ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿವೆ. ಕಾರ್ಮಿಕ ಹಕ್ಕನ್ನು ದಮನ ಮಾಡುವ ಲೇಬರ್ ಕೋಡ್ ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಟಿದೆ. ಇಂತಹ ಪರಿಸ್ಥಿತಿಯಲ್ಲಿ ಗಣಿ ಕಾರ್ಮಿಕರು ಹೆಚ್ಚೆಚ್ಚು ಸಂಘಟಿತರಾಗಬೇಕು, ಹೋರಾಟವನ್ನು ರೂಪಿಸಬೇಕು " ಎಂದು ಕರೆ ನೀಡಿದರು.
ಭಾಷಣಕಾರರಾಗಿ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಮಾತನಾಡುತ್ತಾ " ಕಾರ್ಮಿಕರ ಒಗ್ಗಟ್ಟನ್ನು ಮುರಿಯಲು ಮಾಲೀಕರಾಗಲಿ, ಸರ್ಕಾರವಾಗಲಿ, ಅನೇಕ ಕುತಂತ್ರಗಳನ್ನು ಹೂಡುತ್ತವೆ. ಜಾತಿ, ಧರ್ಮ, ಭಾಷೆ ಮುಂತಾದ ಹೆಸರಿನಲ್ಲಿ ಕೊಳಕು ರಾಜಕೀಯ ಮಾಡುತ್ತಾ, ಕಾರ್ಮಿಕ ಹೋರಾಟವನ್ನು ದಾರಿ ತಪ್ಪಿಸಲು ಯತ್ನಿಸುತ್ತವೆ. ಕಾರ್ಮಿಕರಲ್ಲಿ ಅವಕಾಶವಾದ, ಗುಂಪುಗಾರಿಕೆ, ಸಮಯಸಾಧಕತೆ ಇಂತಹ ವಿಷಯಗಳಿಗೆ ಉತ್ತೇಜನ ನೀಡುತ್ತವೆ. ಈ ಎಲ್ಲಾ ಕೊಳಕು ವಿಚಾರಗಳನ್ನು ಸೋಲಿಸಿ, ತಮ್ಮ ಐಕ್ಯತೆಯನ್ನು ಬಲಪಡಿಸಿಕೊಳ್ಳಬೇಕು" ಎಂದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿದರು. ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯದರ್ಶಿ ಸೋಮಶೇಖರ್ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಸಂಯುಕ್ತ ಗಣಿ ಕಾರ್ಮಿಕ ಸಂಘದ ಉಪಾಧ್ಯಕ್ಷ ರಾದ ಎ.ದೇವದಾಸ್ ವಹಿಸಿದ್ದರು.
ವೇದಿಕೆಯಲ್ಲಿ ಮುಖಂಡರಾದ ಹುಲಿಗೇಶ್, ಬಾಬು, ಸಂತೋಷ್, ಅಂಬರೀಷ್, ಮಂಜುನಾಥ, ಕೊಟ್ರೇಶ್ ಮುಂತಾದವರು ಉಪಸ್ಥಿತರಿದ್ದರು.
ಗಣಿ ಕಾರ್ಮಿಕರ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ಎರಡು ಗೊತ್ತುವಳಿಗಳನ್ನು ಮಂಡಿಸಲಾಯಿತು. ಸಂಘಟನೆಯ ಹೋರಾಟದ ಕುರಿತಂತೆ ಸಂಘಟನಾತ್ಮಕ ವರದಿ ಮಂಡಿಸಲಾಯಿತು.
ಸಮ್ಮೇಳನದ ಕೊನೆಯಲ್ಲಿ ನೂತನ ಸಮಿತಿ ಚುನಾಯಿಸಲಾಯಿತು. ಅಧ್ಯಕ್ಷರಾಗಿ ಕೆ.ಸೋಮಶೇಖರ್, ಕಾರ್ಯಾಧ್ಯಕ್ಷ ರಾಗಿ ಎ.ದೇವದಾಸ್,ಪ್ರಧಾನ ಕಾರ್ಯದರ್ಶಿಗಳಾಗಿ ಡಾ.ಪ್ರಮೋದ್, ಇನ್ನಿತರ ಪದಾಧಿಕಾರಿಗಳನ್ನು ಚುನಾಯಿಸಲಾಯಿತು