ಕೊಪ್ಪಳ: ದೇಶದ ಜನರು ತೀವ್ರಗತಿಯಲ್ಲಿ ಬದಲಾವಣೆ ಕಾಣುತ್ತಿದ್ದಾರೆ, ಮೋಸ ಮತ್ತು ನಯವಂಚಕತನಗಳು ಅರ್ಥವಾಗುತ್ತಿವೆ, ಈ ಜಾಗೃತಿಯಿಂದ ಬದಲಾವಣೆ ನಿಶ್ಚಿತ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಆಶಯ ವ್ಯಕ್ತಪಡಿಸಿದರು.
ಅವರು ಮಹಿಳಾ ಕಾಂಗ್ರೆಸ್ ಮೂಲಕ ಬಿಜೆಪಿ, ಕೇಂದ್ರ ಸರಕಾರ ಹಾಗೂ ಚುನಾವಣೆ ಆಯೋಗದ ಮತಗಳ್ಳತನ ವಿರುದ್ಧ ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಇಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು, ಕಾರ್ಯಕರ್ತರು ಮತ್ತು ನಾಗರೀಕರು, ಮಹಿಳೆಯರಿಗೆ ಜಾಗೃತಿ ಮೂಡಿಸಿ ಸಹಿ ಸಂಗ್ರಹ ಮಾಡಿದರು.

ಮದುವೆ ಮನೆಯೂ ಸೇರಿದಂತೆ ಅನೇಕ ವಾರ್ಡುಗಳಲ್ಲಿ ಜನರನ್ನು ಗುಂಪು ಗುಂಪಾಗಿ ನಿಲ್ಲಿಸಿಕೊಂಡು ಮತಗಳ್ಳತನ ಮತ್ತು ಅದರ ಮೂಲಕ ಮಾಡಲಾಗುತ್ತಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದರು. ಸುಳ್ಳು ಮತಗಳ ಜೋಡಣೆ, ಇರುವ ಮತಗಳನ್ನು ತೆಗೆದು ಹಾಕುವ ಕೆಟ್ಟ ಕೆಲಸದ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಈ ಸಹಿ ಸಂಗ್ರಹ ಮಾಡಲಾಗುತ್ತಿದೆ. ದೇಶದ ಭವಿಷ್ಯವನ್ನೇ ಹಾಳು ಮಾಡುವ ಮೂಲಕ ದೇಶದ್ರೋಹಿ ಕೆಲಸದಲ್ಲಿ ಕೇಂದ್ರ ಬಿಜೆಪಿ ಸರಕಾರ ತೊಡಗಿಕೊಂಡಿದೆ. ಜನರ ಪರವಾಗಿ ಇಲ್ಲದ ಈ ಆಡಳಿತ ಮೋದಿಯವರ ಹಿಡನ್ ಅಜೆಂಡಾ, ಅವರು ಮನುವಾದಿಯ ಗುಲಾಮಗಿರಿಯ ಆಡಳಿತ ನೀಡಲು ತಮ್ಮ ಗೆಳೆಯರನ್ನು ಕರೆದುಕೊಂಡು ದೇಶವನ್ನು ಲೂಟಿ ಮಾಡುತ್ತಿದ್ದಾರೆ, ಅದಕ್ಕಾಗಿ ಅವರು ಎಲ್ಲಾ ಸರಕಾರಿ ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಅನೇಕ ರಾಜ್ಯಗಳಲ್ಲಿ ಆರಂಭಿಸಿರುವ ಎಸ್.ಐ.ಆರ್. ಜನಗಣತಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ರಾಜ್ಯದಲ್ಲಿ ಮಾಡಲು ಬಿಡಬಾರದು ಇದು ಮತಗಳ್ಳತನ ಮುಚ್ಚಿಡಲು ಹೊಸ ನಾಟಕ ಜೊತೆಗೆ ಇದರ ಮೂಲಕ ಸಾಮಾನ್ಯ ಮತ್ತು ಮೂಲ ನಿವಾಸಿಗಳ ಮತ ಹಕ್ಕು ಕಸಿಯುವ ಕುತಂತ್ರವಾಗಿದೆ ಎಂದರು. ಇದಕ್ಕೆ ಪುಷ್ಟಿಯೆಂಬಂತೆ ದೇಶದ ಜನರ ಆಧಾರ್ ಕಾರ್ಡಿನಲ್ಲಿ ಕೇರ್ ಆಫ್ ಕಾಲಂ ತೆಗೆದು ಹಾಕುವ ಮೂಲಕ ಆಧಾರ್ ಶಕ್ತಿ ಕುಂದಿಸುವ ಕೆಲಸ ನಡೆಸಿದ್ದಾರೆ, ಸರ್ವೋಚ್ಛ ನ್ಯಾಯಾಲಯ ಹೇಳಿದ ಮೇಲೆ ಆಧಾರ್ ಅನ್ನು ಎಸ್.ಐ.ಆರ್. ನ ೧೨ ನೇ ದಾಖಲೆಯಾಗಿ ಪರಿಗಣಿಸಿದ್ದು ಸಹ ಇದಕ್ಕೆ ಮತ್ತೊಂದು ಸಾಕ್ಷಿ ಎಂದರು.

ಈ ಸಂದರ್ಭದಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ, ಮಜಿ ಜಿಲ್ಲಾ ಪಮಚಾಯತಿ ಸದಸ್ಯರಾದ ಎಸ್. ಬಿ. ನಾಗರಳ್ಳಿ, ಗೂಳಪ್ಪ ಹಲಗೇರಿ, ರಾಮಣ್ಣ ಚೌಡಕಿ, ಗ್ಯಾರಂಟಿ ಅಧ್ಯಕ್ಷ ಎಸ್. ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರಾದ ನಾಗರಾಜ ಕುಷ್ಟಗಿ, ಗುರುರಾಜ ಹಲಗೇರಿ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ವಿಶ್ವನಾಥ ರಾಜು, ಪಂಪಣ್ಣ ಪೂಜಾರ, ಕಿಶೋರಿ ಬೂದನೂರ, ಮಂಜುಳಾ ಉಂಡಿ, ಶಿಲ್ಪಾ ಗುಡ್ಲಾನೂರ, ಗಂಗಮ್ಮ ನಾಯಕ ಅನೇಕರಿದ್ದರು.