ಬಳ್ಳಾರಿ: ಈತನ ಹೆಸರು ಮಾಬುಸಾಬ್ ಅಂತ. ಪ್ರೀತಿಯಿಂದ ಬಾಷಾ ಎಂದು ಕರೆಯಲ್ಪಡುವ ಈ ಯುವಕ ನಮ್ಮ, ನಿಮ್ಮ ಹಾಗಲ್ಲ. ಈತನ ಹುಟ್ಟು ಇಸ್ಲಾಂ ಆದರೂ ಯಾವುದೇ ಜಾತಿ, ಮತ ಮೀರಿ ಮಾನವೀಯತೆಗೆ ಮಿಡಿಯುವ ಸಹೃದಯಿ ಮನುಷ್ಯತ್ವ.
ನೀವೊಮ್ಮೆ ಈತನನ್ನು ಹತ್ತಿರದಿಂದ ಗಮನಿಸಿದರೆ ಸಾಕು. ಆತನ ದೃಷ್ಟಿಗೆ ನೀವು ಬಿದ್ದಿರೋ.... ಆತನೇ ನಗುಮುಖದಿಂದ ಮಾತನಾಡಿಸ್ತಾನೆ. ಅಣ್ಣ... ಈ ಮನುಷ್ಯನ ಬದುಕು ಕ್ಷಣಿಕ ಅಣ್ಣ. ಎಲ್ಲ ಗೊತ್ತಿದ್ದೂ ಎಲ್ಲ ರೀತಿಯ ಚೇಷ್ಟೆ ಮಾಡ್ತಾನೆ. ನಾವು ಯಾರಿಗೇ ಆಗಲಿ ಒಳ್ಳೆಯದು ಮಾಡಬೇಕಣ್ಣ. ಆ ದೇವರು ನಮಗೆ ಒಳ್ಳೆಯದನ್ನೇ ಮಾಡ್ತಾನೆ. ನಾವು ಕೆಟ್ಟದ್ದನ್ನಮಾಡಿದ್ರೆ ಕೆಟ್ಟದೇ ಆಗ್ತದೆ. ನನ್ನ ಜೀವನದಲ್ಲಿ ಇಂತಹ ಎಷ್ಟೋ ಘಟನೆ ನೋಡೀನಣ್ಣ.
ನಮ್ಮಲ್ಲಿ ದುಡ್ಡು ಇದ್ದರೆ ಎಲ್ಲರೂ ಬಂಧುಗಳೇ. ಇಲ್ಲಾಂದ್ರೆ ನಮ್ಮನ್ನ ಯಾರೂ ಮಾತನಾಡಿಸಲ್ಲಣ್ಣ. ಯಾರು ಏನೇ ಚಿತಾವಣೆ ನಡೆಸಿದರೂ ನಾವು ನಂಬುವ ದೇವರು ನಮ್ಮನ್ನ ಕೈ ಬಿಡುವುದಿಲ್ಲಣ್ಣ.
ಅಣ್ಣ, ನಮ್ಮದು ಕುರುಗೋಡು. ನಾನು ಕೆಲಸ ಮಾಡೋದು ಕೋಲಾರ ಹತ್ತಿರದ ಫ್ಯಾಕ್ಟರಿಯೊಂದರಲ್ಲಿ. ನನಗೆ ಮದುವಿ ಆಗಿ, ಎರಡು ಮಕ್ಕಳಿದ್ದಾರಣ್ಣ. ಫ್ಯಾಮಿಲಿ ಜೊತೆಗೆ ಅಜ್ಮೀರ್ ಯಾತ್ರೆ ಕೈಗೊಂಡಿದ್ದೆ. ನಂಗಿನ್ನೂ 27 ವರ್ಷ ಅಣ್ಣ. ನಾವು ಎಲ್ಲಿಯೇ ಇರಲಿ, ಹೇಗೆಯೇ ಇರಲಿ. ನಮ್ಮೂರು ಕುರುಗೋಡಿಗೆ ಬಂದಾಗ ಸಿಗುವಷ್ಟು ಸಂತೋಷ, ನೆಮ್ಮದಿ ಎಲ್ಲೂ ಸಿಗಲ್ಲಣ್ಣ ಅಂತ ಹುಟ್ಟೂರಿನ ಬಗ್ಗೆ ಅತ್ಯಂತ ಹೆಮ್ಮೆಯ ಭಾವನೆ ಇಟ್ಟುಕೊಂಡಿದ್ದಾನೆ.
ಅಣ್ಣ... ಬರೀ ಸ್ವಾರ್ಥ ತುಂಬಿದ ಜನ್ರಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಒಳ್ಳೆಯವರು ಇದ್ದಾರಣ್ಣ. ಅದಕೆ ದೇವರು ಸಕಾಲಕ್ಕೆ ಮಳೆ ಸುರಿಸಿ, ಬೆಳೆ ಬೆಳೆದು ಎಲ್ಲೆರಿಗೂ ಅನ್ನ ನೀಡ್ತಿದಾನೆ. ಹೀಗೆ ಇಂತಹ ಹೃದಯಮಿಡಿಯುವ ಅನೇಕ ವಿಷಯಗಳನ್ನು ಓತಪ್ರೋತವಾಗಿ ಮಾತಾಡ್ತಾನೆ.
ಬಾಷಾ ಕುಟಿಲ ಗುಣಗಳ ವ್ಯಕ್ತಿಗಳ ನಡುವೆ ಮುಗ್ಧನಂತೆ ಕಂಡರೂ ಈತನಲ್ಲಿ ಜೀವನದ ಆಳ ಅನುಭವವಿದೆ. ಅಂದಹಾಗೆ... ಬೆಂಗಳೂರಿನಿಂದ ಬಳ್ಳಾರಿಗೆ ಬರುವಾಗ ಆಕಸ್ಮಾತ್ ಆಗಿ ಬಸ್ ನಲ್ಲಿ ಪ್ರಯಾಣಿಸುವಾಗ ಭೇಟಿಯಾದ. ಈತನ ಜೀವನಾನುಭವದ ಮಾತುಗಳನ್ನು ಕೇಳಿದ ಸಹಪ್ರಯಾಣಿಕರಿಗೆ ಬಳ್ಳಾರಿಗೆ ಹೇಗೆ ಬಂದೆವೋ ಗೊತ್ತಾಗಲಿಲ್ಲ. ಈತ ಭೇಟಿಯಾದಾಗ ನೀವೂ ಒಮ್ಮೆ ಈತನ ಮಾತು ಕೇಳಿ ಫಿದಾ ಆಗುವುದರಲ್ಲಿ ಸಂದೇಹವೇ ಇಲ್ಲ.
- ಎಂ.ವಿ.ಜೋಷಿ.