LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸತ್ಯ-ಅಹಿಂಸಾ ಮಾರ್ಗದಲ್ಲಿ ಸಾಗೋಣ

ಮಹಾತ್ಮ ಗಾಂಧೀಜಿ 156ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಕರೆ

ಬಳ್ಳಾರಿ: ಪ್ರತಿಯೊಬ್ಬರೂ ಸತ್ಯ-ಅಹಿಂಸಾ ಮಾರ್ಗದಲ್ಲಿ ನಡೆಯೋಣ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ 156ನೇ ಜಯಂತ್ಯೋತ್ಸವದ ಅಂಗವಾಗಿ ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಗಾಂಧಿ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಯುವ ಪೀಳಿಗೆಯು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.



ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟವರು. ಮಹಾತ್ಮ ಗಾಂಧೀಜಿ ಅವರು ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್’ ಎಂದು ಹೇಳಿದ್ದಾರೆ. ಈ ಇಬ್ಬರು ಮಹಾನ್ ನಾಯಕರ ಆದರ್ಶ ಪಾಲನೆ ಮಾಡಿದರೆ ನಾವು ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಮಹನೀಯರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಬಳ್ಳಾರಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಅವರು ಧುಮುಕುವ ಮುನ್ನಾ ದೇಶದ್ಯಾಂತ ಸಂಚರಿಸಿ, ಜನಸಾಮಾನ್ಯರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಅದರಂತೆ, ಅವರು 1921ರ ಅ.01ರಂದು ಪ್ರಥಮ ಬಾರಿಗೆ ಬಳ್ಳಾರಿಗೆ ಭೇಟಿ ನೀಡಿದ್ದರು, ಆ ಸಂದರ್ಭದಲ್ಲಿ ಬಳ್ಳಾರಿ ರೈಲು ನಿಲ್ದಾಣದಲ್ಲಿ ಒಂದು ರಾತ್ರಿ ನಿದ್ರಿಸಿ ಮರು ದಿನ ಧಾರವಾಡಕ್ಕೆ ಪ್ರಯಾಣಿಸಿದುದ್ದನ್ನು ನಾವು ಸ್ಮರಿಸಬಹುದಾಗಿದೆ ಎಂದರು.



ಬಾಪೂಜಿಯವರು, 1934ರ ಮಾ.03ರಂದು ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಣೆಗಾಗಿ ಎರಡನೇ ಬಾರಿ ಬಳ್ಳಾರಿಗೆ ಆಗಮಿಸಿದ್ದರು ಹಾಗೂ ಇಲ್ಲಿಂದ ಸಂಡೂರಿಗೆ ಸಹ ಪ್ರಯಾಣಿಸಿ, ಅಲ್ಲಿರುವ ಪರಿಶಿಷ್ಟರಿಗೆ ಕುಮಾರಸ್ವಾಮಿ ದೇವಸ್ಥಾನದ ಪ್ರವೇಶಕ್ಕೆ ಅಂದಿನ ಘೋರ್ಪಡೆ ರಾಜಮನೆತನ ಅವಕಾಶ ನೀಡಿದ್ದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿದ್ದರು ಎಂದು ಹೇಳಿದರು.

ಗಾಂಧೀಜಿಯವರ ಮರಣದ ನಂತರ ಅವರ ಚಿತಾಭಸ್ಮವನ್ನು ಅಖಂಡ ಬಳ್ಳಾರಿಯಾಗಿದ್ದ ಸಂದರ್ಭದಲ್ಲಿ ಕೂಡ್ಲಿಗಿ ತಾಲ್ಲೂಕಿನಲ್ಲಿ ಅಂದಿನ ಗಾಂಧಿವಾದಿಗಳು ತಂದು ಸ್ಮಾರಕವನ್ನು ನಿರ್ಮಿಸಿರುವುದು ನಮ್ಮ ಬಳ್ಳಾರಿಯ ಹೆಮ್ಮೆಯಾಗಿದೆ ಎಂದು ಸ್ಮರಿಸಿದರು.

ಬಳ್ಳಾರಿಯ ಆಕಾಶವಾಣಿ ಉದ್ಘೋಷಕರು ಹಾಗೂ ಉಪನ್ಯಾಸಕರಾದ ಅಮಾತಿ ಬಸವರಾಜ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಒಬ್ಬ ಮನುಷ್ಯ ಉತ್ತಮ ನಾಗರಿಕನಾಗಿ ಬಾಳಲು, ಸುಸೂತ್ರವಾಗಿ ಜೀವನ ನಡೆಸಲು 11 ಸೂತ್ರಗಳನ್ನು ನೀಡಿದ್ದು, ಅದರಂತೆ ನಾವೆಲ್ಲರೂ ಜೀವಿಸಬೇಕಿದೆ. ಹಾಗೇಯೇ ಅವರ ನುಡಿಯಂತೆ ತತ್ವವಿಲ್ಲದ ರಾಜಕೀಯ, ಶ್ರಮವಿಲ್ಲದ ದುಡಿಮೆ ಎರಡೂ ವ್ಯರ್ಥ ಎಂದು ಮಹಾತ್ಮರು ತಿಳಿಸಿದ್ದಾರೆ.



ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು ಮತ್ತು ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಾಂಧಿಭವನ ಆವರಣದಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸರ್ವಧರ್ಮ ಗ್ರಂಥಗಳ ಬೋಧನೆ ಮಾಡಿದ್ದು, ವಿಶೇಷವಾಗಿತ್ತು. ಬಳ್ಳಾರಿ ತಾಲ್ಲೂಕಿನ ಇಬ್ರಾಹಿಂಪುರದ ಎಸ್.ಎಂ.ಹುಲುಗಪ್ಪ ತಂಡದಿಂದ ಮಹಾತ್ಮ ಗಾಂಧೀಜಿ ಜಯಂತಿಯ ಅಂಗವಾಗಿ ಗಾಂಧೀಜಿ ಕುರಿತು ಭಜನಾ ಗೀತೆ ಪ್ರಸ್ತುತ ಪಡಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಬಹುಮಾನ ವಿಜೇತರು:

ಪ್ರೌಢಶಾಲೆ ವಿಭಾಗ:

ಪ್ರಥಮ-ಚಿನ್ನ (ಸರ್ಕಾರಿ ಪ್ರೌಢಶಾಲೆ, ತಾಳೂರು, ಸಂಡೂರು(ತಾ)

ದ್ವಿತೀಯ-ಸುಷ್ಮಿತಾ (ಸರ್ಕಾರಿ ಪ್ರೌಢಶಾಲೆ, ತೋರಣಗಲ್ಲು, ಸಂಡೂರು(ತಾ)

ತೃತೀಯ-ಶಾಂತಿ.ಹೆಚ್ (ಸಂತ ಜಾನ್ ಸರ್ಕಾರಿ ಪ್ರೌಢ ಶಾಲೆ, ಬಳ್ಳಾರಿ ಪಶ್ಚಿಮ)



ಪದವಿಪೂರ್ವ ಕಾಲೇಜು ವಿಭಾಗ:

ಪ್ರಥಮ-ಕೆ.ಪದ್ಮಾವತಿ (ಸರ್ಕಾರಿ (ಮಾಪು) ಪದವಿ ಪೂರ್ವ ಕಾಲೇಜು ಬಳ್ಳಾರಿ)

ದ್ವಿತೀಯ-ಎಸ್.ಮಾರುತಮ್ಮ (ಸರ್ಕಾರಿ ಪದವಿ ಪೂರ್ವ ಕಾಲೇಜು, ತೆಕ್ಕಲಕೋಟೆ)

ತೃತೀಯ-ರೇವತಿ (ಡಾ.ಎಪಿಜಿ ಅಬ್ದುಲ್ ಕಲಾಂ ಪದವಿಪೂರ್ವ ಕಾಲೇಜು, ಕೊಳಗಲ್ಲು, ಬಳ್ಳಾರಿ ತಾಲ್ಲೂಕು).

 

ಪದವಿ/ಸ್ನಾತಕೋತ್ತರ ವಿಭಾಗ:

ಪ್ರಥಮ-ದೇವೆಂದ್ರ ನಾಯ್ಕ ಕಾರೇಕಲ್ಲು (ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ)

ದ್ವಿತೀಯ-ಜಿ.ವಿಜಯ್ ಕುಮಾರ್(ಸಸಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ)

ತೃತೀಯ-ಮಾನ್ಯ.ಎನ್ (ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಳ್ಳಾರಿ).

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಉಮಾದೇವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ ಸೇರಿದಂತೆ ಶಾಲಾ-ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST