ಬೆಳಿಗ್ಗೆ 11.15ರ ವೇಳೆಗೆ ಭಕ್ತರು ಮಡಿ ತೇರನ್ನು ಎಳೆದರು. ಸಂಜೆ 4.15ರ ವೇಳೆಗೆ, ಇನ್ನೂ ಚುರುಕು ಮುಟ್ಟಿಸುವಂತಿದ್ದ ಬಿಸಿಲ ನಡುವೆಯೇ ಉತ್ಸವಕ್ಕೆ ಚಾಲನೆ ದೊರಕಿತು. ನಗರದ ಭಕ್ತರೊಂದಿಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರ ಸಂಭ್ರಮದ ನಡುವೆ ತೇರು ಸಾಗಿತು.

ಬ್ರೂಸ್ಪೇಟೆ ಠಾಣೆ ಮುಂಭಾಗ ದಿಂದ ಮುಂದುವರಿದ ತೇರು ದೊಡ್ಡ ಮಾರುಕಟ್ಟೆ, ನೀಲಕಂಠೇಶ್ವರ ಗುಡಿ ಮೂಲಕ ಕಣೇಕಲ್ಲು ಬಸ್ ನಿಲ್ದಾಣ ಸಮೀಪದವರೆಗೂ ಸಾಗಿ ಹಿಂದಿರುಗಿತು. ಬಜಾರು ರಸ್ತೆಯ ಅಕ್ಕ ಪಕ್ಕದಲ್ಲಿ, ಕಟ್ಟಡಗಳ ಮೇಲ್ಭಾಗದಲ್ಲಿ ನಿಂತು ಭಕ್ತರು ತೇರಿಗೆ ಹೂವು ಹಣ್ಣು ಎಸೆದು ಹರಕೆ ತೀರಿಸಿದರು.
ತಳ್ಳಾಟ: ತೇರಿನ ಸುತ್ತಮುತ್ತ ಹೆಚ್ಚಿನ ಭಕ್ತರು ಸಾಗುತ್ತಿದ್ದ ಪರಿಣಾಮವಾಗಿ ತಳ್ಳಾಟ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ತೇರಿಗೆ ಎಸೆದ ಬಾಳೆಹಣ್ಣುಗಳು ಬಿದ್ದು ರಸ್ತೆಯಲ್ಲಿ ಜಾರಿಕೆ ಉಂಟಾಗಿದ್ದರಿಂದ ಕೆಲವು ಭಕ್ತರು ಬಿದ್ದ ಘಟನೆಯೂ ನಡೆಯಿತು.
ತೇರು ಬಜಾರಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಜನ ಮತ್ತು ವಾಹನ ದಟ್ಟಣೆ ಹೆಚ್ಚಾಗಿತ್ತು. ಇನ್ನೂ ಬೆಳಗ್ಗೆ ಮಡಿ ತೇರು ಎಳೆಯುವ ಸಮಯದಲ್ಲಿ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಂತೆಯೇ ಸಂಜೆ ನಡೆದ ಬ್ರಹ್ಮ ರಥೋತ್ಸವದ ವೇಳೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭೇಟಿ ನೀಡಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ಸ್ವಾಮಿಯ ಆಶೀರ್ವಾದ ಪಡೆದರು.