ಕೊಪ್ಪಳ: ಕಾರ್ಯಕ್ರಮ ಒಂದರಲ್ಲಿ ಕಲ್ಲಡ್ಕ ಭಟ್ ಅವರು ಅತ್ಯಂತ ಕೆಟ್ಟ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ್ದು, ಧರ್ಮವನ್ನು ಗುರಿಯಾಗಿಸಿಕೊಂಡು ಮಹಿಳೆಯರನ್ನು ನಿಂದಿಸಿದ್ದನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಟೀಕಿಸಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಭಟ್ ನೀಡಿದ ಹೇಳಿಕೆ ವಿರೋಧಿಸಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ವಿಧಾನ ಸಭೆ ಸಭಾಧ್ಯಕ್ಷ ಯು. ಟಿ. ಖಾದರ್ ಪ್ರತಿನಿಧಿಸುವ ಮಂಗಳೂರು (ಉಳ್ಳಾಲ) ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಭಾಕರ್ ಭಟ್, ಉಳ್ಳಾಲದಲ್ಲಿ ಹಿಂದೂ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಅಲ್ಲಿನ ಬ್ಯಾರಿ (ಕರಾವಳಿಯ ಮುಸ್ಲಿಮರು) ಗಳ ಮನೆಯಲ್ಲಿ ಆರರಿಂದ ಏಳು ಮಕ್ಕಳಿದ್ದಾರೆ. ಅಲ್ಲಾನ ಹೆಸರಿನಲ್ಲಿ ಅವರು ಮಕ್ಕಳು ಮಾಡುತ್ತಲೇ ಇದ್ದಾರೆ. ಹಿಂದೂಗಳಲ್ಲಿ ಓಟಿಲ್ಲದ ಕಾರಣ ನಮ್ಮವರು ಸೋಲುತ್ತಿದ್ದಾರೆ ಎಂದು ಹೇಳಿರುವದು ನಿಜಕ್ಕೂ ಮಾನಗೇಡಿ ಕೃತ್ಯವಾಗಿದ್ದು ಇದು ಬಿಜೆಪಿ, ಸಂಘ-ಪರಿವಾರದ ಮನಸ್ಥಿತಿ ಎಂದಿದ್ದಾರೆ.
ಕೇವಲ ಇಂತಹ ದ್ವೇಷ ಹುಟ್ಟಿಸುವ ಕೆಲಸದಲ್ಲೇ ನಾಡನ್ನು ಹಾಳುಗೆಡುಹುತ್ತಿದ್ದಾರೆ, ಯಾರು ಎಷ್ಟು ಮಕ್ಕಳನ್ನು ಹೆರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವಾಗಲಿ, ಯೋಚನೆಯಾಗಲಿ ಗಂಡ ಹೆಂಡತಿಗೆ ಸಂಬಂದಿಸಿದ್ದು ಹೊರತು ಮೂರನೇ ವ್ಯಕ್ತಿಗೆ ಅಲ್ಲಿ ಕೆಲಸವಿಲ್ಲ. ಇನ್ನು ಅವರವರ ಕುಟುಂಬದ ರಕ್ಷಣೆಯನ್ನು ಅವರೇ ನೋಡಿಕೊಳ್ಳಬೇಕಿದೆ, ಬೇಕಾಬಿಟ್ಟಿ ಜಿ ಎಸ್ ಟಿ ಮೂಲಕ, ಸುಖಾಸುಮ್ಮನೇ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ಹೈರಾಣಾಗಿಸಿದ ಬಿಜೆಪಿ ಮೋದಿ ಸರಕಾರದಿಂದ ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳಲು ಬಡವರ ಹೈರಾಣಾಗಿದ್ದಾರೆ, ರಾಜ್ಯದ ಪಾಲಿನ ಹಣತರಲು ಸಾಧ್ಯವಿಲ್ಲದ ಇವರು ಕೇವಲ ಹಿಂದೂ ರಕ್ಷಕರೆಂದು ಬೊಬ್ಬೆ ಇಡುವದರಿಂದ ದೇಶದ ಯಾವ ಜನರೂ ಸುಖವಾಗಿ ಇಲ್ಲ. ಅವರು ಕೇವಲ ಅಧಿಕಾರಶಾಹಿ ಮೇಲ್ವರ್ಗದ ಶ್ರೀಮಂತ ಜನರಿಗೆ ಮಾತ್ರ ಎಂದು ಜ್ಯೋತಿ ಎಂ. ಗೊಂಡಬಾಳ ಕುಟುಕಿದ್ದಾರೆ.