ಅವರು ಶುಕ್ರವಾರ ಪಟ್ಟಣ ಸಮೀಪದ ಡಣಾನಾಯಕನ ಕೆರೆ ಗ್ರಾಮದಲ್ಲಿ ಬಿ.ಎಂ.ಎಂ.ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಲಾದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು. ಸಮುದಾಯ ಭವನಗಳು ಒಂದು ನಿರ್ಧಿಷ್ಟ ಉದ್ದೇಶದ ಗುರಿ ಹೊಂದಿದ್ದು, ಅದು ಒಂದು ಸಹಾನುಭೂತಿಯ ಪ್ರೇರಣೆ ಜೊತೆ ಭಾವೈಕ್ಯತೆಯನ್ನು ಬೆಸೆಯುವುದಾಗಿದೆ. ಗ್ರಾಮಗಳಲ್ಲಿ ನಡೆಯುವ ಯಾವುದೇ ಸಭೆ, ಸಮಾರಂಭ, ಮದುವೆ, ತರಬೇತಿ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ಶುಭ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ ಎಂದರು.

ಗ್ರಾಮಗಳಲ್ಲಿ ನಡೆಯುವ ಯಾವುದೇ ಶುಭ ಕಾರ್ಯಕ್ರಮಗಳಿಗೆ ಸಾಮೂಹಿಕವಾಗಿ ಒಂದೆಡೆ ಸೇರಲು ಪ್ರತಿ ಗ್ರಾಮಗಳಲ್ಲಿಯು ಸರಿಯಾದ ಸ್ಥಳದ ಅಭಾವವಿದೆ. ಈ ಕೊರತೆ ನೀಗಿಸಿ, ಒಂದು ನಿರ್ಧಿಷ್ಟ ಜಾಗ ಗುರುತಿಸಿ ಅಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಇದು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ. ನಿಮ್ಮೆಲ್ಲರ ಆಶಯದಂತೆ ನಮ್ಮ ಸಂಸ್ಥೆಯಿಂದ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿಕೊಡಲಾಗಿದೆ. ಸಮಾಜದಲ್ಲಿ ಸಂಕೀರ್ಣತೆ ತೊಡೆದು ಸೌಹಾರ್ದಯುತವಾಗಿ, ಶಾಂತಿಯಿಂದ ಎಲ್ಲರೂ ಒಂದೆಡೆ ಸೇರಿ ಚರ್ಚಿಸಲು, ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಸಮುದಾಯ ಭವನಗಳು ಸಹಕಾರಿಯಾಗಿವೆ. ಇದನ್ನು ಉತ್ತಮ ಕೆಲಸ-ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಿ. ಇದರ ಶುಚಿತ್ವ ಮತ್ತು ರಕ್ಷಣೆ ತಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ನಮ್ಮ ಸಂಸ್ಕೃತಿ, ಪರಂಪರೆ, ಧರ್ಮ ಮುಂತಾದ ವಿಷಯಗಳನ್ನು ಸಮನಾಗಿ ಹಂಚಿಕೊಳ್ಳಲು ಸಮುದಾಯ ಭವನಗಳು ಸೂಕ್ತವೇದಿಕೆಯಾಗಿವೆ. ಶಿಕ್ಷಣ, ಮತ್ತು ಜಾಗೃತಿ ಕಾರ್ಯಕ್ರಮ, ಆಕಸ್ಮಿಕ ಆಪತ್ತು ನಿರ್ವಹಣೆಗೆ ಸಿದ್ದತೆ, ಸರಕಾರಿ ಮತ್ತು ಸರಕಾರೇತರ ಯೋಜನೆಗಳ ಅನುಷ್ಠಾನ, ಮಹಿಳಾ ಸ್ವಸಹಾಯ ಸಂಘಗಳ, ಆರೋಗ್ಯ ಕಾರ್ಯಕರ್ತೆಯರ, ಯುವ ಸಂಘ ಸಂಸ್ಥೆಗಳ, ಆರೋಗ್ಯ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮ ಇನ್ನು ಮುಂತಾದ ಸತ್ಕಾರ್ಯಗಳಿಗೆ ಸದ್ಭಳಕೆಯಾಗಲಿ ಎಂದರು.

ಈ ಸಂದರ್ಭದಲ್ಲಿ ಡಣಾನಾಯಕನ ಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಲಕ್ಷಿನಾಗರಾಜ, ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಜಯಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿಲಾನ್ ಸಾಬ್, ಕೃಷ್ಣನಾಯಕ್, ಬ್ಯಾಲಕುಂದಿ ಶ್ರೀನಿವಾಸ್, ಎಲ್.ಮಂಜುನಾಥ, ಗ್ರಾಮದ ಮುಖಂಡರಾದ ಬಣಕಾರ್ ಮೃತ್ಯುಂಜಯ, ನಿಂಗಪ್ಪ, ಬಿ.ಗೋಣೆಪ್ಪ, ಎ.ಮಂಜುನಾಥ, ರುದ್ರಪ್ಪ, ಉಪ್ಪಾರ್ ಸೋಮಪ್ಪ, ಎಚ್.ನಾಗಪ್ಪ, ಬಿ.ಆನಂದ, ಬಿ.ಎಂ.ಎಂ.ಸಂಸ್ಥೆಯ ಅಧಿಕಾರಿಗಳಾದ ಲಿಂಗರಾಜ, ಮಂಜುನಾಥ ಚಿಕ್ಮಠ, ಸಿ.ಎಸ್.ಆರ್ ವಿಭಾಗದ ಅರುಣ್ ಕುಮಾರ್ ಎಂ. ಇತರರಿದ್ದರು.