ಇಂಥದ್ದೇ ಒಂದು ಪ್ರಸಂಗ ಪುಟ್ಟಪರ್ತಿಯಲ್ಲಿ ನಡೆದಿತ್ತು. ಒಂದೂವರೆ ವರ್ಷದ ಮಗು ಆಟವಾಡುತ್ತಿದ್ದಾಗ ದೊಡ್ಡ ಗಾತ್ರದ ಲೋಹದ ಪಿನ್ ಅನ್ನು ನುಂಗಿಬಿಟ್ಟಿತು. ಆಶ್ಚರ್ಯವೆಂದರೆ ಮಗುವಿಗೆ ವಾಂತಿ, ಜ್ವರ ಅಥವಾ ಹೊಟ್ಟೆ ಉಬ್ಬರದ ಯಾವುದೇ ಲಕ್ಷಣಗಳು ಕಂಡುಬAದಿರಲಿಲ್ಲ. ಆದರೆ ಮಗು ಮಲವಿಸರ್ಜನೆ ಮಾಡದೇ ಇರುವುದು ಹೆತ್ತವರಲ್ಲಿ ಆತಂಕ ಹುಟ್ಟಿಸಿತು.
ಪುಟಪರ್ತಿಯಲ್ಲಿದ್ದ ಈ ಕುಟುಂಬ ಮರುದಿನ ಮಗುವನ್ನು ಬೆಂಗಳೂರಿನ ಮೆಡಿಕೋವರ್ ಆಸ್ಪತ್ರೆಗೆ ಕರೆದುಕೊಂಡು ಬಂತು. ತಕ್ಷಣ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಲಾಯಿತು. ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ರೋಹಿತ್ ಮೈದೂರ್ ಅವರು ಎಕ್ಸ್ ರೇ ಮೂಲಕ ಪಿನ್ನ ಸ್ಥಳವನ್ನು ಪತ್ತೆ ಹಚ್ಚಿ, ಎಂಡೋಸ್ಕೋಪಿ ಮೂಲಕ ಅದನ್ನು ಸುರಕ್ಷಿತವಾಗಿ ತೆಗೆದುಹಾಕಿದರು.

ತ್ವರಿತ ನಿರ್ಧಾರ, ಸಮಯೋಚಿತ ಚಿಕಿತ್ಸೆ ಮತ್ತು ವೈದ್ಯರ ನಿಪುಣತೆ ಈ ಎಲ್ಲವೂ ಸೇರಿ ಒಂದು ಅಮೂಲ್ಯ ಜೀವವನ್ನು ರಕ್ಷಿಸಲು ಇದರಿಂದ ಸಾದ್ಯವಾಯಿತು. ಮಕ್ಕಳ ತಜ್ಞ ಡಾ. ಅನುರಾಗ್ ಮಹಾಗಾಂವ್ಕರ್ ಅವರ ಪರಿಪೂರ್ಣ ಆರೈಕೆ ಫಲವಾಗಿ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಅನಸ್ಥೇಷಿಯ ತಜ್ಞೆ ಡಾ. ಮೋನಿಕಾ ಗುಪ್ತಾ, ಚಿಕಿತ್ಸೆಯು ಸುರಕ್ಷಿತವಾಗಿ ನೆರವೇರಿಸಲು ಪ್ರಮುಖ ಪಾತ್ರವಹಿಸಿದರು. ಇದೇವೇಳೆ ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡಿದ ಡಾ. ರೋಹಿತ್ ಮೈದೂರ್ ಮತ್ತು ಡಾ. ಅನುರಾಗ್ ಮಹಾಗಾಂವ್ಕರ್ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಮಗು ಏನಾದರೂ ವಸ್ತು ನುಂಗಿದರೆ ವಾಂತಿಯಾಗುವವರೆಗೆ ಕಾಯಬಾರದು. ಬಾಳೆಹಣ್ಣು ಕೊಟ್ಟು ಮಲವಿಸರ್ಜನೆ ಆಗಲು ಕಾಯಬಾರದು. ಯಾವುದೇ ವಿಳಂಬವಿಲ್ಲದೇ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ಮಕ್ಕಳ ಆರೋಗ್ಯ ವಿಷಯದಲ್ಲಿ ಎಚ್ಚರತೆ ಅತ್ಯಗತ್ಯ. ಯಾವುದೇ ಅನುಮಾನಾಸ್ಪದ ವಸ್ತುಗಳನ್ನು ಮಗು ನುಂಗಿದರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಎಂದು ಅವರು ಎಚ್ಚರಿಸುತ್ತಾರೆ. ತಮ್ಮ ಮಗುವಿನ ಪ್ರಾಣ ಉಳಿಸಿದ ವೈದ್ಯರಿಗೆ ಪುಟ್ಟಪರ್ತಿಯ ಕುಟುಂಬದವರು ಕೃತಜ್ಞತೆ ಸಲ್ಲಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಸಂದರ್ಭಗಳು ನಮ್ಮ ನಿಮ್ಮ ಕುಟುಂಬ ಅಥವಾ ನೆರೆಹೊರೆಯಲ್ಲಿ ಕಂಡು ಬರಬಹುದಾದ್ದರಿಂದ ಮಕ್ಕಳ ಕುರಿತು ಎಲ್ಲರಿಗೂ ಜಾಗೃತಿ ಅಗತ್ಯವೆಂದು ಮೆಡಿಕೋವರ್ ಆಸ್ಪತ್ರೆಯ ವೈದ್ಯರು ಮಾನವೀಯ ನೆಲೆಗಟ್ಟಿನಲ್ಲಿ ತಿಳಿಸಿದ್ದಾರೆ.