LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವೀನ ಚಿಂತನೆಯಿಂದ ಉತ್ತಮ ಸಾಧನೆ

 ತುಮಕೂರು: ವಿದ್ಯಾರ್ಥಿಗಳು ಜೀವನದಲ್ಲಿ ಪ್ರತಿನಿತ್ಯ ಹೊಸ ಹೊಸ ರೀತಿಯಲ್ಲಿ ಯೋಚನೆ ಮಾಡುವುದರಿಂದ ಉನ್ನತ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಎಂಕಾಂ (ಮಾಹಿತಿ ವ್ಯವಸ್ಥೆ) ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ‘ಐಸಿರಿ-2025’ ರಾಜ್ಯಮಟ್ಟದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. 21ನೇ ಶತಮಾನದ ವಿದ್ಯಾರ್ಥಿಗಳಾದ ನೀವು ವಿಭಿನ್ನ ರೀತಿಯ ಸಂಶೋಧನೆಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಉತ್ತಮ ರೀತಿಯ ಕೊಡುಗೆಗಳನ್ನು ನೀಡಬೇಕು ಎಂದರು.

ಸಣ್ಣ ಆಲೋಚನೆಗಳು ಕೂಡ ನಿಮಗೆ ಉನ್ನತ ಮಟ್ಟದ ಸಾಧನೆ ಮಾಡಲು ಸಹಕಾರಿಯಾಗುತ್ತವೆ. ಪ್ರತಿನಿತ್ಯ ಎದುರಾಗುವ ಸವಾಲುಗಳನ್ನು ಎದುರಿಸಿ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಬೇಕು. ನಿಮ್ಮ ಕಲಿಕೆಯ ಸಮಯದಲ್ಲಿಯೇ ಷೇರು ಮಾರುಕಟ್ಟೆಯಲ್ಲಿ ನಾವೀನ್ಯ ರೀತಿಯಲ್ಲಿ ಅಧ್ಯಯನ ನಡೆಸಿದರೆ ಮುಂದೆ ಉನ್ನತ ಜೀವನ ನಿಮ್ಮದಾಗುತ್ತದೆ ಎಂದರು.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಮಾತನಾಡಿ, ಜೀವನದಲ್ಲಿ ಸಾಧನೆ, ಸಂತೋಷ ಮತ್ತು ಸಾರ್ಥಕತೆ ಎಂಬ ಮೂರು ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಅಧ್ಯಯನದಿಂದ ಬರುವ ಜ್ಞಾನ ಬರೀ ಕೆಲಸಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಉತ್ತಮ ಜ್ಞಾನ ಅನುಭವದಿಂದ ದೊರೆಯುತ್ತದೆ ಎಂದರು.



ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಇಟ್ಟುಕೊಂಡು ಸಾಧನೆ ಕಡೆಗೆ ಅಧ್ಯಯನ ನಡೆಸಬೇಕು. ಸಮಯ, ಪರೀಕ್ಷೆ ನೋಡಿಕೊಂಡು ಓದುವುದರಿಂದ ಜೀವನದಲ್ಲಿ ಯಶಸ್ಸು ದೊರೆಯುವುದಿಲ್ಲ. ಪ್ರತಿನಿತ್ಯ ಹೊಸ ಕಲಿಕೆಯ ಜೊತೆ ಉತ್ತಮ ಕೆಲಸವನ್ನು ಮಾಡುವುದರಿಂದ ಯಶಸ್ಸು ದೊರೆಯುತ್ತದೆ ಎಂದರು.

ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಮಾರ್ಕೆಟಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಪಿ. ಪರಮಶಿವಯ್ಯ, ಪ್ರೊ. ಬಿ. ಶೇಖರ್, ಪ್ರೊ. ಜಿ. ಸುದರ್ಶನರೆಡ್ಡಿ, ಎಂಕಾಂ (ಮಾಹಿತಿ ವ್ಯವಸ್ಥೆ) ಸಂಯೋಜಕ ಡಾ. ಬಿ. ಕೆ ಸುರೇಶ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳು ನಡೆದವು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST