ಬೆಂಗಳೂರು : ದೇಶ 16 ಸಾವಿರಕ್ಕೂ ಹೆಚ್ಚು ನವೋದ್ಯಮ ಸಂಸ್ಥೆಗಳ ಸಮೃದ್ಧ ಪರಿಸರ ಹೊಂದಿದ್ದು, ರಾಷ್ಟ್ರದ ಆರ್ಥಿಕತೆಯ ಶೇ 70 ರಷ್ಟು ಪಾಲು ಹೊಂದಿರುವ ಸೇವಾ ಕ್ಷೇತ್ರದಲ್ಲಿ ಅವಕಾಶಗಳನ್ನು ಅಬಳಸಿಕೊಳ್ಳಬೇಕು ಎಂದು ಹಿಂದೂಸ್ತಾನ್ ಟೆಕ್ನಾಲಜಿ ಗ್ರೂಪ್ನ ಬೆಂಗಳೂರಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮನೋಜ್ ಕುಮಾರ್ ಕರೆ ನೀಡಿದ್ದಾರೆ.

ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ, ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (ಸರ್.ಎಂ.ವಿ.ಟಿ)ಯಲ್ಲಿ ಆರಂಭ - 2025, ಫ್ರೆಶರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಶ್ರೀಮಂತಿಕೆಯನ್ನು ಅರಿತು ಅದನ್ನು ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ತಮ್ಮ ಕೊಡುಗೆ ನೀಡಬೇಕು. ಅಂಕಗಳಿಗೆ ಮೀರಿದ ಜ್ಞಾನ, ನಾವೀನತೆ ಮತ್ತು ಸಂಶೋಧನೆ, ಕೌಶಲ್ಯಾಭಿವೃದ್ಧಿ ಮತ್ತು ಸಮಾಜಮುಖಿ ತಾಂತ್ರಿಕ ಪರಿಹಾರಗಳ ಮಹತ್ವವನ್ನು ಅರಿತು ಮುನ್ನಡೆಯಬೇಕು. ವಿದ್ಯಾರ್ಥಿಗಳು ಚುರುಕಾಗಿರಬೇಕು, ಸಮಾಜಮುಖಿಯಾಗಿರಬೇಕು ಮತ್ತು ಭವಿಷ್ಯಕ್ಕೆ ಸಿದ್ಧರಾಗಿರಬೇಕು ಎಂದರು.
ಶಿಕ್ಷಣ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷರಾದ ಶ್ರೀ ವಿ. ಶ್ರೀನಿವಾಸರಾಜು ಮಾತನಾಡಿ. ಯುವ ಸಮೂಹ ರಾಷ್ಟ್ರದ ಭವಿಷ್ಯ ರೂಪಿಸುವ ಅಪೂರ್ವ ಅವಕಾಶವನ್ನು ಪಡೆದಿದೆ. ಎಂವಿಐಟಿ ವಿಜ್ಞಾನ, ಆರೋಗ್ಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳನ್ನು ಒಂದೇ ಗೂಡಿನಲ್ಲಿ ಒಟ್ಟುಗೂಡಿಸುತ್ತದೆ.
ವಿದ್ಯಾರ್ಥಿಗಳ ಕನಸುಗಳು ಮತ್ತು ದೃಢ ಸಂಕಲ್ಪವೇ ಬಲಿಷ್ಠ ರಾಷ್ಟ್ರದ ದೃಷ್ಟಿಯನ್ನು ಸಾಕಾರಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಮತ್ತು ಅಕಾಡೆಮಿಕ್ ಸಮಿತಿ ಅಧ್ಯಕ್ಷರಾಧಾ ಶ್ರೀ ಕೆ.ವಿ. ಶೇಖರ್ ರಾಜು ರವರು ಮಾತನಾಡಿ, ಫ್ರೆಶರ್ಸ್ ಡೇ ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಹಂತದ ಆರಂಭವಾಗಿದೆ. ವಿದ್ಯಾರ್ಥಿಗಳು ಹೊಸ ರೀತಿಯ ಅಧ್ಯಯನವನ್ನು ಸ್ವೀಕರಿಸಬೇಕು. ಹೆಚ್ಚಿನ ಗುರಿಗಳನ್ನು ಹೊಂದಬೇಕು ಮತ್ತು ತಮ್ಮದೇ ಯಶಸ್ಸಿನ ಮಾರ್ಗಸೂಚಿಯನ್ನು ರೂಪಿಸಬೇಕು. ನಕಾರಾತ್ಮಕತೆ, ಭಯ ಮತ್ತು ಸುಳ್ಳು ಹೇಳುವುದನ್ನು ಬಿಟ್ಟು ವ್ಯಕ್ತಿತ್ವ ವಿಕಾಸ ಮತ್ತು ಆತ್ಮಶೋಧನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನಲ್ಲಿ ಶ್ರೇಯಾಂಕಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಇದೇ ರೀತಿಯಾಗಿ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಧ್ಯಾಪಕರಿಗೆ ಸಂಶೋಧನಾ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಡಾ. ಮನೋಜ್ ಕುಮಾರ್ ಹಾಗೂ ವಿಶೇಷ ಆಹ್ವಾನಿತರಾದ ಕುಮಾರಿ ನವ್ಯಾ ರಾಜು ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಸಂಸ್ಥೆಯ ಸ್ಥಾಪಕ ಟ್ರಸ್ಟಿಗಳಾದ ಶ್ರೀ ಕೆ ನಾರಾಯಣರಾಜು ಹಾಗೂ ಶ್ರೀ ಕೆ.ಸಿ. ಚಂದ್ರಶೇಖರ ರಾಜು, ಪ್ರಾಂಶುಪಾಲರಾದ ಪ್ರೊ. ರಾಕೇಶ್ ಎಸ್.ಜಿ., ಉಪಪ್ರಾಂಶುಪಾಲರಾದ ಡಾ. ಭಾರತಿ ಗಣೇಶ್, ವಿಶೇಷ ಆಹ್ವಾನಿತರಾದ ಕುಮಾರಿ ನವ್ಯಾ ರಾಜು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.`