ಬಳ್ಳಾರಿ : ನಗರದಲ್ಲಿ ರಾಜಕೀಯ ಪ್ರತಿನಿಧಿಗಳ ಬೆಂಬಲಿಗರ ನಡುವೆ ಹಣಕಾಸು ವಿಚಾರದಲ್ಲಿ ಪ್ರತಿಷ್ಟೆಯ ಮುಸುಕಿನ ಗುದ್ದಾಟ ನಡೆದಿದೆ ಎಂದು ವರದಿಯಾಗಿದೆ.
ಮಾಜಿ ಸಚಿವ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಯವರ ನಡುವೆ ಮೊನ್ನೆಯಷ್ಟೇ ಸದನದಲ್ಲಿ ವಾಗ್ವಾದ ನಡೆದಿತ್ತು. ಇತ್ತ ಬಳ್ಳಾರಿ ನಗರದಲ್ಲಿ ಇವರಿಬ್ವರ ಬೆಂಬಲಿಗರ ನಡುವೆ ಗುದ್ದಾಟ ನಡೆದಿದೆ.
ನಾಗೇಂದ್ರ ಅವರ ಬೆಂಬಲಿಗ ಹಾಗೂ ಮಹಾನಗರ ಪಾಲಿಕೆ ಸದಸ್ಯ ಆಸಿಫ್ ಮತ್ತು ಜನಾರ್ದನ ರೆಡ್ಡಿ ಅವರ ಆಪ್ತ ಅಲಿ ಖಾನ್ ಮಧ್ಯೆ ಕಳೆದ ಮೂರು ನಾಲ್ಕು ತಿಂಗಳಿಂದ ನಡೆಯುತ್ತಿರೋ ಮುಸುಕಿನ ಗುದ್ದಾಟ ಈಗ ಬಯಲಿಗೆ ಬಿದ್ದಿದೆ ಎನ್ನಲಾಗುತ್ತಿದೆ.
ಅಲಿಖಾನ್ ಕಳೆದ ಶುಕ್ರವಾರ ರೈಸ್ ಆಫ್ ಹೂಮ್ಯಾನಿಟಿ ಟ್ರಸ್ಟ್ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ದಾಂಧಲೆ ಮಾಡಿದ್ದಾರಂತೆ. ಹೀಗೆಂದು ಆಸಿಫ್ ಅವರು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಇಂದು ಅವರನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈಸ್ ಆಫ್ ಹೂಮ್ಯಾನಿಟಿ ಎನ್ನುವ ಟ್ರಸ್ಟ್ ಗೆ ಸಂಸ್ಥೆಯವರು ಅಸೀಫ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದನ್ನು ಸಹಿಸದ ಅಲಿಖಾನ್ ವಿವಿಧ ಸಾಮಾಜಿಕ ಜಾಲತಾಣದ ಗ್ರೂಪ್ ಗಳಲ್ಲಿ ಅವಹೇಳನ ಬರಹಗಳ ಮೂಲಕ ಅವಮಾನ ಮಾಡಿದ್ದಾರೆಂದು, ಅಲ್ಲದೆ ತಾವು ಇಲ್ಲದಾಗ ಕಚೇರಿಗೆ ಬಂದು ಅವಹೇಳನಕಾರಿಯಾಗಿ ಮಾತನಾಡಿ, ಜೀವ ಬೆದರಿಕೆ ಹಾಕಿದ್ದಾರೆಂದು, ಅಲಿಖಾನ್ ವಿರುದ್ಧ ಕೌಲಬಜಾರ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ನಾನು ಆತನಿಗೆ ಯಾವ ಸಾಲ ಇಲ್ಲ. ಇದ್ದರೆ ದಾಖಲೆ ಕೊಡಲಿ ಎಂದಿದ್ದಾರೆ.
ಇನ್ನೂ ಹಣ ಕೇಳಲು ಬಂದ ತಮ್ಮ ಬೆಂಬಲಿಗನಿಗೆ ಹಲ್ಲೆ ಮಾಡಿದ್ದಾರೆಂದು ಅಲಿಖಾನ್ ದೂರು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಆಸೀಫ್ ಗೆ ಹಣ ಕೊಟ್ಟಿರೋ ದಾಖಲಾತಿ ಮತ್ತು ಚೆಕ್ ಪ್ರದರ್ಶನ ಮಾಡಿದ ಅಲಿಖಾನ್ ಕಳೆದ ಪಾಲಿಕೆ ಚುನಾವಣೆ ವೇಳೆ 2 ಕೋಟಿ ರೂಗಳನ್ನು ನೀಡಿದ್ದಾಗಿ, ಅದರಲ್ಲಿ ಕೊಂಚ ಹಣವನ್ನು ಹಂತ ಹಂತವಾಗಿ ವಾಪಸ್ ಕೊಟ್ಟಿದ್ದು , ಇನ್ನೂ 70 ಲಕ್ಷ ಹಣ ಕೊಡಬೇಕಿದೆ. ಹಣ ಕೊಡುವುದಾಗಿ ಹೇಳಿದಾಗ ಆಸೀಫ್ ಕಚೇರಿಗೆ ಹುಡುಗನನ್ನು ಕಳುಹಿಸಿದ್ದೇವೆ. ಹಣ ಕೊಡದೆ ನಮ್ಮ ಹುಡುಗನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಆಸೀಫ್ ನೀಡಿದ ಚೆಕ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಹೋಗಿದ್ದಾಗ ಗಲಾಟೆ ಮಾಡಿದ್ದೇವೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆಸೀಫ್ ಕಚೇರಿ ಸಿಸಿ ಟಿವಿ ಪರಿಶೀಲಿಸಿ ನಾವು ಯಾವುದೇ ಹಲ್ಲೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷದ ಹಿಂದೆ ಮೇಯರ್ ಚುನಾವಣೆ ವೇಳೆ 2 ಕೋಟಿ ಸಾಲ ಕೊಟ್ಟಿದ್ದೆ. ಕಮ್ಯೂನಿಟಿಯಲ್ಲಿ ಒಬ್ರು ಮೇಯರ್ ಆಗ್ತರೆ ಎಂದು ಹಣ ಕೊಟ್ಟಿದ್ದೆ, ಮೇಯರ್ ಆದ್ರೇ ಹಣ ಮಾಫೀ ( ಕೊಡೋದು ಬೇಡ) ಎಂದು ಹೇಳಿದ್ದೆ. ಮೇಯರ್ ಅಗಲಿಲ್ಲ ಹಣ ವಾಪಸ್ಸು ಕೊಡಲಿಲ್ಲ. ನಂತರ ಹಂತ ಹಂತವಾಗಿ ಒಂದು ಕೋಟಿ ಕೊಟ್ಟಿದ್ರು. ನಂತರ ಸೆಟಲ್ಮೆಂಟ್ ಮಾಡಿ 1.10 ಕೋಟಿ ಬಾಂಡ್ ಬರೆಸಿ ಚೆಕ್ ಕೊಟ್ಟಿದ್ರು. ಈವರೆಗೂ 40 ಲಕ್ಷ ಕೊಟ್ಟಿದ್ದಾನೆ. ಉಳಿದ 70 ಲಕ್ಷ ಹಣ ಇನ್ನೂ ಕೊಟ್ಟಿಲ್ಲ. ಅ ಹಣ ಕೇಳ್ತಿರೋದಕ್ಕೆ ಇಷ್ಟೇಲ್ಲ ಸುಳ್ಳಿನ ಕತೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಣದ ವಿಚಾರಕ್ಕೆ ನಡೆದ ಗಲಾಟೆ ಇದೀಗ ವೈಯಕ್ತಿಕ ನಿಂದನೆವರೆಗೂ ಹೋಗಿದೆ ಎಂದು ತಿಳಿದು ಬಂದಿದೆ,
ಕಳೆದ ಒಂದು ತಿಂಗಳ ಹಿಂದೆ ಅಂದರೆ ಜನವರಿ 1ರಂದೇ ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಯುವಕನ ಪ್ರಾಣಪಕ್ಷಿ ಹಾರಿಹೋಯಿತು. ಈ ಬಗ್ಗೆ ಸದನದಲ್ಲೂ ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ಸಮರಗಳೂ ನಡೆದವು. ಇದೇ ವಿಚಾರವಾಗಿ ಮೂವರು ಪೊಲೀಸ ಅಧಿಕಾರಿಗಳ ತಲೆದಂಡವೂ ಆಯಿತು. ಇದೀಗ ಜನಪ್ರತಿನಿಧಿಗಳ ಆಪ್ತರೆನಿಸಿಕೊಂಡವರ ನಡುವಿನ ಹಣಕಾಸಿನ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇದು ಎಲ್ಲಿಯವರೆಗೆ ಹೋಗುತ್ತದೆ ಎಂಬುದಾಗಿ ಬುದ್ದಿ ಜೀವಿಗಳು ಮಾತನಾಡಿಕೊಳ್ಳುತ್ತಿದ್ದಾರೆ.