ನಾಲೆಯ 5ನೇ ವಿತರಣಾ ಕಾಲುವೆಯಿಂದ ಕೋಳೂರಮ್ಮ ದೇವಿಯ ದೇವಾಲಯ ಹಿಂಭಾಗ ಮತ್ತು ಅಗಳಕೇರಿ ಹಳ್ಳದವರೆಗೆ ಹಾದು ಹೋಗಿರುವ ಉಪ ಕಾಲುವೆ ನೀರು ಪಕ್ಕದ ರೈತರ ಜಮೀನಿನಲ್ಲಿ ಊಟಿಯ ಸ್ವರೂಪದಲ್ಲಿ ಗೋಚರಿಸಿದೆ. ಸುಮಾರು ಅರ್ಧ ಕಿ.ಮೀ. ಉದ್ದದ ಉಪ ಕಾಲುವೆಯ ತುಂಬ ತ್ಯಾಜ್ಯದ ಗಿಡಗಳು ಬೆಳೆದು ನಿಂತಿವೆ. ಸಾಲದ್ದಕ್ಕೆ ಈ ಉಪ ಕಾಲುವೆಗೆ ವ್ಯರ್ಥವಾದ ಹಾಸಿಗೆ, ಬಟ್ಟೆಗಳನ್ನು ಬಿಸಾಡುವುದರಿಂದ ನೀರು ಜಮೆಗೊಂಡು ಮುಂದಕ್ಕೆ ಹರಿಯದಂತಾಗಿದೆ.


ಇದರಿಂದ ಕಾಲುವೆಯ ಕೆಳಭಾಗದ ರೈತರ ಜಮೀನಿನಲ್ಲಿ ನೀರು ಊಟಿ ಉಲ್ಬಣಿಸಿ, ವರ್ಷಪೂರ್ತಿ ನೀರು ಗದ್ದೆಯಲ್ಲಿ ಸಂಗ್ರಹಗೊಳ್ಳುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭತ್ತ ನಾಟಿ ಮಾಡುವ ರೈತರ ಕೃಷಿ ಚಟುವಟಿಕೆಗಳಿಗೆ ಸಮಸ್ಯೆ ಉಲ್ಬಣಿಸಿದೆ. ತುಂಗಭದ್ರಾ ಜಲ ಮಂಡಳಿ ಅಧಿಕಾರಿಗಳು ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಸಿಮೆಂಟ್ ಕಾಂಕ್ರೀಟ್ ಕಾಲುವೆ ನಿರ್ಮಿಸಿ ರೈತರಿಗೆ ನೆರವಾಗಬೇಕು. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆ ಹಿಡಿಯಬೇಕೆಂದು ಕೋಳೂರಮ್ಮ ಗುಡಿ ವ್ಯಾಪ್ತಿಯ ರೈತರು `ಕಾಡಾ' ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.