ಸಿರುಗುಪ್ಪ : ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲು ಉದ್ದೇಶಿಸಿರುವ ಮತ್ತೊಂದು ಸುತ್ತಿನ ಸಾಮಾಜಿಕ-ಶೈಕ್ಷಣಿಕ (ಜಾತಿಗಣತಿ) ಗಣತಿ ಕಾರ್ಯವು ಸೆ.22 ರಿಂದ ಅ.7ರವರೆಗೆ ನಡೆಯಲಿದ್ದು, ಸುಮಾರು 60 ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಗಣತಿಕಾರರು ಮನೆಗಳಿಗೆ ಬಂದಾಗ ವಿಪ್ರ ಬಾಂಧವರು ಬ್ರಾಹ್ಮಣ ಎಂದು ಬರೆಸುವಂತೆ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಗಣತಿ ನಡೆಸುವವರು ಸಮೀಕ್ಷೆಗಾಗಿ ನಿಮ್ಮ ಮನೆ ಬಾಗಿಲಿಗೆ ಬಂದಾಗ, ಎರೆಲ್ಲರೂ ಹೆಮ್ಮೆಯಿಂದ ತಮ್ಮ ಉಪಪಂಗಡಗಳನ್ನು ಬರೆಸುವುದನ್ನು ಬಿಟ್ಟು, ಬ್ರಾಹ್ಮಣ (ಭಾರತೀಯ ಹಿಂದೂ ಬ್ರಾಹ್ಮಣ) ಎಂದು ಬರೆಸಬೇಕು ಎಂದು ಅವರು ಕೋರಿದ್ದಾರೆ.
ಈ ಹಿಂದೆ ನಡೆದ ಗಣತಿಯಲ್ಲಿ ನಮ್ಮ ಜನಾಂಗದ ಸಂಖ್ಯೆ ಕಡಿಮೆಯಾಗಲು ಉಪ ಪಂಗಡಗಳನ್ನು ಬರೆಸಿದ್ದೇ ಪ್ರಮುಖ ಕಾರಣ ಎನ್ನುವುದನ್ನು ವಿಪ್ರ ಬಾಂಧವರು ಮರೆಯಬಾರದು. ಕಾಂತರಾಜ್ ವರದಿಯಲ್ಲಿ ನಮ್ಮ ಜನಾಂಗದ ಸಂಖ್ಯೆ 14 ಲಕ್ಷ ಎಂದು ತೋರಿಸಿರುತ್ತಾರೆ. ಇದರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ನಮ್ಮ ಜನಾಂಗಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ವಿಪ್ರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬ ವಿಪ್ರರು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಬ್ರಾಹ್ಮಣರು ಜಾತಿಗಣತಿ ವೇಳೆ ಯಾವುದೇ ಕಾರಣಕ್ಕೂ ಉಪ ಪಂಗಡಗಳನ್ನು ನಮೂದಿಸದೇ, ಭಾರತೀಯ ಹಿಂದೂ ಬ್ರಾಹಣ ಎಂದು ನಮೂದಿಸಬೇಕು ಎಂದು ಡಾ| ಜೆ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.