ಬೆಂಗಳೂರು: ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್, ಭಾರತ ಸಾರಥಿ ಪತ್ರಿಕೆಯಿಂದ ಬನ್ನೇರುಘಟ್ಟದ ಹುಳಿಮಾವು ಬಳಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಆಟೋ ಚಾಲಕರ ಸಂಘ, ಅಖಿಲ ಭಾರತ ಚಾಲಕರ ಒಕ್ಕೂಟ ಮತ್ತಿತರೆ ಚಾಲಕ ಸಂಘಟನೆಗಳ ಮುಖಂಡರು ಧ್ವಜಾರೋಹಣ ನೆರವೇರಿಸಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಸಂಕಷ್ಟದಲ್ಲಿರುವ ಚಾಲಕರಿಗೆ ದಿನಸಿ ವಿತರಿಸಿದರು.
ಪತ್ರಕರ್ತ, ನಿರೂಪಕ ನಂಜುಂಡಪ್ಪ.ವಿ. ಮಾತನಾಡಿ, ಕನ್ನಡ ಭಾಷೆ ಉಳಿಯಲು ಚಾಲಕರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬ ಚಾಲಕ ನೂರಾರು ಕನ್ನಡಿಗರನ್ನು ಪ್ರತಿನಿಧಿಸುತ್ತಾನೆ. ಚಾಲಕರು ಶ್ರಮ ಜೀವಿಗಳು, ಕಷ್ಟಪಟ್ಟು ತಮ್ಮ ಮಕ್ಕಳನ್ನು ಓದಿಸಿ ಐಎಎಸ್, ಕೆ.ಎಸ್.ಎಸ್ ಅಧಿಕಾರಿಗಳನ್ನು ಮಾಡಿರುವ, ಡಾಕ್ಟರ್, ಇಂಜಿನಿಯರ್ ಗಳನ್ನು ಸೃಷ್ಟಿಸಿರುವ ನಿದರ್ಶನಗಳಿವೆ. ಚಾಲಕರು ದೇಶದ ಅಭಿವೃದ್ಧಿಯ ಎಂಜಿನ್ ಇದ್ದಂತೆ. ತಾಯಿ ಭುವನೇಶ್ವರಿಯ ಥೇರು ಎಳೆಯುವ ನಿಜವಾದ ಸಾರಥಿಗಳು ಚಾಲಕರು ಎಂದರು.

ಹಿರಿಯ ಪತ್ರಕರ್ತ ಚಂದ್ರಶೇಖರ್, ಮಾತನಾಡಿ, ಚಾಲಕ ಸಂಘಟನೆಗಳಲ್ಲಿ ಒಗ್ಗಟ್ಟು ಇರುವುದು ನಿಜಕ್ಕೂ ಉತ್ತಮ ಬೆಳವಣಿ. ನಿಮ್ಮ ನೈಜ ಸಮಸ್ಯೆಗಳನ್ನು ವರದಿ ಮಾಡಿ ನಿಮ್ಮ ಶ್ರೇ ಯೋಭಿವೃದ್ಧಿಗೆ ನಾವು ನಿರಂತರವಾಗಿ ಶ್ರಗಮಿಸುತ್ತೇವೆ. ನಿಮ್ಮ ಹೋರಾಟಕ್ಕೆ ಮಾಧ್ಯಮ ಸದಾ ಬೆಂಬಲ ನೀಡುತ್ತದೆ ಎಂದರು.
ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಬೃಹತ್ ಆಟೋ ರಾಲಿಗೆ ಸಂಘದ ಗೌರವಾಧ್ಯಕ್ಷ, ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಚಾಲನೆ ನೀಡಿದರು.
ಸ್ನೇಹ ಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ, ಸಂಘಟನೆಯ ಪದಾಧಿಕಾರಿಗಳು, ಹಿರಿಯ ಪತ್ರಕರ್ತ ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.