ಸಂಡೂರು: "ಟ್ರಸ್ಟ್ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ವಿವೇಕಾನಂದರ ಮೇಲೆ ಸಿಪಿಐ ಮಹೇಶ್ ಗೌಡ ಹಲ್ಲೆ ಮಾಡಿದ್ದಲ್ಲದೆ ನೀವು ಈ ಬಗ್ಗೆ ದೂರು ಕೊಟ್ಟರೆ ಗಾಂಜಾ ಸಾಗಣೆ ಸೇರಿ ನಾನಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಡಿವೈಎಸ್ಪಿ, ಎಸ್ಪಿ ಸೇರಿದಂತೆ ಯಾರೊಬ್ಬರೂ ಈ ದೂರನ್ನು ವಿಚಾರಣೆ ಮಾಡಿ ನ್ಯಾಯ ಒದಗಿಸಲಿಲ್ಲ. ಗೃಹ ಸಚಿವ ಪರಮೇಶ್ವರ್ ಅವರ ದೂರಿನ ಆದೇಶ ಪತ್ರಕ್ಕೂ ಕವಡೆ ಕಾಸಿನ ಕಿಮ್ಮತ್ತನ್ನು ಪೊಲೀಸ್ ಅಧಿಕಾರಿಗಳು ನೀಡಿಲ್ಲ, ಈ ಹಿನ್ನೆಲೆಯಲ್ಲಿ ವಿವೇಕಾನಂದರವರು ಧಾರವಾಡ ಹೈಕೋರ್ಟ್ ಮೂಲಕ ಆದೇಶ ಪಡೆದಿರುವುದು ಪೊಲೀಸ್ ದೌರ್ಜನ್ಯದ
ವಿರುದ್ಧದ ಗೆಲುವಾಗಿದೆ ಜೊತೆಗೆ ಅಮಾಯಕ ವ್ಯಕ್ತಿಯ ಹಲ್ಲೆಗೆ ಕಾರಣನಾದ ಸಿಪಿಐ ಮಹೇಶ್ ಗೌಡ ಅವರಿಗೆ ಕಾನೂನು ಶಿಕ್ಷೆ ಯಾಗಲಿದೆ ಎಂದು ರಾಜ್ಯ ಬಿಜೆಪಿ ಎಸ್ಪಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ತಿಳಿಸಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಿಪಿಐ ಮಹೇಶ್ ಗೌಡ ಅವರು ಕಾಂಗ್ರೆಸ್ ಏಜೆಂಟನಂತೆ ವರ್ತಿಸುತ್ತಿದ್ದಾರೆ 14 ವರ್ಷದಿಂದ ಸಂಡೂರು ಕ್ಷೇತ್ರದಲ್ಲಿ ಟಿಕಾಣಿ ಹೂಡಿರುವ ಸಿಪಿಐ ಅವರು ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಮ್, ಶಾಸಕಿ ಅನ್ನಪೂರ್ಣ ತುಕಾರಾಮ್ ರವರ ಅಣತಿಯಂತೆ ನಡೆಯುತ್ತಿದ್ದಾರೆ.
ಬಿಜೆಪಿ ಕಾರ್ಯ ಕರ್ತರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುವುದು, ಭೂಮಿ ಹೊಂದಿದ ರೈತರನ್ನು ಬೆದರಿಸಿ ಕಾರ್ಖಾನೆಗಳಿಗೆ ಕೊಡಿ ಎಂದು ತಾಕೀತು ಮಾಡುವುದು, ರಾತ್ರೋ ರಾತ್ರಿ ಅಕ್ರಮ ಅದಿರು ಸಾಗಣೆ ಲಾರಿಗಳಿಗೆ ದಾರಿ ಮಾಡಿಕೊಡುವುದು ಸೇರಿದಂತೆ ನಾನಾ ಕೃತ್ಯಗಳನ್ನು ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ ಕೃಪಾಪೋಷಿತರ ಬೇನಾಮಿ ಆಸ್ತಿಗಳು ಮಹೇಶ್ ಗೌಡ ಸಂಬಂಧಿಗಳ ಹೆಸರಲ್ಲಿವೆ. ಈ ಬಗ್ಗೆ ಸಧ್ಯದಲ್ಲಿ ದಾಖಲಾತಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ವಸಂತಕುಮಾರ್ ಮಾತನಾಡಿ, ''ನಮ್ಮ ಪತ್ನಿ ಪುರಸಭೆ ಮಾಜಿ ಅಧ್ಯಕ್ಷೆ ಅನಿತಾರವರ ಸದಸ್ಯತ್ವ ಕೊನೆಗೊಳ್ಳುವ 3 ದಿನ ಮೊದಲು ಡಿಸಿಯವರ ಮೇಲೆ ಒತ್ತಡ ಹಾಕಿ ಸದಸ್ಯತ್ವ ರದ್ದು ಮಾಡಿಸಿದ ಸಂಸದ ಈ.ತುಕಾರಾಮ್ ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಹುಡೇದ ಸುರೇಶ, ಕಚೇರಿ ಕಾರ್ಯದರ್ಶಿಗಳಾದ ರಮೇಶ, ನರಸಿಂಹ, ಮುಖಂಡರಾದ ರಾಮಾಂಜನಿ, ತಾಯಪ್ಪ, ಅಡಿವೆಪ್ಪ, ಓಬಳೇಶ, ಪ್ರವೀಣ. ಶರಣಯ್ಯ, ಪುರುಷೋತ್ತಮ, ರವಿಕುಮಾರ್, ಅಂಜೀನಪ್ಪ ವಾಮದೇವ, ವಿಜಯಕುಮಾರ್, ಪ್ರಭುಗೌಡ, ತಾಯಪ್ಪ ಇತರರಿದ್ದರು.