LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ ಸಂಭ್ರಮದ ಭಗವಾನ್ ಮಹಾವೀರ ಜಯಂತ್ಯೋತ್ಸವ

ಭಗವಾನ್ ಮಹಾವೀರರ ತತ್ತ್ವಗಳು ಸಮಾಜಕ್ಕೆ ದಾರಿದೀಪ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

ಬಳ್ಳಾರಿ : ಭಗವಾನ್ ಮಹಾವೀರರ ತತ್ತ್ವಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ತೇರು ಬೀದಿಯ ಶ್ರೀ ಪಾರ್ಶ್ವನಾಥ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.



ಮಹಾವೀರರು ಪಂಚ ತತ್ತ್ವಗಳನ್ನು ಬೋಧಿಸಿದವರು. ಅಹಿಂಸೆಯ ಮೂಲಕ ಪ್ರತಿಯೊಂದು ಜೀವಿಯಲ್ಲೂ ಆತ್ಮವಿದ್ದು, ಯಾವುದೇ ಪ್ರಾಣಿ ಅಥವಾ ಮನುಷ್ಯನಿಗೆ ಹಿಂಸೆ ನೀಡಬಾರದು.

ಸತ್ಯದ ಮೂಲಕ ಸುಳ್ಳಿನ ಪ್ರಪಂಚದಲ್ಲಿ ಕನಿಷ್ಠ ಪಕ್ಷ ಸತ್ಯವನ್ನಾದರೂ ಮಾತನಾಡಬೇಕು. ಅಸ್ತೇಯ ಎಂದರೆ ನಮಗೆ ಸೇರದ ಯಾವುದೇ ವಸ್ತುವನ್ನು ಅಥವಾ ಆಸ್ತಿಯನ್ನು ಮುಟ್ಟಬಾರದು. ಬ್ರಹ್ಮಚರ್ಯ ಮೂಲಕ ಶಿಸ್ತಿನ ಜೀವನ ನಡೆಸುವುದು ಮತ್ತು ಸಂಯಮವನ್ನು ಪಾಲಿಸುವುದು. ಅಪರಿಗ್ರಹದಿಂದ ಭೌತಿಕ ಆಸೆಗಳನ್ನು ತ್ಯಜಿಸುವುದು ಎಂದು ತಮ್ಮ ಪಂಚ ತತ್ವಗಳನ್ನು ಒತ್ತಿ ತಿಳಿಸಿದ್ದಾರೆ ಎಂದರು.

ಭಾರತದ ವೈವಿಧ್ಯಮಯ ಧರ್ಮಗಳ ನಡುವೆ ಜೈನ ಧರ್ಮದ ಅಹಿಂಸೆ ಮತ್ತು ನೈತಿಕತೆಯ ತತ್ತ್ವಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿ. ಜೈನ್ ಸಮಾಜದವರು ಬಡವರಿಗೆ ಬಟ್ಟೆ ವಿತರಣೆ, ಕಡಿಮೆ ದರದಲ್ಲಿ ಊಟ ನೀಡುವುದು ಮತ್ತು ಅರವಟ್ಟಿಗೆಗಳ ಸ್ಥಾಪನೆಯಂತಹ ಮಹತ್ವದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಇನ್ನು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯ ಮಾಡಬೇಕು ಎಂದರು.

ಸರ್ಕಾರವು ಅಧಿಕೃತವಾಗಿ ಮಹಾವೀರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಮಹಾವೀರರ ತ್ಯಾಗ, ಅವರ ವಿಚಾರಧಾರೆಗಳು ಕೇವಲ ಓದಿಕೊಂಡವರಿಗೆ ಮಾತ್ರವಲ್ಲದೆ, ಇಡೀ ಸಮಾಜಕ್ಕೆ ತಲುಪಬೇಕು ಎಂಬ ಉದ್ದೇಶ ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಮುಂದಿನ ವರ್ಷಗಳಲ್ಲಿ ಮಹಾವೀರರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮದ ಮೂಲಕ ಉಪನ್ಯಾಸ ಆಯೋಜಿಸಲಾಗುವುದು ಎಂದು ಹೇಳಿದರು.



ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಮಹಾವೀರರು ಜಗತ್ತಿಗೆ ನೀಡಿದ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಮಹಾವೀರರ ಬೋಧನೆಯಂತೆ ದಾನ, ಧರ್ಮ ಮತ್ತು ಸತ್ಯದ ಹಾದಿಯಲ್ಲಿ ನಡೆಯುವ ಸಂಕಲ್ಪವನ್ನು ಈ ಸಮಾಜದವರು ಹೊಂದಿದ್ದಾರೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇರಾನ್, ಅಮೇರಿಕಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದಂತಹ ಜಾಗತಿಕ ಅಶಾಂತಿಯ ಸಂದರ್ಭದಲ್ಲಿ, ಮಹಾವೀರರು ಬೋಧಿಸಿದ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಅತ್ಯಂತ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇವಲ ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿ-ಪಕ್ಷಿ, ಕ್ರಿಮಿಕೀಟಗಳಿಗೂ ತೊಂದರೆಯಾಗದಂತೆ ಬದುಕಬೇಕು. ಉಸಿರಾಡುವಾಗಲೂ ಕ್ರಿಮಿಕೀಟಗಳಿಗೆ ಹಾನಿಯಾಗಬಾರದೆಂದು ಮಾಸ್ಕ್ ಧರಿಸುವ ಮತ್ತು ಪಾದರಕ್ಷೆಗಳಿಲ್ಲದೆ ನಡೆಯುವ ಸಂಪ್ರದಾಯಗಳನ್ನು ಜೈನ ಧರ್ಮದ ಅನುಯಾಯಿಗಳು ಅನುಸರಿಸುವ ಉನ್ನತ ತತ್ವಗಳನ್ನು ಇದೇ ಸಂದರ್ಭದಲ್ಲಿ ಪ್ರಶಂಶಿಸಿದರು.



ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂಭಾಷ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಜೈನ ಧರ್ಮವು ಸುಮಾರು 2625 ವರ್ಷಗಳ ಹಿಂದೆ ಸ್ಥಾಪನೆಯಾದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ ಎಂದು ತಿಳಿಸುವ ಮೂಲಕ ಭಗವಾನ್ ಮಹಾವೀರರ ಜೀವನ ಚರಿತ್ರೆ ಪ್ರಸ್ತುತಪಡಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಶ್ರೀ ಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ ವತಿಯಿಂದ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.



ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಜೈನ್ ಸಂಘದ ಅಧ್ಯಕ್ಷ ಸುರಜ್ ಮಲ್ ಜೈನ್ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST