ರಾಯಚೂರು : ಮನುಷ್ಯನ ಅಂಗಾಂಗಗಳಲ್ಲಿ ಹೃದಯಕ್ಕೆ ತನ್ನದೆ ಆದ ಮಹತ್ವವಿದ್ದು, ತಮ್ಮ ಜೀವಿತಾವಧಿಯಲ್ಲಿ ದುಶ್ಚಟಗಳಿಂದ ದೂರವಿರುವ ಮೂಲಕ ಹೃದಯಸ್ಥಂಭನ ತಡೆಯುವ ದಿಶೆಯಲ್ಲಿ ಹೃದಯ ಶ್ವಾಸಕೋಶ ಪುನರುಜ್ಜಿವನ ( ಸಿ.ಪಿ.ಆರ್ ) ವಿಧಾನವನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿ ವಿಭಾಗೀಯ ಸಹ ನಿರ್ದೇಶಕರು, ಡಾ ಶಂಕರಪ್ಪ ಮೈಲಾರಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಆರೋಗ್ಯ ಇಲಾಖೆಯ ಕೃಷ್ಣಾ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಯವರಿಗೆ ಸಿ.ಪಿ.ಆರ್ ಜಾಗೃತಿ ಸಪ್ತಾಹದ ಅಂಗವಾಗಿ ಪ್ರತಿಜ್ಞೆ ಭೋದಿಸಿ ಮಾತನಾಡಿ,
ಅತಿಯಾದ ಕರಿದ ಪದಾರ್ಥಗಳ ಸೇವನೆ, ಸಿಗರೇಟು, ಬೀಡಿ, ಮಧ್ಯ ಸೇವನೆ, ಹಾಗೂ ಹೆಚ್ಚು ಶ್ರಮವಿಲ್ಲದ ಕೆಲಸ ಮಾಡುವವರಲ್ಲಿ ಹೃದಯ ಸಂಬಂದಿ ಖಾಯಿಲೆಗಳು ಕಂಡು ಬರುತ್ತಿದ್ದು ಇದಕ್ಕಾಗಿ ವ್ಯಾಪಕ ಜಾಗೃತಿ ನೀಡಲು ತಿಳಿಸಿದರು.

ಉಪನಿರ್ದೇಶಕರು ಡಾ ಅಂಬಾರಾಯ ಎಸ್ ರುದ್ರವಾಡಿ ಮಾತನಾಡಿ ಯಾವುದೇ ವಯಸ್ಸಿನ ಮಿತಿಗಳಿಲ್ಲದೇ ಹೃದಯಾಘಾತಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ವೈದ್ಯಾಧಿಕಾರಿಗಳು ಆರೋಗ್ಯ ಸಿಬ್ಬಂದಿ ವರ್ಗದವರು, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಎಲ್ಲಾ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹೃದಯ ಶ್ವಾಸಕೋಶ ಪುನರುಜ್ಜೀವನ (ಸಿಆರ್ಪಿ) ಕುರಿತು ಪ್ರಾತ್ಯಕ್ಷತೆ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಿ ಜೊತೆಗೆ ಕರ್ನಾಟಕ ಘನ ಸರಕಾರವು ಜಾರಿಗೊಳಿಸಿರುವ ಡಾ ಪುನೀತ್ ರಾಜ್ಕುಮಾರ ಹೃದಯ ಜ್ಯೋತಿ ಯೋಜನೆ ಬಗ್ಗೆ ಹೆಚ್ಚು ಜಾಗೃತಿ ನೀಡಲು ತಿಳಿಸಿದರು.
ಕುಷ್ಠರೋಗ ರೋಗ ಪತ್ತೆಗಾಗಿ ಮನೆ ಬೇಟಿ ಸಮಿಕ್ಷೆ ಸಮುದಾಯದಲ್ಲಿ ಇನ್ನು ಇರುವ ಕುಷ್ಠರೋಗವನ್ನು ನಿರ್ಮೂಲನೆ ಮಾಡುವ ಕಾರ್ಯದಡಿ ಬರುವ ನವಂಬರ್ 03 ರಿಂದ 19 ನೇಯ ತಾರಿಖಿನವರೆಗೆ ಜಿಲ್ಲೆಯಾದ್ಯಂತ ಸಮಿಕ್ಷೆ ಕೈಗೊಳ್ಳಲಾಗುತ್ತಿದ್ದು, ಮೈಮೇಲೆ ತಿಳಿ ತಾಮ್ರ ವರ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಇದ್ದರೆ ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ನಂದಿತಾ ಎಮ್ ಎನ್ ವಿನಂತಿಸಿದರು.

ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ರೀಮ್ಸ್, ಪ್ರಭಾರಿ ಡೀನ್ ಡಾ ಅರವಿಂದ್ ಸಂಗಾವಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ವಿಜಯಶಂಕರ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ ನಂದಿತಾ ಎಮ್ ಎನ್, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ ಚಂದ್ರಶೇಖರಯ್ಯ ಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಡಾ ಶಿವಕುಮಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಮಹಮ್ಮದ್ ಶಾಕೀರ್,ಮನೋರೋಗ ತಜ್ಞರಾದ ಡಾ ಮನೋಹರ ಪತ್ತಾರ, ಸೇರಿದಂತೆ ತಾಲೂಕಾ ಅರೋಗ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಉಪಸ್ಥಿತರಿದ್ದರು. ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಸ್ವಾಗತಿಸಿ ವಂದಿಸಿದರು.